Monday, October 05, 2009

ಹೊಸ ಅಲೆ ಎಬ್ಬಿಸಿರುವ ಗೂಗಲ್ ವೇವ್

ಹೊಸ ಅಲೆ ಎಬ್ಬಿಸಿರುವ ಗೂಗಲ್ ವೇವ್
ಈ ವಾರ ಗೂಗಲ್ ವೇವ್ ಅನ್ನು ಬಳಕೆದಾರರಿಗೆ ಒದಗಿಸುವ ಮೂಲಕ ಗೂಗಲ್ ಗುಲ್ಲು ಎಬ್ಬಿಸಿದೆ.ಸದ್ಯಕ್ಕಿದು ಆಯ್ದ ಬಳಕೆದಾರರಿಗೆ ಮಾತ್ರಾ ಲಭ್ಯವಿದ್ದು,ಆಹ್ವಾನ ಮೂಲಕ ಮಾತ್ರ ಇದನ್ನು ಪಡೆಯಬಹುದು.ಜಿಮೇಲ್ ಆರಂಭವಾದಾಗ ಮಿಂಚಂಚೆ ಸೇವೆಯೂ ಹೀಗೆ ಆಹ್ವಾನದ ಮೂಲಕ ಮಾತ್ರಾ ಲಭ್ಯವಿತ್ತು.ಸಣ್ಣದರಲ್ಲಿ ಹೇಳಬೇಕೆಂದರೆ ಗೂಗಲ್ ವೇವ್,ಗೂಗಲ್ ಒದಗಿಸುತ್ತಿರುವ ಮಿಂಚಂಚೆ,ದಿಡೀರ್ ಸಂದೇಶ,ಬ್ಲಾಗಿಂಗ್,ನಕಾಶೆ,ವಿಡಿಯೊ,ಚಿತ್ರ ಇವೆಲ್ಲವುಗಳನ್ನು ಒಟ್ಟಿಗೆ, ಒಂದೇ ಕಡೆ ಒದಗಿಸುವ ಪ್ರಯತ್ನವಾಗಿದೆ.ಗೂಗಲ್ ಫೇಸ್‌ಬುಕ್ ಅಂತಹ ಸಾಮಾಜಿಕ ಸಮುದಾಯ ತಾಣಗಳಗೆ ಸ್ಪರ್ಧೆ ನೀಡಲು ಪ್ರಯತ್ನಿಸುತ್ತಿದೆ ಅಂದರೂ ತಪ್ಪಿಲ್ಲ.ಈ ಸೇವೆ ಬಳಸಿದಾಗ ಅಂತರ್ಜಾಲದ ಮೂಲಕ ವೈವಿಧ್ಯಮಯ ಸೇವೆಗಳು ಲಭ್ಯವಾಗುತ್ತವೆ.ಅಲ್ಲದೆ ಯೋಜನೆಯಲ್ಲಿ ಹಲವರು ಜತೆಗೂಡಿ ಕೆಲಸ ಮಾಡಲು ಅವಕಾಶ ಸಿಗುತ್ತದೆ.ಬೇರೆ ಬೇರೆ ಕಡೆ ಇರುವವರು ಒಟ್ಟಿಗೆ ಕುಳಿತಿರುವವರಂತೆ ಕೆಲಸ ಮಾಡುವ ಸೌಕರ್ಯವನ್ನಿದು ನೀಡುತ್ತದೆ.
------------------------------------------------------------------------------------------------------------------------

ಗಾಂಧಿ ಜಯಂತಿಗೆ ಗೂಗಲ್‍ನಲ್ಲೂ ಗಾಂಧಿ
ಗೂಗಲ್ ಶೋಧ ಪುಟದಲ್ಲಿ ದಿನದ ವಿಶೇಷವನ್ನು ತೋರ್ಪಡಿಸಲು ಗೂಗಲ್ ಯತ್ನಿಸುವುದು ಸಾಮಾನ್ಯವಾಗಿ ಬಿಟ್ಟಿದೆ.ಗಾಂಧಿ ಜಯಂತಿಯಂದು ಈ ಸಲ ಗಾಂಧಿಯವರ ಮುಖಾರವಿಂದವನ್ನು ಗೂಗಲಿನಲ್ಲಿ  ಕಾಣಿಸಿ ಮಹಾತ್ಮನಿಗೆ ಗೌರವ ಸಲ್ಲಿಸಿತು.ಈ ಹಿಂದೆ ರವೀಂದ್ರನಾಥ ಟಾಗೋರ್ ಕೂಡಾ ಗೂಗಲಿನ ಲೊಗೋದಲ್ಲಿ ಕಾಣಿಸಿಕೊಂಡಿದ್ದಿತ್ತು.ಇದನ್ನು ರಚಿಸುವ ಕಲಾವಿದರ ತಂಡವನ್ನೇ ಗೂಗಲ್ ಹೊಂದಿದೆ. ಅದೇ ರೀತಿ ಮಕ್ಕಳ ದಿನದ ಅಂಗವಾಗಿ ಮಕ್ಕಳಿಗೂ, ಗೂಗಲಿನ ಲೊಗೋವನ್ನು ವಿಶೇಷವಾಗಿ ಚಿತ್ರಿಸುವ ಸ್ಪರ್ಧೆ ಏರ್ಪಡಿಸಿದ್ದ ಬಗ್ಗೆ ಈ ಅಂಕಣದಲ್ಲಿ ಈ ಹಿಂದೆ ಓದಿದ ನೆನಪು ಬಂತೇ?
--------------------------------------------------------------------------------------------------------
ಅಮರರಾಗಲು ನ್ಯಾನೋಟೆಕ್ನಾಲಜಿಯ ಕೊಡುಗೆ


ನ್ಯಾನೋ ತಂತ್ರಜ್ಞಾನದ ಬಳಕೆಯಿಂದ ರೋಗಗಳನ್ನು ಗುಣಪಡಿಸುವುದು ಮತ್ತು ದೇಹ ಮುದಿತನಕ್ಕೀಡಾಗುವುದನ್ನು ತಡೆಯಬಹುದು ಎಂದು ಲಂಡನ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.ಆದರೆ ಇದನ್ನು ಸಾಧಿಸಲು ಇನ್ನೂ ಮೂವತ್ತು ವರ್ಷಗಳಾದರೂ ಬೇಕಾದೀತು.ಕ್ಯಾನ್ಸರ್ ಗಡ್ಡೆಗಳನ್ನು ಗುಣಪಡಿಸಲು ನ್ಯಾನೊ ತಂತ್ರಜ್ಞಾನವನ್ನೀಗಲೇ ಇಲಿಗಳಲ್ಲಿ ಯಶಸ್ವಿಯಾಗಿ ಬಳಸಲಾಗಿದೆ.ಮುಂದೆ ಈ ತಂತ್ರಜ್ಞಾನವನ್ನೇ ಬಳಸಿ,ಮಾನವನ ಕ್ಯಾನ್ಸರ್ ಗಡ್ಡೆಗಳನ್ನು ಕರಗಿಸಲು ಸಾಧ್ಯವಾಗಬಹುದು.ದೇಹದ ರಕ್ತದಲ್ಲಿ ಈಜಾಡುವ ನ್ಯಾನೋ ರೊಬೋಗಳನ್ನು ಅಭಿವೃದ್ಧಿಪಡಿಸಿದರೆ,ಗಾಯಗಳನ್ನು ಗುಣಪಡಿಸುವುದು ತುಂಬಾ ಸುಲಭ ಮತ್ತು ಸರಳವಾದೀತು.ದೇಹ ಮುದಿಯಾಗುವುದನ್ನು ತಡೆಯಲೂ ತಂತ್ರಜ್ಞಾನ ನೆರವಾಗುವ ನಿರೀಕ್ಷೆಯಿದೆ.ಆದರೂ ಅಪಘಾತವೋ ಮಿಂಚೋ ಮನುಷ್ಯನನ್ನು ಸಾಯಿಸಬಾರದೆಂದಿಲ್ಲ. ರೋಗಕ್ಕೆ ತುತ್ತಾಗಿ ಜನ ಸಾಯುವುದು ಇಲ್ಲವಾದೀತು!
--------------------------------------------------------------------------------------------------------------
ಐಐಟಿ ಸ್ಪರ್ಧೆಯಲ್ಲಿ ನಿಟ್ಟೆ ವಿದ್ಯಾರ್ಥಿಗಳ ಸಾಧನೆ
ಚೆನ್ನೈಯ ಐಐಟಿಯಲ್ಲಿ ಸಿಮ್ಯುಚಾಂಪ್ ಎನ್ನುವ ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಾರ್ತಿಕ್ ಕಸ್ತೂರಿ,ಕೆನ್ನೆತ್ ಮತ್ತು ಐಐಟಿಯ ರೈಸನ್ ದ್ವಿತೀಯ ಬಹುಮಾನ ಗಳಿಸಿ,ಐಐಟಿಯೇತರ ವಿದ್ಯಾಸಂಸ್ಥೆಗಳ ಪೈಕಿ ಮೊದಲನೆಯ ಸ್ಥಾನ ಗಳಿಸಿದ ಸಾಧನೆ ಮಾಡಿದ್ದಾರೆ.ಐಐಟಿ ಚೆನ್ನೈನ ವಿದ್ಯಾರ್ಥಿಗಳು ಮೊದಲ ಬಹುಮಾನ ಗೆದ್ದಿದ್ದಾರೆ.ಕಂಪ್ಯೂಟರ್ ತಂತ್ರಾಂಶದ ಮೂಲಕ ಅಣಕ ಪರಿಸ್ಥಿತಿಯನ್ನು ಸೃಷ್ಟಿ ಮಾಡುವ ಸ್ಪರ್ಧೆಯಲ್ಲಿ ನಿಟ್ಟೆಯ ವಿದ್ಯಾರ್ಥಿಗಳು ಬೆಂಕಿ ಅಪಘಾತದಲ್ಲಿ ಸಿಲುಕಿದವರನ್ನು ರಕ್ಷಿಸುವ ಅಣಕವಾಟದ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದರು.ಅಪಾಯಕ್ಕೀಡಾದ ಎಂಭತ್ತಏಳು ಜನರ ಪೈಕಿ ಮೂವತ್ತೇಳು ಜನರನ್ನು ರಕ್ಷಿಸಲು ಸಾಧ್ಯವಾದ ಪ್ರದರ್ಶನವನ್ನು ಅಣಕವಾಟದಲ್ಲಿ ನೀಡಲು ಸಾಧ್ಯವಾಯಿತು.
-----------------------------------------------------------------------------------------------------------

ಹೊಸ ವಿದ್ಯಾರ್ಥಿಗಳನ್ನಾಕರ್ಷಿಸಲು ಹಳೆವಿದ್ಯಾರ್ಥಿ ಬ್ಲಾಗುಗಳು
ತಮ್ಮ ಕಾಲೇಜಿಗೆ ಪ್ರವೇಶ ಗಳಿಸಲು ಬಯಸುವ ವಿದ್ಯಾರ್ಥಿಗಳು ಅಧಿಕೃತ ಮಾಹಿತಿಗಳನ್ನು ಮಾತ್ರಾ ಅವಲಂಬಿಸದೆ,ಹಳೆ ವಿದ್ಯಾರ್ಥಿಗಳ ಅನಿಸಿಕೆಗೇ ಹೆಚ್ಚಿನ ಮಹತ್ತ್ವ ಕೊಡುವುದನ್ನು ಕಾಲೇಜುಗಳ ಆಡಳಿತ ಮಂಡಳಿಗಳು ಗಮನಿಸಿವೆ. ಹೀಗಾಗಿ,ವಿದ್ಯಾರ್ಥಿಗಳು ಕಾಲೇಜಿನ ತಮ್ಮ ಅನುಭವದ ಬಗ್ಗೆ ಬರೆವ ಬ್ಲಾಗ್ ಬರವಣಿಗೆಗಳನ್ನು ತಮ್ಮ ಅಂತರ್ಜಾಲ ತಾಣಗಳಲ್ಲಿ ಪ್ರಕಟಿಸಲು ತೊಡಗಿದ್ದಾರೆ. ಈ ಬ್ಲಾಗ್‍ಗಳಿಗೆ ಯಾವುದೇ ಕತ್ತರಿ ಪ್ರಯೋಗ ಮಾಡದೆ ಇದ್ದಕ್ಕಿದ್ದ ಹಾಗೆ ಪ್ರಕಟಿಸಲಾಗುತ್ತದೆ.ಪ್ರವೇಶ ಬಯಸುವವರು ಎಷ್ಟೋ ಸಲ ಬ್ಲಾಗು ಬರೆದವರ ಜತೆ ಚರ್ಚಿಸಿ, ತೀರ್ಮಾನ ಕೈಗೊಳ್ಳುವುದೂ ಇದೆ.ಬರಹಗಳು ನೀರಸವಾಗಿರುವುದನ್ನು ತಪ್ಪಿಸಲು,ಬರವಣಿಗೆ ಬಗ್ಗೆ ಸ್ಪರ್ಧೆ ಏರ್ಪಡಿಸಿ,ವಿಜೇತರ ಬ್ಲಾಗ್ ಬರಹಗಳನ್ನು ಬಳಸುವುದು ಹೆಚ್ಚಿನ ಕಾಲೇಜುಗಳಲ್ಲಿ ಸಾಮಾನ್ಯ. ಅಮೆರಿಕಾದ ಎಂ ಐ ಟಿಯಂತಹ ಪ್ರತಿಷ್ಠಿತ ಸಂಸ್ಥೆಗಳೂ ಈ ತಂತ್ರ ಬಳಸುವುದೀಗ ಮಾಮೂಲಿ.
----------------------------------------------------------------------------------------------------------------
ಮುದುಡಿದ ಕೆಂಡಸಂಪಿಗೆ
ಕೆಂಡಸಂಪಿಗೆಯೆನ್ನುವುದು ಕನ್ನಡದ ಅಂತರ್ಜಾಲ ತಾಣ.ಅಬ್ದುಲ್ ರಶೀದ್ ಅವರ ನೇತೃತ್ವದಲ್ಲಿ ಹೊರಬರುತ್ತಿದ್ದ ಈ ತಾಣ,ಅನಂತಮೂರ್ತಿ,ವೈದೇಹಿಯಂತವರ ಬರವಣಿಗೆಗಳನ್ನು ಒಳಗೊಂಡು ಜನಪ್ರಿಯವಾಗಿತ್ತು.ಅತಿಥಿ ಸಂಪಾದಕರ ಮೂಲಕ ಕಾರ್ಯಾಚರಿಸುವ ಪ್ರಯೋಗವನ್ನೂ ತಾಣ ಇತ್ತೀಚೆಗೆ ಮಾಡುತ್ತಿತ್ತು.ಸಾಕಷ್ಟು ಜನಪ್ರಿಯವಾಗಿ,ಹೊಸ ಭರವಸೆಯನ್ನು ಹುಟ್ಟು ಹಾಕಿದ್ದ ತಾಣ ಇದೀಗ ಪ್ರಕಟಣೆಯನ್ನು ನಿಲ್ಲಿಸಿದೆ.ಅತ್ತ ಇನ್ನೊಂದು ಕನ್ನಡ ಸಮುದಾಯ ತಾಣ "ಸಂಪದ"ವೂ ಸರ್ವರ್ ಸಮಸ್ಯೆಯಿಂದ ಸದ್ಯ ಅಂತರ್ಜಾಲದಲ್ಲಿ ಸಿಗುತ್ತಿಲ್ಲ.ಅದರ ತಂತ್ರಾಂಶವನ್ನು ಬದಲಿಸಲಾಗುತ್ತಿದ್ದು,ಅದು ಮಾಮೂಲಿನಂತೆ ಲಭ್ಯವಾಗಲು ಇನ್ನೂ ಸಮಯ ಹಿಡಿದೀತು.ಸಂಪದ ಬಳಗವು ಪ್ರಕಟಿಸಿದ ಕೃಷಿ ಸಂಪದ ಇ-ಪತ್ರಿಕೆ www.krushi.sampada.net ತಾಣದಲ್ಲಿ ಡೌನ್‌ಲೋಡಿಗೆ ಲಭ್ಯವಿದ್ದು,ಈಗಾಗಲೇ ಐದೂವರೆ ಸಾವಿರ ಬಾರಿ ಇಳಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ.
--------------------------------------------------------------------------------------------------------------------
ಐಬಿಎಂನಿಂದ ಗೂಗಲ್‌ಗೆ ಸ್ಪರ್ಧೆ
ಐಬಿಎಂ ಕಂಪೆನಿಯು ಉದ್ಯಮಗಳಿಗೆ ಮಿಂಚಂಚೆ ಸೇವೆಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡಲು ಮುಂದೆ ಬಂದಿದೆ.ಪ್ರತಿ ಉದ್ಯೋಗಿಗೆ ಮಿಂಚಂಚೆ ಸೇವೆ ಒದಗಿಸಲು ಗೂಗಲ್ ಐವತ್ತು ಡಾಲರು ಬೆಲೆ ವಿಧಿಸಿದರೆ,ಐಬಿಎಂ ಅದನ್ನು ಮೂವತ್ತಾರು ಡಾಲರು ಬೆಲೆಯಲ್ಲಿ ನೀಡಲು ಮುಂದೆ ಬಂದಿದೆ. ನಿಜಕ್ಕಾದರೆ,ಗೂಗಲ್ ಒಬ್ಬನಿಗೆ ಇಪ್ಪತ್ತೈದು ಗಿಗಾಬೈಟ್ ಸ್ಮರಣಶಕ್ತಿ ಸಾಮರ್ಥ್ಯ ನೀಡುತ್ತದೆ- ಆದರೆ ಐಬಿಎಂ ನೀಡುವುದು ಬರೇ ಒಂದು ಗಿಗಾಬೈಟು ಸ್ಮರಣಕೋಶ ಮಾತ್ರ.ಗೂಗಲ್ ಮಿಂಚಂಚೆಯಲ್ಲಿ ಪದಸಂಸ್ಕಾರಕದಂತಹ ಅಗತ್ಯ ತಂತ್ರಾಂಶಗಳೂ ಲಭ್ಯವಾಗುತ್ತವೆ. ಐಬಿಎಂ ಇದಕ್ಕೆ ತಂತ್ರಾಂಶಗಳನ್ನು ಪ್ರತ್ಯೇಕವಾಗಿ ನೀಡುತ್ತದೆ.ಈ ತಂತ್ರಾಂಶಗಳು ಲೋಟಸ್ ನೋಟ್ಸ್ ಎಂದು ಲಭ್ಯವಾಗುತ್ತವೆ. ಆದರೂ ಮೇಲ್ನೋಟಕ್ಕೆ ಐಬಿಎಂ ಸೇವೆ ಅಗ್ಗವಾಗಿದ್ದು,ಆರ್ಥಿಕ ಹಿನ್ನಡೆಯ ಈ ದಿನಗಳಲ್ಲಿ ಆಕರ್ಷಕವಾಗಿ ಕಂಡ ಬಂದರೆ ಅಚ್ಚರಿಯಿಲ್ಲ.
------------------------------------------------------------------------------------------------------------------
ಬರಲಿದೆ ನೋ-ಒಪ್ ಅನ್ನುವ ಹೊಸ ಕಂಪ್ಯೂಟರ್ ಭಾಷೆ
ನೋ-ಓಪ್ ಎನ್ನುವುದು ಈಗ ಅಭಿವೃದ್ಧಿಯಾಗುತ್ತಿರುವ ಹೊಸ ಕಂಪ್ಯೂಟರ್ ಭಾಷೆ.ಈಗಿರುವ ಭಾಷೆಗಳು ಸಾಲವೇ? ಇನ್ನೂ ಹೊಸ ಭಾಷೆಗಳು ಯಾಕೇ ಎನ್ನುವುದು ನಿಮ್ಮ ಪ್ರಶ್ನೆಯೇ? ಜಾವಾದಂತಹ ಜನಪ್ರಿಯ ಭಾಷೆಗಳು ಇದ್ದರೂ ಬಳಸುವಾಗ ಒಮ್ಮೊಮ್ಮೆ ಅಡ್ಡಿ ಆತಂಕಗಳು ಬರುವುದಿದೆ. ಭಾಷೆಯಲ್ಲಿ ಹೊಸ ಸೌಕರ್ಯ ಇದ್ದಿದ್ದರೆ ತಂತ್ರಾಂಶ ಅಭಿವೃದ್ಧಿ ಕೆಲಸ ಇನ್ನೂ ಸುಲಭವಾದೀತು ಎಂದು ಇಂಜಿನಿಯರುಗಳಿಗೆ ಕಾಣುವುದಿದೆ. ತಂತ್ರಾಂಶವನ್ನು ಸುಲಭವಾಗಿ ಪರೀಕ್ಷಿಸಲು ಅನುಕೂಲತೆ ಕಲ್ಪಿಸುವಂತಹ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಈ ನೋ-ಒಪ್ ಭಾಷೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.ಗೂಗಲ್ ಮತ್ತು ಇನ್ನೂ ಹಲವು ಕಂಪೆನಿಗಳು ಕೈಗೂಡಿಸಿದ ಯೋಜನೆ ಇದಾಗಿದೆ.
ಉದಯವಾಣಿ 
*ಅಶೋಕ್‌ಕುಮಾರ್ ಎ

0 comments:

 
googledc7e93ba1a7703ae.html