ಹಿಂದಿಯಲ್ಲೂ ಅಂತರ್ಜಾಲ ತಾಣದ ಹೆಸರು ಸಾಧ್ಯ
ಇಂಗ್ಲೀಷ್(ಲ್ಯಾಟಿನ್) ಅಕ್ಷರಗಳ ಹೊರತಾದ ಇತರ ಭಾಷೆಗಳಲ್ಲೂ ಅಂತರ್ಜಾಲ ತಾಣದ ವಿಳಾಸವನ್ನು ನೀಡಲು ಸಾಧ್ಯವಾಗಬೇಕೆಂಬುದು ಹಳೆಯ ಕನಸು.ಕಂಪ್ಯೂಟರಿನಲ್ಲಿ ಯುನಿಕೋಡ್ ಮೂಲಕ ಎಲ್ಲಾ ಭಾಷೆಗಳ ಬಳಕೆ ಸಾಧ್ಯವಾಗಿರುವಾಗ,ಅಂತರ್ಜಾಲ ತಾಣದ ವಿಳಾಸ A-Z,0-9 ಇವುಗಳಿಗೆ ಯಾಕೆ ಸೀಮಿತವಾಗಿರಬೇಕು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇದೆ. ಅಂತರ್ಜಾಲದ ನೂರಹದಿನಾರು ಕೋಟಿ ಬಳಕೆದಾರರು ಇಂಗ್ಲೀಷಿನಂತಹ ಲ್ಯಾಟಿನ್ ಲಿಪಿಯೇತರ ಬಳಸುವ ಭಾಷೆಗಳ ಬಳಕೆ ಮಾಡುತ್ತಿದ್ದರೂ, ಆ ಭಾಷೆಗಳಿಗೆ ಅಂತರ್ಜಾಲದ ವಿಳಾಸದಲ್ಲಿ ಪ್ರಾತಿನಿಧ್ಯ ಸಿಗದಿರುವುದು ನ್ಯಾಯವಲ್ಲ.ಇದೀಗ ಹಿಂದಿ,ಚೀನೀ,ಅರೇಬಿಕ್ ಅಂತಹ ಭಾಷೆಗಳನ್ನು ಹಲವು ನಿಯಮಗೊಳಿಗೆ ಒಳಪಟ್ಟು,ಯು ಆರ್ ಎಲ್ ಎಂದು ಕರೆಯಲ್ಪಡುವ ಅಂತರ್ಜಾಲದ ವಿಳಾಸದಲ್ಲಿ ಬಳಸಲು ಅನುಮತಿಸಲಾಗಿದೆ.ICANN ಎನ್ನುವ ಅಂತರ್ಜಾಲದ ಹೆಸರು ಮತ್ತು ಸಂಖ್ಯೆಗಳ ನಿಗಮವು ಈ ನಿರ್ಣಯ ಕೈಗೊಂಡಿದೆ. ಪ್ರತಿ ಭಾಷೆಗೂ ಅದರದ್ದೇ ಆದ ಅಂತ್ಯ ಪದವನ್ನು ಬಳಸಬೇಕು ಎನ್ನುವ ನಿಯಮವನ್ನು ವಿಧಿಸಲಾಗಿದೆ.ಕಾಂ, ನೆಟ್ ಮುಂತಾದ ಪದಗಳನ್ನು ಹೆಸರಿನ ಅಂತ್ಯದಲ್ಲಿ ಬಳಸಲು ಅನುಮತಿ ಇಲ್ಲ. ಈ ಬಳಕೆ ಮುಂದಿನ ವರ್ಷ ಸಾಧ್ಯವಾಗಬಹುದು.ನಿಧಾನವಾಗಿ ಎಲ್ಲ ಭಾಷೆಗಳಲ್ಲಿಯೂ ಅಂತರ್ಜಾಲ ವಿಳಾಸಕ್ಕೆ ಅನುಮತಿ ಸಿಗಬಹುದು.ಹೊಸ ಭಾಷೆಗಳ ಸೇರ್ಪಡೆ ಸಾಧ್ಯವಾಗಲು ಅಂತರ್ಜಾಲದ ಯುಆರೆಲ್ಗೆ ಸಮನಾದ ಸಂಖ್ಯಾವಿಳಾಸ ಒದಗಿಸುವ ಡಿಎನ್ಎಸ್ ಎನ್ನುವ ಸರ್ವರ್ ಕಾರ್ಯವಿಧಾನದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.
-------------------------------------
ಜಾಲಾಟ ಕಂಪ್ಯೂಟರ್ಗೆ ಅಪಾಯ ತಂದೀತು!
ಫೇಸ್ಬುಕ್,ಟ್ವಿಟರ್ ಅಂತಹ ಅಂತರ್ಜಾಲ ತಾಣಗಳು ಯುವಜನತೆಯ ಮೆಚ್ಚಿನ ತಾಣಗಳಾಗಿ ಬಿಟ್ಟಿವೆ.ಜನರು ಕಲೆತು,ತಮ್ಮ ಅನಿಸಿಕೆಯನ್ನು ಮುಕ್ತವಾಗಿ ಹೇಳಿಕೊಳ್ಳುವ,ಕಡತಗಳನ್ನು ಹಂಚಿಕೊಳ್ಳುವ ತಾಣವಾಗಿ ಬಿಟ್ಟಿದೆ.ಆದರೆ ಇಲ್ಲಿ ಲಭ್ಯವಾಗುವ ಅಂತರ್ಜಾಲ ತಾಣದ ಕೊಂಡಿಗಳನ್ನು ಸಿಕ್ಕಂತೆ ಕ್ಲಿಕ್ಕಿಸುವುದು ಅಪಾಯ ತಂದೀತು.ಹಿಂದೆಲ್ಲಾ,ಮಿಂಚಂಚೆಯ ಮೂಲಕ ಬರುತ್ತಿದ್ದ ಕಡತಗಳು ಅಪಾಯಕಾರಿ ವೈರಸ್ಗಳನ್ನು ಕಂಪ್ಯೂಟರಿಗೆ ಬಿತ್ತಿ,ಹಾನಿ ಮಾಡುತ್ತಿದ್ದ ಪ್ರಕರಣಗಳು ನಡೆದರೆ,ಈಗ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್,ಟ್ವಿಟರ್ ತಾಣಗಳು ಅಂತಹ ಕಡತಗಳನ್ನು ಹಬ್ಬಿಸುವ ಮೂಲಗಳಾಗಿ ಬಿಟ್ಟಿವೆ.ಗುರುತು ಪರಿಚಯವಿಲ್ಲದವರು ಅಲ್ಲಿ ಹಾಕಿರುವ ಕಡತಗಳನ್ನು ಕ್ಲಿಕ್ಕಿಸಿದರೆ,ವೈರಸ್ನಂತಹ ಕಂಪ್ಯೂಟರ್ ತಂತ್ರಾಂಶಗಳು ಚಾಲೂ ಆಗಿ,ಕಂಪ್ಯೂಟರನ್ನು ವಶಕ್ಕೆ ತೆಗೆದುಕೊಂಡು ಅದರ ಮೂಲಕ,ಇತರ ಕಂಪ್ಯೂಟರುಗಳನ್ನು ದಾಳಿ ಮಾಡುವ ಮೂಲಗಳಾಗುವುದಿದೆ.ಹಾಗಾಗಿ ಅಂತರ್ಜರ್ಜಾಲದಲ್ಲಿ ಟ್ವಿಟರ್ ಮತ್ತು ಫೇಸ್ಬುಕ್ಗಳಂತಹ ತಾಣಗಳಲ್ಲಿ ಸಿಕ್ಕ ಕಡತಗಳನ್ನು ತೆರೆಯದಿರುವುದು ಉತ್ತಮ. ಬಲ್ಲವರು,ನಂಬಿಕಸ್ತ ಮೂಲಗಳಿಂದ ಬಂದ ಕೊಂಡಿಗಳನ್ನು ಮಾತ್ರಾ ತೆರೆಯುವುದು ಕ್ಷೇಮ.
-------------------------------------------------------------------------------
ನಿಟ್ಟೆಗೆ ಸಂಶೋಧನಾ ನಿಧಿ
ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಾಜ್ಞಾನ ಇಲಾಖೆಯು ವಿದ್ಯಾಸಂಸ್ಥೆಗಳಲ್ಲಿ ಸಂಶೋಧನೆಗೆ ಒತ್ತು ನೀಡುವ ದೃಷ್ಟಿಯಿಂದ ಅನುದಾನ ನೀಡುತ್ತದೆ. ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯದ ಕಂಪ್ಯೂಟರ್ ವಿಭಾಗಕ್ಕೆ ಹದಿನಾರು ಲಕ್ಷ ರೂಪಾಯಿಗಳ ಅನುದಾನ ನೀಡಲಾಗಿದ್ದು,ಬಹುಸಂಸ್ಕಾರಕ ಹೊಂದಿದ ಕಂಪ್ಯೂಟರುಗಳ ಕಾರ್ಯದಕ್ಷತೆ ಹೆಚ್ಚಿಸುವ ತಂತ್ರಾಂಶ ಅಭಿವೃದ್ಧಿ ಮಾದರಿಗಳನ್ನು ಸಂಶೋಧಿಸಲು, ಈ ನಿಧಿಯನ್ನು ಬಳಸಬೇಕಾಗುತ್ತದೆ. ಕಂಪ್ಯೂಟರ್ ವಿಭಾಗದ ಮುಖ್ಯಸ್ಥ,ಕಾಲೇಜಿನ ಉಪಪ್ರಾಂಶುಪಾಲರಾದ ಡಾ,ನಿರಂಜನ್ ಚಿಪ್ಳೂಣ್ಕರ್ ಮತ್ತು ನೀಲಿಮಾ ಅವರು ಈ ಸಂಶೋಧನಾ ಕಾರ್ಯಾವನ್ನು ನಿರ್ವಹಿಸಲಿದ್ದಾರೆ.
----------------------------------------------------------------
ಲ್ಯಾಪ್ಟಾಪ್,ಕಾಗದ ಎರಡರಲ್ಲೂ ಬರೆಯಿರಿ!
ಹ್ಯಾನ್ಟೆಕ್ ಎನ್ನುವ ಕಂಪೆನಿಯು ಲ್ಯಾಪ್ಟಾಪ್ ಮತ್ತು ಕಾಗದ ಇವೆರಡರ ಮೇಲೆಯೂ ಬರೆವ ಟ್ಯಾಬ್ಲೋ ಎನ್ನುವ ಸಾಧನವನ್ನು ತಯಾರಿಸಿದೆ.ಇದನ್ನುಪಯೋಗಿಸಿ,ಸಾಮಾನ್ಯ ನೆಟ್ಬುಕ್ಗಳಲ್ಲೂ ಈ ಸೌಕರ್ಯ ಸಿಗುವಂತೆ ಮಾಡಬಹುದು.ಯುಎಸ್ಬಿ ಸಾಧನವನ್ನು ಕಂಪ್ಯೂಟರಿಗೆ ಸಿಕ್ಕಿಸಿ,ಇದರ ಬೆಳಕು ಬೀರುವ ವೆಬ್ಕ್ಯಾಮ್ ಅಂತಹ ಭಾಗವನ್ನು ತೆರೆಯ ಮೇಲ್ಬದಿ ಸಿಕ್ಕಿಸಿದರೆ ಸರಿ.ತೆರೆಯ ಮೇಲೆ ಟ್ಯಾಬ್ಲೋ ಬಳಸಿದಾಗ,ಇನ್ಫ್ರಾರೆಡ್ ಕಿರಣಗಳ ಸಹಾಯದಿಂದ ಟ್ಯಾಬ್ಲೋ ಸ್ಥಾನ ನಿರ್ಧರಿಸಿ,ಅದಕ್ಕನುಸಾರವಾಗಿ,ತೆರೆಯ ಮೇಲೆ ಬರೆದ್ದದ್ದು ಏನು ಎಂದು ಅಂದಾಜಿಸಲು, ಸಾಧನದ ತಂತ್ರಾಂಶಕ್ಕೆ ಸಾಧ್ಯವಾಗುತ್ತದೆ.ಚಿತ್ರಗಳನ್ನು ರಚಿಸಲು,ಕಡತಗಳ ಮೇಲೆ ಸಹಿ ಹಾಕಲು ಇದು ಉಪಯುಕ್ತ.
--------------------------------------------------------------
ಟ್ವಿಟರಿನಲ್ಲಿ "ಗುಂಪುಗುಳಿತನ"!
ಜನಮೆಚ್ಚುಗೆ ಗಳಿಸಿದ ಟ್ವಿಟ್ಟರ್ ಮೈಕ್ರೋಬ್ಲಾಗಿಂಗ್ ಸೇವೆಯು ದಿನದಿಂದ ದಿನಕ್ಕೆ ಹೊಸತನ ಮೈಗೂಡಿಸಿಕೊಳ್ಳುತ್ತಿದೆ.ಇದರಲ್ಲಿ ಜನರು ಬರೆದ ಕಿರುಸಂದೇಶಗಳಿಗೆ ಪ್ರತಿಕ್ರಿಯಿಸುವ ಸೌಲಭ್ಯ ಮೊದಲಿಗೆ ಇತ್ತು.ನಂತರದ ದಿನಗಳಲ್ಲಿ,ಮೆಚ್ಚಿಕೆಯಾದ ಸಂದೇಶಗಳನ್ನು ಮರು’ಪ್ರಸಾರ’ ಮಾಡುವ ಸೌಕರ್ಯವನ್ನು ನೀಡಲಾಯಿತು.ಚಿತ್ರಗಳನ್ನು,ಆಡಿಯೋ,ವಿಡಿಯೋಗಳನ್ನು ಸಂದೇಶದ ಜತೆ ಕೊಂಡಿಯಾಗಿ ನೀಡಲೂ ಸಾಧ್ಯವಾಯಿತು.
ಟ್ವಿಟರ್ನಲ್ಲಿ ಪ್ರತಿಯೊರ್ವನೂ ಇತರರನ್ನು ಹಿಂಬಾಲಿಸಲು ಸಾಧ್ಯವಿದೆ.ಕೇಂದ್ರ ಸಚಿವ ಶಶಿತರೂರು ಅವರಿಗೆ ಸದ್ಯ ನಾಲ್ಕು ಲಕ್ಷದಷ್ಟು ಹಿಂಬಾಲಕರಿದ್ದಾರೆ.ಅವರು ಸ್ವತ: ಹಿಂಬಾಲಿಸುವುದು ಕೇವಲ ಹದಿನಾಲ್ಕು ಜನವನ್ನಷ್ಟೇ.ಈ ವಾರ ಟ್ವಿಟರ್ ತನ್ನ ಬಳಕೆದಾರರಿಗೆ ವಿನೂತನ ಸೌಲಭ್ಯ ಒದಗಿಸಿದೆ.ಇದರ ಪ್ರಕಾರ,ಪ್ರತಿ ಬಳಕೆದಾರನೂ ತನ್ನ ಬಳಗದ ಜನರನ್ನು ಗುಂಪುಗಳಾಗಿ ವಿಂಗಡಿಸಬಹುದು.ತಮ್ಮ ಸಹೋದ್ಯೋಗಿಗಳು,ಸ್ನೇಹಿತರು,ಅಂತರ್ಜಾಲದ ಗೆಳೆಯರು ಹೀಗೆ ಹಲವು ಬಳಗಗಳನ್ನು ರಚಿಸಿಕೊಳ್ಳಬಹುದು.ಹೀಗೆ ಬಳಗಗಳನ್ನು ರಚಿಸಿಕೊಂಡರೆ,ಆ ಬಳಗದಿಂದ ಬಂದ ಸಂದೇಶಗಳನ್ನು ಒಟ್ಟಿಗೆ ವೀಕ್ಷಿಸಬಹುದು.
-------------------------------------------------------------------
ಮತ್ತೆ ಚಿಗುರಿದ ಸಂಪದ
ಕನ್ನಡಿಗರಿಗೆ ರಾಜ್ಯೋತ್ಸವದ ಕೊಡುಗೆಯಾಗಿ ಅಂತರ್ಜಾಲದ ಕನ್ನಡ ಸಮುದಾಯ ತಾಣ ಸಂಪದ ಮತ್ತೆ ಕಾರ್ಯಾರಂಭ ಮಾಡಿದೆ.ಹೆಚ್ಚಿದ ಬಳಕೆದಾರರ ಸಂಖ್ಯೆಗೆ ಸರಿಗಟ್ಟುವ ಸರ್ವರ್ ಅಳವಡಿಸಿ,ತಾಣವನ್ನು ಉತ್ತಮ ಪಡಿಸುವ ಕೆಲಸ ನಡೆದಿತ್ತು.ಎರಡು ತಿಂಗಳ ನಂತರ ರಾಜ್ಯೋತ್ಸವದ ಈ ದಿನ ತಾಣ ಮತ್ತೆ ತೆರೆದುಕೊಂಡು,ಕನ್ನಡಿಗರನ್ನು ಎದುರು ನೋಡುತ್ತಿದೆ.ಜಾಹೀರಾತು ಇಲ್ಲದೆ,ಯಾವ ಆದಾಯವಿಲ್ಲದೆ ತಾಣವನ್ನು ಮುನ್ನಡೆಸಲು ಕನ್ನಡಿಗರ ತನು-ಮನ-ಧನಗಳ ಸಹಕಾರ ಸಂಪದಕ್ಕೆ ಸಿಗಬೇಕಾಗಿದೆ.
udayavani
*ಅಶೋಕ್ಕುಮಾರ್ ಎ
Monday, November 02, 2009
Subscribe to:
Posts (Atom)



