Monday, September 21, 2009

ಮೂರ್ಖರ ಪೆಟ್ಟಿಗೆಯ ಮುಂದೆ ಹೊಸ ಅವತಾರ!

ಮೂರ್ಖರ ಪೆಟ್ಟಿಗೆಯ ಮುಂದೆ ಹೊಸ ಅವತಾರ!
ಟಿವಿಯ ಮುಂದೆ ಗರಬಡಿದವರಂತೆ ಕುಳಿತುಕೊಳ್ಳುವುದು ನಮ್ಮ ದಿನಚರಿಯ ಭಾಗವಾಗಿಬಿಟ್ಟಿದೆ.ಜತೆಗೆ ವಿಶೇಷ ಕನ್ನಡಕ ಧರಿಸುವುದೂ ಅನಿವಾರ್ಯವಾಗುವ ದಿನಗಳು ದೂರವಿಲ್ಲ.ಮೂರು ಆಯಾಮದ ಚಿತ್ರ ಪ್ರದರ್ಶಿಸುವ ಟಿವಿಗಳು ಮುಂದಿನ ವರ್ಷವೇ ಮಾರಾಟಕ್ಕೆ ಲಭ್ಯವಾಗುವ ಸುದ್ದಿ ಬಂದಿದೆ.ಇವನ್ನು ನೋಡುವಾಗ ಚಿತ್ರಗಳು ಮೂರು ಆಯಾಮದ ಅನುಭವ ಸಿಗಲು ಕನ್ನಡಕ ಧರಿಸಬೇಕು-ಕುಟ್ಟಿಚಾತನ್ ಸಿನೆಮಾವನ್ನು ವೀಕ್ಷಿಸಿದಾಗ ಧರಿಸಿದ್ದೆವಲ್ಲಾ ಹಾಗೆಯೇ!ಪ್ಯಾನಸೋನಿಕ್ ಮತ್ತು ಸೋನಿ ಕಂಪೆನಿಗಳು ಅಂತಹ ಟಿವಿ ತಯಾರಿಕೆಗೆ ಮುಂದಾಗಿವೆ.ನಮ್ಮೆರಡು ಕಣ್ಣುಗಳಿಗೆ ಪ್ರತ್ಯೇಕ ಚಿತ್ರಗಳನ್ನು ತೋರಿಸಿ,ನಮ್ಮ ಮಿದುಳು ಆ ಚಿತ್ರಗಳನ್ನು ಆಳದ ಮೂರನೇ ಆಯಾಮದ ಭ್ರಮೆಗೀಡಾಗುವಂತೆ ಮಾಡುವುದು ಮೂರು ಆಯಾಮದ ಟಿವಿಯ ಗುಟ್ಟು.ಆದರೆ ಇದಕ್ಕೆ ಬಹಳ ಹೆಚ್ಚು ಬ್ಯಾಂಡ್‌ವಿಡ್ತ್ ಅವಶ್ಯಕತೆಯಿದೆ.ಟಿವಿಯ ಪ್ರಸಾರ ತಂತ್ರಜ್ಞಾನದಲ್ಲೂ ಬದಲಾವಣೆ ಅಗತ್ಯ.ಮುಂದಿನ ವರ್ಷ ಪ್ರಾಯೋಗಿಕವಾಗಿ ಪ್ರಸಾರ ಆರ್ಂಭವಾದರೂ ಆಗಬಹುದು.ಟಿವಿ ಸೆಟ್‌ಗಳೂ ಬಹುದುಬಾರಿ ಆಗುವುದು ಗ್ಯಾರಂಟಿ.
-------------------------------------------------------
ಒಬ್ಬರ ಮಿಂಚಂಚೆ ಇನ್ನೊಬ್ಬರಿಗೆ!
ಗೂಗಲ್‌ನ ಸೇವೆಗಳು ನಿತ್ಯವಿನೂತನ ರೂಪ ಪಡೆಯುತ್ತಿರುತ್ತವೆ. ಅವರ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿರುವುದೇ ಇದರ ಹಿಂದಿನ ಗುಟ್ಟು. ಆದರೆ ಈ ಪ್ರಯೋಗಗಳು ಕೆಲವೊಮ್ಮೆ ಬಳಕೆದಾರರಿಗೆ ಸಂಧಿಗ್ಧ ಸೃಷ್ಟಿಸುವುದಿದೆ. ಈ ಸಲ ಒಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಅದರ ಅನುಭವವಾಯಿತು.ಕಂಪ್ಯೂಟರ್ ಜಾಲದ ವಿದ್ಯಾರ್ಥಿಗಳು ಒಬ್ಬರು ಮತ್ತೊಬ್ಬರ ಮಿಂಚಂಚೆ ನೋಡಲು ಸಾಧ್ಯವಾಯಿತು.ಕೆಲವರಿಗೆ ತಮ್ಮ ಮಿಂಚಂಚೆ ಖಾತೆಯ ಜತೆಗೆ ಇತರರ ಮಿಂಚಂಚೆ ಖಾತೆಗಳ ಇನ್‌ಬಾಕ್ಸ್‌ನ ದರ್ಶನವಾಯಿತು.ತಕ್ಷಣ ಇದನ್ನು ಗೂಗಲಿಗೆ ತಿಳಿಸಲಾಯಿತು.ಸಮಸ್ಯೆಯನ್ನು ಸರಿಪಡಿಸಲು ಮೂರು ದಿನಗಳು ಅಗತ್ಯವಾಯಿತು.ಕಂಪ್ಯೂಟರ್ ಜಾಲದ ಇನ್ನೂರು ವಿದ್ಯಾರ್ಥಿಗಳ ಪೈಕಿ ಇಪ್ಪತ್ತು ವಿದ್ಯಾರ್ಥಿಗಳಿಗೆ ಸಮಸ್ಯೆ ಕಾಡಿತು.ಸಮಸ್ಯೆ ಕಾಡಿದ ಖಾತೆಗಳನ್ನು ಅಮಾನತುಗೊಳಿಸಿದ ಕಾರಣ,ಮಿಂಚಂಚೆಗಳ ಖಾಸಗಿತನವನ್ನು ಕಾಪಾಡಲಾಯಿತು. ಆ ಬಳಕೆದಾರರಿಗೆ ಸೇವೆ ಮಾತ್ರಾ ಮೂರು ದಿನಗಳ ಕಾಲ ಲಭ್ಯವಿರಲಿಲ್ಲ.
---------------------------------------------------------------
ಬಾಹ್ಯಾಕಾಶದಲ್ಲಿ ಹೊಳೆದದ್ದೇನು?
ಉತ್ತರ ಅಮೆರಿಕಾದ ಗಗನದಲ್ಲಿ ತುಸು ಹೊತ್ತು ಹೊಳಪಿನಿಂದ ಕೂಡಿದ ದೃಶ್ಯಾವಳಿಯು ಕೆಲವರಿಗೆ ಗೋಚರಿಸಿತು.ಅದು ಮತ್ತೇನೂ ಅಲ್ಲ,ಡಿಸ್ಕವರಿ ಬಾಹ್ಯಾಕಾಶ ವಾಹನದಿಂದ ಬಿಡುಗಡೆಯಾದ ಬಾಹ್ಯಾಕಾಶಯಾನಿಗಳ ತ್ಯಾಜ್ಯ ಎಂದು ನಾಸಾ ಸ್ಪಷ್ಟಪಡಿಸಿದೆ.ಡಿಸ್ಕವರಿಯಿಂದ ಈ ರೀತಿ ತ್ಯಾಜ್ಯವನ್ನು ಗಗನದಲ್ಲಿ ವಿಸರ್ಜಿಸುವುದು ಇದೇ ಮೊದಲೇನು ಅಲ್ಲ. ಈ ಸಲ ಹಲವು ದಿನಗಳ ತ್ಯಾಜ್ಯವನ್ನು ಒಂದೇ ಸಾರಿಗೆ ವಿಸರ್ಜಿಸಿದ್ದು ಈ ರೀತಿ ಗೋಚರಿಸಲು ಕಾರಣವಾಯಿತು ಎಂದು ನಾಸಾ ಹೇಳಿದೆ.ಈ ಸಲದ ಯಾನದಲ್ಲಿ ಏಳು ಟನ್ ಆಹಾರ ಮತ್ತಿತ್ತರ ಅಗತ್ಯ ಸಾಮಾನುಗಳನ್ನು ಡಿಸ್ಕವರಿ ಬಾಹ್ಯಾಕಾಶ ಕೇಂದ್ರಕ್ಕೆ ಒಯ್ಯಿತು.ಏಳು ಜನರಿದ್ದ ವಾಹನ, ನಿಗದಿತ ದಿನಗಳಿಗಿಂತ ಒಂದು ದಿನ ತಡವಾಗಿ ಮರಳಿ ಬಂತು.ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಡಿಸ್ಕವರಿ ಸಂಪರ್ಕದ ಕೊಂಡಿಯಾಗಿಬಿಟ್ಟಿದೆ.
------------------------------------------------------------
ಐಬಿಎಂನಿಂದ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ
ಯು ಎಸ್‌ನ ಡ್ಯುಬುಕ್ ನಗರದಲ್ಲಿ ಸಾರಿಗೆ,ವಿದ್ಯುತ್ ಮತ್ತು ನೀರು ಪೂರೈಕೆ ಇತ್ಯಾದಿಗಳನ್ನು ಕಂಪ್ಯೂಟರ್ ಕೇಂದ್ರಿತ ವ್ಯವಸ್ಥೆಗಳ ಮೂಲಕ ನಿಯಂತ್ರಿಸಿ,ಇವುಗಳಲ್ಲಿ ದಕ್ಷತೆ ಹೆಚ್ಚಿಸಿ,ನಷ್ಟ ತಪ್ಪಿಸುವುದು ಮತ್ತು ಪರಿಸರಸ್ನೇಹೀಯಾಗಿಸಲು ಐಬಿಎಂ ಕಂಪೆನಿ ಬಯಸಿದೆ.ಇದರ ಅಂಗವಾಗಿ ಆಯ್ದ ಸ್ಥಳಗಳಲ್ಲಿ ಈಗಿರುವ ಮೀಟರ್‌ಗಳನ್ನು ಡಿಜಿಟಲ್ ಮೀಟರ್‌ಗಳಿಂದ ಬದಲಿಸಲಾಗುತ್ತದೆ. ಡಿಜಿಟಲ್ ನೀರು ಮೀಟರುಗಳು ನೀರು ಪೋಲಾಗುವುದನ್ನು ಕಂಡು ಹಿಡಿದು ಸೂಚನೆ ನೀಡಬಲ್ಲುವು.ಡ್ಯುಬುಕ್ ನಗರದ ಜನಸಂಖ್ಯೆ ಎಂಭತ್ತು ಸಾವಿರ.ಇಲ್ಲಿ ಐಬಿಎಂ ಕಂಪೆನಿಯ ಘಟಕವೊಂದು ಕೆಲಸ ಮಾಡುತ್ತಿದೆ.ಜತೆಗೆ ಇಲ್ಲಿನ ಆಡಳಿತ ಇ-ಆಡಳಿತದ ಬಗ್ಗೆ ಉತ್ಸಾಹ ಹೊಂದಿರುವುದು,ಇಲ್ಲಿ ಸ್ಮಾರ್ಟ್ ಸಿಟಿ ಅನುಷ್ಠಾನಕ್ಕೆ ತೊಡಗಲು ಮುಖ್ಯ ಕಾರಣ.
----------------------------------------------------------------------
ಮಳೆನೀರು ಇಂಗಿಸಿ
ಮಳೆನೀರನ್ನು ಇಂಗಿಸುವುದು ಹೇಗೆ?ಚಾವಣಿಯಲ್ಲಿ ಸಂಗ್ರಹವಾದ ನೀರನ್ನು ನೇರವಾಗಿ ಬಳಸಬಹುದೇ?ನಗರಗಳಿಗೆ ಸೂಕ್ತವಾದ ಮಳೆಕೊಯ್ಲು ವಿಧಾನ ಯಾವುದು?ಇಂತಹ ಪ್ರಶ್ನೆಗಳಿಗೆ ಉತ್ತರ ಬೇಕಾಗಿದ್ದರೆ,ಅವನ್ನು ನಿಮ್ಮ ಕಂಪ್ಯೂಟರ್ ಕೀಲಿಮಣೆ ಮತ್ತು ಮೌಸ್ ಕ್ಲಿಕ್‌ಗಳ ಮೂಲಕ ಪಡೆಯಲು ಅನುಕೂಲ ಕಲ್ಪಿಸುವ ಅಂತರ್ಜಾಲ ತಾಣ www.rainwaterclub.org ಆಗಿದೆ.ಇಲ್ಲಿ ಕಿರು ವಿಡಿಯೋ ಚಿತ್ರಗಳು,ಬರಹಗಳು ಇತ್ಯಾದಿ ಸಂಪನ್ಮೂಲಗಳು ಲಭ್ಯವಿವೆ.ಮಳೆನೀರನ್ನು ಸಮರ್ಥವಾಗಿ ಬಳಸಿಕೊಂಡ ಯಶಸ್ಸಿನ ಉದಾಹರಣೆಗಳನ್ನು ಇಲ್ಲಿ ಕೊಡಲಾಗಿದೆ.ಶಾಲೆಗಳಲ್ಲಿ,ಅಪಾರ್ಟ್‌ಮೆಂಟ್‌ಗಳಲ್ಲಿ,ಮನೆಗಳಲ್ಲಿ ಮಳೆ ನೀರನ್ನು ಬಳಸಿಕೊಳ್ಳಬಹುದಾದ ವಿವಿಧ ಮಾದರಿಗಳನ್ನು ಪ್ರತ್ಯಕ್ಷವಾಗಿ ಇಲ್ಲಿ ತೋರಿಸಲು ವಿಡಿಯೋ ಕೊಂಡಿಗಳನ್ನು ನೀಡಿದ್ದಾರೆ.
--------------------------------------------------------------------
ಕೃಷಿ ಸಂಪದ ಇ-ಪತ್ರಿಕೆ ಬಿಡುಗಡೆ


ಕೃಷಿಸಂಪದ ಇ-ಪತ್ರಿಕೆಯ ಮೊದಲ ಆವೃತ್ತಿಯನ್ನು ಸೆಪ್ಟೆಂಬರ್ 21ರಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಬಿಡುಗಡೆಯಾಗಲಿದೆ.ಹಿರಿಯ ಪತ್ರಕರ್ತ ನಾಗೇಶ್ ಹೆಗಡೆಯವರು ಇ-ಪತ್ರಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.ಅಡ್ಡೂರು ಕೃಷ್ಣರಾವ್ ಅವರು ಕೃಷಿರಂಗದ ಪಲ್ಲಟಗಳು ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ."ಕೃಷಿ,ಮಾಹಿತಿ ತಂತ್ರಜ್ಞಾನ ಮತ್ತು ನಾವು" ಎಂಬ ಬಗ್ಗೆ ಸಂವಾದವೂ ನಡೆಯಲಿದೆ.
---------------------------------------------------------------------
ಮಾತಾಡಲಾಗದವರಿಗೆ ಧ್ವನಿಯಾಗುವ ಐ-ಪೋನ್
ಡೌನ್‌ಸಿಂಡ್ರೋಮ್,ಬಾಯಿ ಮತ್ತು ಗಂಟಲಿನ ಕ್ಷೀಣತೆ ಉಂಟು ಮಾಡುವ ಕಾಯಿಲೆಗಳಿಂದ ಬಳಲುವವರಿಗೆ ತಮ್ಮ ಮನಸ್ಸಿನಲ್ಲಿದ್ದುದ್ದನ್ನು ಹೇಳಲು ಕಷ್ಟವಾಗುತ್ತದೆ.ಅವರು ಟೈಪಿಸಿದ್ದನ್ನು ಹೇಳುವ ಸಾಧನಗಳು ಸಿಗುತ್ತವೆ.ಆದರಿವು ದುಬಾರಿಯಾಗಿವೆ.ಐದರಿಂದ ಹತ್ತು ಸಾವಿರ ಡಾಲರುಗಳ ಬೆಲೆಯ ಇವುಗಳನ್ನು ಖರೀದಿಸುವುದು ಸಾಮಾನ್ಯರಿಗೆ ಸಾಧ್ಯವಾಗದು.ಈಗ ಐ_ಫೋನ್ ಮತ್ತು ನೆಟ್‌ಬುಕ್‌ಗಳಲ್ಲಿ ಸೂಕ್ತ ಲಿಪಿಯಿಂದ ಧ್ವನಿ ಹೊರಡಿಸುವ ತಂತ್ರಾಂಶಗಳನ್ನು ಅನುಸ್ಥಾಪಿಸಿ,ಇದೇ ಕಾರ್ಯಕ್ಕೆ ಬಳಸಿಕೊಳ್ಳುವುದು ಅಗ್ಗವಾಗುತ್ತದೆ.ಐನೂರು ಡಾಲರಿಗೆ ದೊರಕುವ ಐಫೋನ್ ಅಥವಾ ನೆಟ್‌ಬುಕ್ ಸಾಕಷ್ಟು ಸಮರ್ಥವಾಗಿ ಧ್ವನಿ ಮೂಡಿಸಲು ಬಳಕೆ ಮಾಡಬಹುದು.ಇವುಗಳು ಮಕ್ಕಳಿಗೆ ಮಾತ್ರ ಅಷ್ಟೊಂದು ಹೊಂದಾಣಿಕೆ ಆಗವು.ಮಕ್ಕಳು ಸಾಧನಗಳನ್ನು ಸರಿಯಾಗಿ ಹಿಡಿದುಕೊಳ್ಳದೆ,ಅವನ್ನು ಬೀಳಿಸಬಹುದು. ವಿಶೇಷ ಸಾಧನಗಳು ಪದೇ ಪದೇ ಬಿದ್ದರೂ ಹಾನಿಯಾಗದ ಹಾಗೆ ರಚಿತವಾಗಿರುತ್ತವೆ.ಆದರೆ ಐಪೋನ್ ಅಥವಾ ನೆಟ್‌ಬುಕ್ ಬಳಸುವಾಗ ಬಹಳ ಜಾಗರೂಕತೆ ಅಗತ್ಯ.
-----------------------------------------------------------------------udayavani
*ಅಶೋಕ್‌ಕುಮಾರ್ ಎ

0 comments:

 
googledc7e93ba1a7703ae.html