Monday, July 27, 2009

ಒಂದೇ ದಿನದಲ್ಲಿ ಬೆಂಗಳೂರು ಸ್ವಚ್ಛ!

ಒಂದೇ ದಿನದಲ್ಲಿ ಬೆಂಗಳೂರು ಸ್ವಚ್ಛ!
ಯುರೋಪಿನ ಸಣ್ಣ ದೇಶವಾದ ಇಸ್ಟೋನಿಯಾದ ಬಹುಪಾಲು ಅರಣ್ಯ ಪ್ರದೇಶದಿಂದ ಆವರಿಸಿದೆ. ಆದರೆ ನಗರ ಪ್ರದೇಶದ ಕಸವನ್ನು ಈ ಕಾಡುಗಳಲ್ಲೇ ರಾಶಿ ಹಾಕುತ್ತಾ ಬಂದ ಕಾರಣ, ಇಡೀ ಪರಿಸರ ಗಬ್ಬೆದ್ದು ಹೋಗಿತ್ತು.ಇಡೀ ದೇಶವನ್ನು ಸ್ವಚ್ಛಗೊಳಿಸಲು ಸಾಮಾನ್ಯ ಪರಿಸ್ಥಿತಿಯಲ್ಲಿ ಸರಕಾರಕ್ಕೆ ಇಪ್ಪತ್ತೆರಡು ದಶಲಕ್ಷ ಯುರೋ ಖರ್ಚು ಬರುತ್ತಿತ್ತು. ಕಳೆದ ವರ್ಷದ ಒಂದು ಶುಭದಿನ ಇಡೀ ಇಸ್ಟೋನಿಯಾವನ್ನು ಸ್ವಯಂಸೇವಕರು ಸ್ವಚ್ಛಗೊಳಿಸಲು ಸಫಲರಾದರು. ಇದನ್ನು ಅನುಷ್ಠಾನಕ್ಕೆ ತರಲು ಐವತ್ತು ಸಾವಿರ ಜನ ಒಂದು ದಿನ ಶ್ರಮದಾನ ಮಾಡಿದರು. ಇದರ ಹಿಂದೆ ತಿಂಗಳುಗಳ ಯೋಜನೆಯಿತ್ತು. ಇಸ್ಟೋನಿಯಾದ ಸಾಧಕರು ಒಗ್ಗೂಡಿ ಕೆಲಸ ಮಾಡಿದರು.ಗೂಗಲ್ ಮ್ಯಾಪ್ ಜತೆ ತಂತ್ರಾಂಶಗಳನ್ನು ಬಳಸಿ, ಇಡೀ ದೇಶದಲ್ಲಿ ಹಬ್ಬಿರುವ ಕಸದ ರಾಶಿಗಳ ನಕ್ಷೆ ತಯಾರಿಸಲಾಯಿತು.ಸೆಲ್‌ಪೋನ್ ಕ್ಯಾಮರಾ ಬಳಸಿ,ಕಸದ ರಾಶಿಗಳ ಚಿತ್ರೀಕರಣ ನಡೆಸಿ,ಅವುಗಳ ಸ್ಥಾನವನ್ನು ಗೂಗಲ್ ಮ್ಯಾಪಿನಲ್ಲಿ ಗುರುತಿಸಲಾಯಿತು.ಇಸ್ಟೋನಿಯಾದಲ್ಲಿ ಅದುವರೆಗೆ ನಡೆದ ಅತಿದೊಡ್ಡ ಪ್ರಚಾರ ಅಭಿಯಾನ ನಡೆಸಲಾಯಿತು. ಅಲ್ಲಿನ ಪ್ರಸಿದ್ಧ ಜನರೆಲಾ, ಈ ಪ್ರಚಾರ ಕಾರ್ಯಕ್ಕೆ ತಮ್ಮ ಅಳಿಲ ಸೇವೆ ನೀಡಿದರು. ಪ್ರಚಾರಕ್ಕೆ ಸಾಧ್ಯವಿದ್ದ ಎಲ್ಲಾ ಮಾಧ್ಯಮಗಳನ್ನೂ ಬಳಸಲಾಯಿತು. ಸ್ವಯಂಸೇವಕರ ನೋಂದಾವಣೆಯನ್ನು ಅಂತರ್ಜಾಲ ಬಳಸಿ ಕೈಗೊಳ್ಳಲಾಯಿತು.ಕೊನೆಗೂ ಮೇ 3,2008ರಂದು ಐವತ್ತು ಸಾವಿರ ಜನರು ಐದೇ ಗಂಟೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸಿದರು. ಇದಕ್ಕೆ ತಗಲಿದ ವೆಚ್ಚ ಬರೇ ಅರ್ಧ ದಶಲಕ್ಷ ಯುರೋಗಳು!ಇದರ ವಿಡಿಯೋ ಕ್ಲಿಪ್ಪಿಂಗ್http://www.youtube.com/watch?v=A5GryIDl0qY&feature=player_embeddedನಲ್ಲಿ ಲಭ್ಯವಿದೆ.
ಈ ವರ್ಷ ಆಗಸ್ಟ್ ಹದಿನೈದು ಶನಿವಾರ.ಅಂದು ಏಳುನೂರೈವತ್ತು ಚದರ ಕಿಲೋಮೀಟರ್ ಹಬ್ಬಿರುವ ಬೆಂಗಳೂರು ನಗರವನ್ನು ಜನರೇ ಸೇರಿ ಸ್ವಚ್ಛಗೊಳಿಸುವುದು ಸರಕಾರೇತರ ಸಂಸ್ಥೆ ಅನಾನಿಮಸ್ ಇಂಡಿಯಾದ ಯೋಜನೆ.ಈ ಸ್ವಚ್ಛತಾ ಅಭಿಯಾನಕ್ಕೆ ನಮಗೆ ಇಸ್ಟೋನಿಯಾ ದೇಶದ ಮಾದರಿ ಹೇಗೂ ಇದೆ.ಜನರ ತನು-ಮನ-ಧನದ ಸಹಾಯ ಬೇಕಾಗಿದೆ. ಈಗಾಗಲೇ ಈ ಅಭಿಯಾನದ ಮುಖ್ಯ ತಂಡ ತನ್ನ ಕೆಲಸ ಆರಂಭಿಸಿದೆ. ಈ ದೊಡ್ಡ ಯೋಜನೆಯ ಅನುಷ್ಥಾನಕ್ಕಾಗಿ ಬೆಂಗಳೂರನ್ನು ಹದಿನೈದು ವಲಯಗಲಾಗಿ ವಿಭಾಗಿಸಲಾಗಿದೆ. ಪ್ರತಿ ವಲಯಕ್ಕೂ ಓರ್ವ ನಾಯಕನಿದ್ದು,ಈತ ತನ್ನ ವಲಯದ ಜನರ ಸಹಕಾರದೊಂದಿಗೆ ವಲಯದ ಸ್ವಚ್ಛತಾ ಕಾರ್ಯವನ್ನು ಅನುಷ್ಠಾನಕ್ಕೆ ತರಬೇಕಿದೆ.ಇದರಲ್ಲಿ ಭಾಗವಹಿಸಲು ನೋಂದಾಯಿಸಿಕೊಳ್ಳಲು http://www.cbengaluru.com/ ಅಂತರ್ಜಾಲ ತಾಣಕ್ಕೆ ಭೇಟಿಕೊಡಿ.
----------------------------------------------------------
ದೃಷ್ಟಿ ತೊಂದರೆಯಿದ್ದರೂ ಚಲಾಯಿಸಬಹುದಾದ ಕಾರು
ವರ್ಜಿನಿಯಾ ಟೆಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಣ್ಣಿನ ದೃಷ್ಟಿಯ ಸಮಸ್ಯೆಯಿದ್ದವ್ರೂ ಚಲಾಯಿಸಬಹುದಾದ ಕಾರನ್ನು ತಯಾರಿಸಿದ್ದಾರೆ. ಇದರಲ್ಲಿ ಲೇಸರ್ ಕಿರಣ ಮತ್ತು ಕ್ಯಾಮರಾ ಬಳಸಲಾಗಿದೆ. ಡ್ರೈವರನ ಮುಂದಿರುವ ತೆರೆಯಲ್ಲಿ ಎದುರಿನ ರಸ್ತೆಯ ದೃಶ್ಯ ಬರುತ್ತಿರುತ್ತದೆ. ಲೇಸರ್ ಕಿರಣಗಳು ಸುತ್ತಲಿನ ಅಡೆತಡೆಯನ್ನು ಗ್ರಹಿಸಲು ನೆರವಾಗುತ್ತವೆ. ಕಂಪ್ಯೂಟರ್ ತೆರೆಯ ದೃಶ್ಯವನ್ನು ಗ್ರಹಿಸಿ,ಚಾಲಕನಿಗೆ ಧ್ವನಿಯ ಮೂಲಕ ಸೂಚನೆಗಳನ್ನು ನೀಡುತ್ತದೆ. "ಎರಡು ಕ್ಲಿಕ್ ಶಬ್ದ ಬರುವಷ್ಟು ಸ್ಟಿಯರಿಂಗ್ ಚಕ್ರ ತಿರುಗಿಸು",ಎಂಬಂತಹ ಸೂಚನೆಗಳು ಸಿಗುತ್ತವೆ. ಕಾರನ್ನು ನಿಲ್ಲಿಸುವಾಗ ಬ್ರೇಕನ್ನು ಎಷ್ಟು ಒತ್ತಬೇಕು ಎನ್ನುವುದರ ಸೂಚನೆಯು ಚಾಲಕನ ವಿವಿಧ ದೇಹ ಭಾಗಗಳಿಗೆ ಸಿಗುವ ಕಂಪನದಿಂದ ಗೊತ್ತುಪಡಿಸಲು ಕಂಪ್ಯೂಟರ್ ತಂತ್ರಾಂಶ ನೆರವಾಗುತ್ತದೆ. ಬೆನ್ನಿಗೆ ಅಳವಡಿಸಿದ ಸ್ಪರ್ಶಕ ಅದುರಿದರೆ,ಅದರರ್ಥ ಒಡನೆಯೇ ಬ್ರೇಕ್ ಹಾಕು ಎಂದು. ಅದೇ ರೀತಿ ಭುಜದ ಬಳಿ ಕಂಪನವೆದ್ದರೆ,ನಿಧಾನವಾಗಿ ಬ್ರೇಕೊತ್ತು ಎಂಬ ಸೂಚನೆ ಕೊಟ್ಟಂತೆ.ರಸ್ತೆಯಲ್ಲಿ ವಾಹನ ಸಂದಣಿಯಿರುವ ಸಂದರ್ಭದಲ್ಲಿ ಈ ಕಾರನ್ನು ಚಲಾಯಿಸಿಕೊಂಡು ಹೋಗಲು ಸಮಸ್ಯೆಯಿದ್ದವರಿಗೆ ಸಾಧ್ಯವಾಗಲು ಇನ್ನೂ ಹೆಚ್ಚಿನ ಸುಧಾರಣೆ ಅಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.ಅದೇ ರೀತಿ,ಸಮಸ್ಯೆಯುಳ್ಳವರು ಕಾರು ಚಲಾಯಿಸಲು ಸದ್ಯದ ಶಾಸನಗಳು ಅನುಮತಿಯನ್ನು ನೀಡುವುದಿಲ್ಲ. ಆದರೂ ಇದು ಒಂದು ಸ್ತ್ಯುತ್ಯರ್ಹ ಪ್ರಯತ್ನ ಎನ್ನುವುದರಲ್ಲಿ ಅನುಮಾನವಿಲ್ಲ. ಐದು ವರ್ಷಗಳ ಹಿಂದೆ ಅಂಧರ ಪ್ರತಿಷ್ಠಾನವೊಂದು ಘೋಷಿಸಿದ, ಕಾರು ತಯಾರಿಸಿ ಸ್ಪರ್ಧೆಗೆ ವರ್ಜಿನಿಯಾ ಟೆಕ್ ವಿಶ್ವವಿದ್ಯಾಲಯ ಮಾತ್ರಾ ಸ್ಪಂದಿಸಿ,ಕೆಲಸ ಆರಂಭಿಸಿತ್ತು. ಅದರಫಲಶ್ರುತಿಯೇ ಈ ವಾಹನ.
--------------------------------------------
ಕಂಪ್ಯೂಟರ್ ಚಾಲೂ ಆಗಲು ಕಾಯಬೇಕಿಲ್ಲ!
ಕೋಣೆಯ ವಿದ್ಯುದ್ದೀಪದ ಸ್ವಿಚ್ ಹಾಕೊದೊಡನೆ ಬೆಳಗುತ್ತದೆ. ಟಿವಿಯ ರಿಮೋಟ್ ಅದುಮಿದ ಕೆಲ ಕ್ಷಣಗಳಲ್ಲೇ, ಟಿವಿ ಶುರು.ಆದರೆ ಕಂಪ್ಯೂಟರ್ ಮಾತ್ರಾ ಆಮೆಗತಿಯಲ್ಲೇ ಚಾಲೂ ಆಗುತ್ತದೆ. ಹೊಸದರಲ್ಲದು ಸ್ವಲ್ಪ ಚುರುಕಾಗಿದ್ದರೂ,ನೀವು ಹೆಚ್ಚು ಹೆಚ್ಚು ತಂತ್ರಾಂಶಗಳನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿದರೆ,ಅದು ನಿಧಾನವಾಗುತ್ತಾ ಹೋಗುತ್ತದೆ.ಇದಕ್ಕೆ ಪರಿಹಾರವೇನು?ಸ್ಪ್ಲಾಶ್-ಟಾಪ್ ಎಂಬ ಕಂಪೆನಿಯು ಕಂಪ್ಯೂಟರನ್ನು ದಿಡೀರ್ ಆಗಿ ಚಾಲೂ ಆಗಿಸುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ.ಕಂಪ್ಯೂಟರ್ ತಯಾರಕ ಕಂಪೆನಿಗಳಾದ ಏಸರ್,ಲೆನೊವೋ,ಎಚ್‌ಪಿ,ಎಲ್‌ಜಿಇವರುಗಳ ಜತೆ ಸಹಭಾಗಿತ್ವದಲ್ಲಿ ಅವರುಗಳ ನೆಟ್‌ಬುಕ್ ಮತ್ತು ನೋಟ್‌ಬುಕ್ ಕಂಪ್ಯೂಟರುಗಳಲ್ಲಿ ಈ ತಂತ್ರಜ್ಞಾನವನ್ನು ನೀಡಲಾಗುತ್ತಿದೆ.ಸದ್ಯ ದಶಲಕ್ಷ ಕಂಪ್ಯೂಟಿಂಗ್ ಸಾಧನಗಳಲ್ಲಿ ಬಳಕೆದಾರರು ಸ್ಪ್ಲಾಶ್‌ಟಾಪನ್ನು ಬಳಸಿ,ಲಾಭ ಪಡೆಯುತ್ತಿದ್ದಾರೆ.ಏಸರ್ ಮತ್ತು A.S.U.S. ಡೆಸ್ಕ್‌ಟಾಪ್‌ಗಳಲ್ಲೂ ತಕ್ಷಣ ಚಾಲೂ ಸೌಲಭ್ಯ ಸಿಗುತ್ತದೆ.
ಸ್ಪ್ಲಾಶ್‌ಟಾಪ್ ಒಂದು ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶದಂತೆಯೇ ರೂಪಿಸಲಾದ ತಂತ್ರಾಂಶ.ಈ ತಂತ್ರಾಂಶವನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಯೇ ಕೊಟ್ಟಿದ್ದರೆ ಅದನ್ನು ಬಳಸಲು ಬರುತ್ತದೆ.ನಿಗದಿತ ಬಟನ್ ಒತ್ತಿದೊಡನೆ,ಬಯೋಸಿನಿಂದ ಈ ತಂತ್ರಾಂಶ ಲೋಡ್ ಆಗಿ,ತೆರೆಯನ್ನು ತೋರಿಸುತ್ತದೆ.ಸ್ಪ್ಲಾಶ್‌ಟಾಪ್ ಬ್ರೌಸರ್ ತಂತ್ರಾಂಶವು ಒಡನೆಯೇ ಲಭ್ಯವಾಗುವುದರಿಂದ ಅಂತರ್ಜಾಲ ಸಂಪರ್ಕ ತಕ್ಷಣ ಲಭ್ಯವಾಗುತ್ತದೆ.ಹಾಗಿಲ್ಲದೆ ವಿಂಡೋಸ್,ಲಿನಕ್ಸ್ ವ್ಯವಸ್ಥೆ ಬೇಕಿದ್ದರೆ, ಮೊದಲ ಸ್ಕ್ರೀನಿನಲ್ಲಿಯೇ ಅವುಗಳನ್ನು ಆಯ್ದುಕೊಳ್ಳುವ ಆಯ್ಕೆ ಲಭ್ಯವಾಗುತ್ತದೆ.ನಾವು ಅನುಸ್ಥಾಪಿಸುವ ತಂತ್ರಾಂಶಗಳು ವಿಂಡೋಸ್,ಲಿನಕ್ಸ್ ವ್ಯವಸ್ಥೆಯಲ್ಲಿ ಸಿಗುವುದರಿಂದ,ಸ್ಪ್ಲಾಶ್‌ಟಾಪ್ ನಿಧಾನವಾಗುತ್ತಾ ಹೋಗುವುದಿಲ್ಲ.ಇನ್ನು ಮುಂದೆ,ಮೊದಲ ಪುಟದಲ್ಲೇ ಶೋಧಪುಟವನ್ನು ಪ್ರದರ್ಶಿಸಿ,ಬಳಕೆದಾರರು ಜಾಲಾಡಲು ಅನುಕೂಲ ಕಲ್ಪಿಸಲು ಕಂಪೆನಿ ಯೋಜಿಸುತ್ತಿದೆ. ಇದಕಾಗಿ ಯಾಹೂವಿನಂತಹ ಶೋಧ ಸೇವೆಗಳ ಜತೆ ಒಪ್ಪಂದ ಮಾಡಿಕೊಂಡು,ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಕಂಪೆನಿ ನಿರ್ಧರಿಸಿದೆ. ಈಗೀಗ ಬಳಕೆದಾರರು ಶೋಧ ಪುಟದಲ್ಲಿ ತಮಗೆ ಬೇಕಾದ ಶಬ್ದವನ್ನು ಟೈಪಿಸಿ,ಅಲ್ಲಿ ಬರುವ ಕೊಂಡಿಗಳನ್ನು ಕ್ಲಿಕ್ಕಿಸಿ,ಮುಂದುವರಿಯುವ ಹವ್ಯಾಸವನ್ನು ಹೊಂದಿರುವುದರಿಂದ ಈ ಅನುಕೂಲ ಕಲ್ಪಿಸಲು ಕಂಪೆನಿ ಚಿಂತಿಸಬೇಕಾಗಿದೆ.
udayavani
**ಅಶೋಕ್‌ಕುಮಾರ್ ಎ

Monday, July 20, 2009

ಸೈಕ್ಲಿಂಗ್ ಬಗ್ಗೆ ಬ್ಲಾಗ್

ಗ್ರಂಥಾಲಯಕ್ಕೆ ಜನರನ್ನು ಆಕರ್ಷಿಸಲು ಅಂತರ್ಜಾಲ ಸೇವೆ ಒದಗಿಸಿ!
ಅಲಾಸ್ಕಾದ ಹೂನಾ ಸಾವಿರ ಜನರು ವಾಸಿಸುವ ಪಟ್ಟಣ. ದ್ವೀಪದ ಭಾಗವಾದ ಈ ಪಟ್ಟಣದಲ್ಲಿ ಅಲೆಮಾರಿ ಜನಾಂಗದ ಜನರೇ ವಾಸವಾಗಿದ್ದಾರೆ. ಹೊರ ಜಗತ್ತಿನ ಜತೆ ಸಂಪರ್ಕಕ್ಕೆ ಅಂತರ್ಜಾಲವೇ ಪ್ರಮುಖ ಸಾಧನ. ಅಂತರ್ಜಾಲ ಸಂಪರ್ಕ ಲಭ್ಯವಿರುವುದು ಇಲ್ಲಿನ ಗ್ರಂಥಾಲಯದಲ್ಲಿ.ಆದ್ದರಿಂದಲೇ ಗ್ರಂಥಾಲಯಕ್ಕೆ ಜನರು ಬರುತ್ತಾರೆ.ಒಂದೋ ಅಲ್ಲಿನ ಡೆಸ್ಕ್‌ಟಾಪ್ ಕಂಪ್ಯೂಟರುಗಳ ಮೂಲಕ ಇಲ್ಲವೇ ತಮ್ಮ ಲ್ಯಾಪ್‌ಟಾಪುಗಳ ಮುಖಾಂತರ ಅಂತರ್ಜಾಲ ಜಾಲಾಡುತ್ತಿರುವುದು ಇಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ.ಅರ್ಧಕ್ಕರ್ಧ ಜನ ಅಂತರ್ಜಾಲಕ್ಕೋಸ್ಕರವೇ ಗ್ರಂಥಾಲಯಕ್ಕೆ ಬರುತ್ತಾರೆ.ಗ್ರಂಥಾಲಯಕ್ಕೆ ಧನಸಹಾಯ ಲಭ್ಯವಾಗ ಬೇಕಾದರೆ,ಜನರು ಅಲ್ಲಿಗೆ ಬರುತ್ತಿರುವುದು ಅಗತ್ಯ. ಹೀಗಾಗಿ ಜನರು ಅಂತರ್ಜಾಲ ಸೇವೆ ಪಡೆಯಲು ಇಲ್ಲಿಗೆ ಬರುತ್ತಿರುವುದರಿಂದ ಗ್ರಂಥಾಲಯವೂ ಮುಂದುವರಿದುಕೊಂಡು ಹೋಗುತ್ತಿದೆ.ಗ್ರಂಥಾಲಯಕ್ಕೆ ಜನರು ಬರದೆ,ಸೊರಗುತ್ತಿರುವ ಇಂದಿನ ದಿನಗಳಲ್ಲಿ,ಅಂತರ್ಜಾಲ ಸೇವೆಯ ಕಾರಣ ಗ್ರಂಥಾಲಯ ಜನರನ್ನು ಆಕರ್ಷಿಸುತ್ತಿರುವುದು ನಮ್ಮ ಸರಕಾರದ ಕಣ್ಣನ್ನೂ ತೆರೆಸಲಿ!
-------------------------------------------------------------
ಸೈಕ್ಲಿಂಗ್ ಬಗ್ಗೆ ಬ್ಲಾಗ್

ಬೆಂಗಳೂರಿನಲ್ಲೀಗ ಸೈಕಲ್‌ಗೆ ಶರಣಾಗಿ,ಮೋಟಾರು ವಾಹನಗಳನ್ನು ಹಿಂದಿಕ್ಕಲು ಸಾಧ್ಯವಂತೆ.ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನೀರಿನ ಬಗ್ಗೆ ಅಧ್ಯಯನ ಮಾಡುತ್ತಾ ಬೈಕಿನಲ್ಲಿ ಸಾಗಿ ಸುದ್ದಿ ಮಾಡಿದ್ದ ಸಿ.ಶಾರದಾ ಪ್ರಸಾದ್(ಸಿಎಸ್ಪಿ),"ತರಂಗ" ಪತ್ರಿಕೆಯ ಮುಖಪುಟದಲ್ಲೂ ಮಿಂಚಿದ್ದರು.ಈಗವರು ಸೈಕಲ್ ಯಾತ್ರೆಯ ಬಗ್ಗೆ ತಯಾರಿ ನಡೆಸುತ್ತಿದ್ದಾರೆ. ಡಿಸೆಂಬರಿನಲ್ಲಿ ನೀಲಗಿರಿಯತ್ತ ಸಾಗುವುದವರ ಯೋಜನೆ.ಈ ವರ್ಷದಲ್ಲಿ ಏಳು ಸಾವಿರ ಕಿಲೋಮೀಟರ್ ದೂರ ಸೈಕಲ್‌ನಲ್ಲಿ ಸಾಗುವದವರ ಯೋಜನೆ-ಹಾಗಾಗಿ ದಿನಾಲೂ ಕಚೇರಿಗೂ ಸೈಕಲಿನಲ್ಲೇ ಸಾಗುತ್ತಾರೆ. ಈಗಾಗಲೇ ಆರು ಸಾವಿರ ರುಪಾಯಿಯ ಪೆಟ್ರ‍ೋಲ್ ಉಳಿಸಿ, 190ಕೆಜಿ ಅಂಗಾರಾಮ್ಲ ಬಿಡುಗಡೆಯಾಗುವುದನ್ನು ತಡೆದಿದ್ದಾರಂತೆ.ಅವರ ಸೈಕ್ಲಿಂಗ್ ಅನುಭವ-ಯೋಜನೆಗಳನ್ನು ನೋಡಲು http://sharadaprasad.name/ ನೋಡಿ.
------------------------------------------
ಟ್ವಿಟರ್ ಮೂಲಕ ಕಾದಂಬರಿ
ತನ್ನ "ದ ಫ್ರೆಂಚ್ ರೆವಲ್ಯೂಶನ್"ಕಾದಂಬರಿಯನ್ನು ಪ್ರಕಟಿಸಲು ಪ್ರಕಾಶಕರು ಯಾರೂ ಮುಂದೆ ಬರದಿದ್ದಾಗ ಅಮೆರಿಕಾದ ಬರಹಗಾರ ಮ್ಯಾಟ್ ಸ್ಟಿವರ್ಟ್ ಅದನ್ನು ಟ್ವಿಟರ್ ಮೂಲಕ ಪ್ರಕಟಿಸಲು ನಿರ್ಧರಿಸಿದ್ದಾರೆ. ಒಂದು ಟ್ವಿಟರ್ ಸಂದೇಶದಲ್ಲಿ ನೂರನಲುವತ್ತು ಅಕ್ಷರಗಳನ್ನಷ್ಟೇ ಅವಕಾಶ ಇರುವುದು ನಿಮಗೆ ಗೊತ್ತೇ ಇದೆ. ಹಾಗಾಗಿ ಇಡೀ ಕಾದಂಬರಿಯನ್ನು ಪ್ರಕಟಿಸಲು ಮೂರುಸಾವಿರದ ಏಳುನೂರು ಟ್ವಿಟರ್ ಸಂದೇಶ ಪ್ರಕಟಿಸಬೇಕಾಗುತ್ತದೆ. ತನ್ನ ಕಾದಂಬರಿಯನ್ನು ಓದಲೋಸುಗ, ತನ್ನೆಲ್ಲಾ ಸಂದೇಶಗಳ ಬೆನ್ನು ಹಿಡಿದು ಓದಲು ಹೆಚ್ಚು ಜನರಿಗೆ ಸಾಧ್ಯವಾಗದು ಎಂದರಿವಿದ್ದರೂ,ದಾಖಲೆಗೋಸ್ಕರವೇ ಟ್ವಿಟರ್ ಮೂಲಕ ಕಾದಂಬರಿ ಪ್ರಕಟಿಸಲು ಸ್ಟಿವರ್ಟ್ ಬಯಸಿದ್ದಾರೆ.
--------------------------------------
ಟಿವಿ ರಿಮೋಟ್ ಮೂಲಕ ಫೋನ್ ಕರೆ
ಟಿವಿಯನ್ನು ಕುಳಿತಲ್ಲಿಂದಲೇ ನಿಯಂತ್ರಿಸಲು ಬಳಸುವ ರಿಮೋಟ್ ಸಾಧನದ ಮೂಲಕ ದೂರವಾಣಿ ಕರೆ ಮಾಡುವುದೇ? ಹೌದು, ಅಂತರ್ಜಾಲ ಆಧಾರಿತ ಟಿವಿ(ಐಪಿಟಿವಿ) ನಿಜವಾದರೆ ಇಂತಹ ಸೇವೆ ಒದಗಿಸುವುದು ಮೈವೇ ಎನ್ನುವ ಕಂಪೆನಿಯ ಯೋಜನೆ. ಆದರೆ ಇದು ಸಾಧ್ಯವಾಗಲು ಫೈಬರ್ ಜಾಲಗಳು ಮನೆ ಮನೆಗೂ ಹಬ್ಬ ಬೇಕು. ಟಿವಿಯ ಸೆಟ್ ಟಾಪ್ ಬಾಕ್ಸ್ ಮೂಲಕ ಟಿವಿ ಪ್ರಸಾರ ಜತೆಗೆ ಇತರ ಮೌಲ್ಯಾಧಾರಿತ ಸೇವೆಗಳೂ ಲಭ್ಯವಾಗುತ್ತವೆ. ರಿಮೋಟ್ ಸಾಧನದಲ್ಲಿ ಬ್ಲೂಟೂತ್ ನಿಸ್ತಂತು ಸೇವೆ ಒದಗಿಸಿ,ಮೈಕ್ ಮತ್ತು ಹೆಡ್‌ಫೋನ್ ಇದರಲ್ಲಿ ಅಳವಡಿಸಿ, ಅಂತರ್ಜಾಲದ ಮೂಲಕ ದೂರವಾಣಿ ಕರೆಗಳಿಗೆ ಅವಕಾಶ ನೀಡುವುದು ಯೋಜನೆ. ಜತೆಗೆ ಎರಡರಿಂದ ಮೂರು ಸಾವಿರ ದರ ವಿಧಿಸಿ, ಇನ್ನೂರು ಗಂಟೆಯ ಟಿವಿ ಕಾರ್ಯಕ್ರಮಗಳನ್ನು ಒದಗಿಸಲೂ ಅದು ತಯಾರಿ ನಡೆಸಿದೆ.
--------------------------------------------------
ಇದು ನೆಟ್ ಬುಕ್‌ಗಳ ಕಾಲ
ಆರ್ಥಿಕ ಹಿನ್ನಡೆಯಿಂದ ಡೆಸ್ಕ್‌ಟಾಪ್ ಹಾಗೂ ಲ್ಯಾಪ್‌ಟಾಪ್ ಕಂಪ್ಯೂಟರುಗಳ ಮಾರಾಟಕ್ಕೆ ಹಿನ್ನಡೆಯಾಗಿದೆ.ಇತ್ತೀಚೆಗಿನ ವರ್ಷಗಳಲ್ಲಿ ಹೀಗಾಗುತ್ತಿರುವುದು ಇದೇ ಮೊದಲಬಾರಿ.ಕಳೆದ ವರ್ಷ ಭಾರತದಲ್ಲಿ ಮಾರಾಟವಾದ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗಳ ಸಂಖ್ಯೆ ಹತ್ತಿರ ಹತ್ತಿರ ಏಳು ದಶಲಕ್ಷ.ಅದರ ಹಿಂದಿನ ವರ್ಷ ಸುಮಾರು ಏಳೂವರೆ ದಶಲಕ್ಷ ಕಂಪ್ಯೂಟರುಗಳು ಖರ್ಚಾಗಿದ್ದುವು.ಹಾಗೆ ನೋಡಿದರೆ ಲ್ಯಾಪ್‌ಟಾಪ್ ಮತ್ತು ನೋಟ್‌ಬುಕ್‌ಗಳು ಹದಿನೇಳು ಶೇಕಡಾ ಹಿನ್ನಡೆ ಅನುಭವಿಸಿದರೆ,ಡೆಸ್ಕ್‌ಟಾಪ್ ಕಂಪ್ಯೂಟರುಗಳು ಶೇಕಡಾ ನಾಲ್ಕು ಕುಸಿತ ಅನುಭವಿಸಿದುವು.ಈಗ ಜನರು ನೆಟ್‌ಬುಕ್ ಕಂಪ್ಯೂಟರುಗಳತ್ತ ವಾಲಿದ್ದಾರೆ. ಈ ಮಿತವ್ಯಯಿ ಕಂಪ್ಯೂಟರುಗಳು ಇಪ್ಪತ್ತು ಸಾವಿರದ ಬೆಲೆಯಲ್ಲಿ ಲಭ್ಯವಿರುವುದು ಮಾತ್ರವಲ್ಲದೆ,ಅತ್ತಿತ್ತ ಒಯ್ಯಲು ಅನುಕೂಲವಾದ ಸಣ್ಣಗಾತ್ರದವು.ನಿಸ್ತಂತು ಜಾಲಕ್ಕೆ ಸಂಪರ್ಕಿಸುವ ವ್ಯವಸ್ಥೆ ಇದ್ದು,ಅಂತರ್ಜಾಲ ಜಾಲಾಡುವ ಸೌಕರ್ಯ ನೆಟ್‌ಬುಕ್‌ಗಳು ಒದಗಿಸುತ್ತವೆ.ಕಳೆದವರ್ಷ ಎಪ್ಪತ್ತೈದು ಸಾವಿರ ನೆಟ್‌ಬುಕ್‌ಗಳಿಗೆ ಬೇಡಿಕೆ ಬಂದಿತ್ತು.ಇನ್ನು ಮುಂದಿನ ವರ್ಷ ಗೂಗಲ್ ಕ್ರೋಮ್ ಆಪರೇಟಿಂಗ್ ವ್ಯವಸ್ಥೆ ಬಿಡುಗಡೆಯಾದರೆ,ಅದನ್ನು ಹೊತ್ತು ತರುವ ಹೊಸ ನೆಟ್‌ಬುಕ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ,ನೆಟ್‌ಬುಕ್‌ಗಳು ಇನ್ನಷ್ಟು ಜನಪ್ರಿಯವಾಗುವುದರಲ್ಲಿ ಅನುಮಾನವಿಲ್ಲ.
ಮೊದಮೊದಲು ಈ ನೆಟ್‌ಬುಕ್‌ಗಳಲ್ಲಿ ಲಿನಕ್ಸ್ ವ್ಯವಸ್ಥೆ ಇದ್ದರೆ,ಈಗೀಗ ಜನರು ವಿಂಡೋಸ್ ವ್ಯವಸ್ಥೆಯನ್ನೇ ಇಷ್ಟಪಡುವುದು ಕಂಡು ಬಂದಿದೆ. ಇದಕ್ಕೆ ಕಾರಣ ವಿಂಡೋಸ್ ವ್ಯವಸ್ಥೆ ಲಿನಕ್ಸ್‌ಗಿಂತ ಬಳಸಲು ಹೆಚ್ಚು ಸುಲಭ ಎನ್ನುವುದಲ್ಲ-ಹಾಗೆಂಬ ಭಾವನೆ ಬೇರೂರಿರುವುದಷ್ಟೇ ಆಗಿದೆ.
-----------------------------------------
ವಿದ್ಯುತ್ ಸಂಪರ್ಕದ ಮೂಲಕವೂ ಕಂಪ್ಯೂಟರ್ ಮಾಹಿತಿ ಕದಿಯಬಹುದು
ಬ್ಯಾಂಕ್ ಮತ್ತಿತರ ಖಾತೆಗಳನ್ನು ಆನ್‌ಲೈನಿನಲ್ಲಿ ಸಂಪರ್ಕಿಸಿದಾಗ,ಪಾಸ್‌ವರ್ಡ್ ಕೇಳುವ ಮೂಲಕ,ಭದ್ರತೆ ನೀಡುವುದು ಸಾಮಾನ್ಯ. ಆದರೆ ಬಳಕೆದಾರ ಯಾವ ಕೀಲಿಗಳನ್ನು ಕುಟ್ಟಿದ್ದ ಎಂಬುದನ್ನು ದಾಖಲಿಸುವ ತಂತ್ರಾಂಶಗಳನ್ನು ಕಂಪ್ಯೂಟರಿನಲ್ಲೆ ಹಾಕಿಡುವ ಮೂಲಕ,ಅಂತಹ ಮಾಹಿತಿಯನ್ನು ಕದಿಯುವವರಿದ್ದಾರೆ. ಮಾಹಿತಿ ಕದಿಯಲು ಕಂಪ್ಯೂಟರ್‌ನ ವಿದ್ಯುತ್ ಸಂಪರ್ಕವನ್ನು ಬಳಸಬಹುದೇ ಎಂಬುದನ್ನು ಸಂಶೋಧಕರು ಪ್ರಯತ್ನಿಸಿ,ಯಶ ಕಂಡಿದ್ದಾರೆ.ಕಂಪ್ಯೂಟರಿನ ಕೀಲಿ ಮಣೆಯನ್ನು ಕಂಪ್ಯೂಟರಿಗೆ ಸಂಪರ್ಕಿಸಲು PS/2 ಕೇಬಲ್ ಬಳಸುವುದಿದೆ.ಇದರಲ್ಲಿ ಆರು ತಂತಿಗಳು ಇರುತ್ತವೆ. ಈ ತಂತಿಗಳಿಗೆ ಹೆಚ್ಚು ಸುರಕ್ಷಾ ಕವಚವೂ ಇಲ್ಲ. ಹೀಗಾಗಿ ಒಂದು ತಂತಿಯಲ್ಲಿ ಹರಿಯುವ ವಿದ್ಯುತ್ ಏರುಪೇರಾದರೆ, ಉಳಿದವಲ್ಲೂ ಅದು ಪರಿಣಾಮ ಬೀರುತ್ತದೆ. ಇದರಲ್ಲಿರುವ ಒಂದು ತಂತಿ ಭೂಮಿಗೆ ಸಂಪರ್ಕಿಸುವ ಅರ್ಥ್ ತಂತಿ. ಹೀಗಾಗಿ ಕಂಪ್ಯೂಟರಿನ ವಿದ್ಯುತ್ ಸಾಕೆಟಿನ ತಂತಿಗೆ ಸಂಪರ್ಕ ಹೊಂದುತ್ತದೆ.ಕೀಲಿ ಮಣೆಯನ್ನು ಕುಟ್ಟಿದಾಗ ಉಂಟಾಗುವ ವಿದ್ಯುತ್ ಪ್ರವಾಹದಲ್ಲಿನ ವ್ಯತ್ಯಾಸ, ಅರ್ಥ್ ತಂತಿಯಲ್ಲೂ ಪರಿಣಾಮ ಬೀರುತ್ತದೆ.ಇದನ್ನು ಓಸಿಲೋಸ್ಕೋಪ್ ಸಾಧನದ ಸಹಾಯದಿಂದ ಪರಿಶೀಲಿಸಿ,ಯಾವ ಕೀಲಿಯನ್ನು ಒತ್ತಲಾಯಿತು ಎಂದು ಊಹಿಸಲು ಸಂಶೋಧಕರಿಗೆ ಸಾಧ್ಯವಾಯಿತು. ಇದನ್ನು ಕಂಪ್ಯೂಟರಿನಿಂದ ಹತ್ತು-ಹದಿನೈದು ಮೀಟರ್ ದೂರದಿಂದಲೂ ಮಾಡಬಹುದು. ಖದೀಮರು ಮನಸ್ಸು ಮಾಡಿದರೆ,ಮಾಹಿತಿ ಕದಿಯಲು ಹಲವು ದಾರಿಗಳಿವೆ ಎನ್ನುವುದನ್ನು ಬಳಕೆದಾರರು ಗಮನದಲ್ಲಿಡಬೇಕು.

*ಅಶೋಕ್‌ಕುಮಾರ್ ಎ

udayavani

Monday, July 13, 2009

ನ್ಯಾನೋ ಗಣೇಶ ಎಂಬ ರೈತ ಮಿತ್ರ

ನ್ಯಾನೋ ಗಣೇಶ ಎಂಬ ರೈತ ಮಿತ್ರ
ಆಗಾಗ ವಿದ್ಯುತ್ ಕಡಿತದಿಂದ ಎಲ್ಲರಿಗಿಂತ ಹೆಚ್ಚು ತ್ರಾಸ ಪಡುವವರು ಭಾರತದ ರೈತರೇ ಎನ್ನುವುದರಲ್ಲಿ ಅನುಮಾನವಿಲ್ಲ.ದೂರದಲ್ಲಿರುವ ಹೊಲ,ತೋಟದ ಪಂಪು ಶೆಡ್‌ಗೆ ಧಾವಿಸಿ,ಪಂಪನ್ನು ಚಾಲೂ ಮಾಡಿ ಮನೆಗೆ ಬರುವಷ್ಟರಲ್ಲಿ ವಿದ್ಯುತ್ ಕಡಿತವಾದರೆ, ಮತ್ತೆ ವಿದ್ಯುತ್ ಪೂರೈಕೆ ಆರಂಭವಾದಾಗ ಶೆಡ್‌ಗೆ ಧಾವಿಸುವ ಪ್ರಮೇಯ.ಹಗಲು-ರಾತ್ರಿ ಈ ಓಡಾಟದಲ್ಲೇ ರೈತ ಅರೆಜೀವವಾದರೆ ಅಚ್ಚರಿಯಿಲ್ಲ. ದೂರದಿಂದಲೇ ಪಂಪ್ ಚಾಲೂ-ಬಂದ್ ಮಾಡಲು ತಂತ್ರಜ್ಞಾನ ಬಳಸಬಾರದೇಕೆ ಎನ್ನುವುದರ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿವೆ.ಈಗ ಸೆಲ್‌ಪೋನ್ ಬಳಸಿ ಅದನ್ನು ಸಾಧ್ಯವಾಗಿಸಿ,ರೈತನಿಗೆ ಒದಗಿಸಲು ಟಾಟಾ ಇಂಡಿಕಾಮ್ ದೂರಸಂಪರ್ಕ ಕಂಪೆನಿ ಆರಂಭಿಸಿದೆ. ನ್ಯಾನೋ ಗಣೇಶ ಈ ಸಾಧನದ ಹೆಸರು.ಇದರಲ್ಲಿ ಸೆಲ್‌ಫೋನ್ ಮತ್ತು ಮಾಡೆಮ್ ಜತೆಯಾಗಿ ಬರುತ್ತದೆ. ಮಾಡೆಂ ಅನ್ನು ಪಂಪಿನ ಸ್ಟಾರ್ಟರಿಗೆ ಅಳವಡಿಸಲಾಗುತ್ತದೆ. ಎರಡುಸಾವಿರದ ಏಳುನೂರು ರುಪಾಯಿ ತೆತ್ತು ರೈತ ಈ ಹ್ಯಾಂಡ್‌ಸೆಟ್ ಮತ್ತು ಮಾಡೆಂ ಖರೀದಿಸಿದಾಗ, ಆತನಿಗೆ ಒಂದು ನಿಗದಿತ ಸಂಖ್ಯೆಯನ್ನೂ ಕೊಡಲಾಗುತ್ತದೆ. ಹ್ಯಾಂಡ್‌ಸೆಟ್‌ನಿಂದ ಆ ಸಂಖ್ಯೆಗೆ ಕರೆ ಮಾಡಿದಾಗ ಪಂಪ್ ಚಾಲೂ-ಬಂದ್ ಮಾಡಬಹುದು.ಜತೆಗೆ ಪಂಪ್ ಯಾವ ಸ್ಥಿತಿಯಲ್ಲಿದೆ ಎಂದೂ ಪರಿಶೀಲಿಸಬಹುದು.ಪಂಪ್ ಚಾಲೂ-ಬಂದ್ ಮಾಡಲು ಮಾಡುವ ಕರೆಗೆ ಶುಲ್ಕವಿಲ್ಲ. ಇತರ ಮೊಬೈಲ್ ಕರೆಗಳಿಗೆ ಸಾಮಾನ್ಯ ಶುಲ್ಕ ವಿಧಿಸಲಾಗುತ್ತದೆ. ಈ ಸೇವೆಯನ್ನು ಜೀವಮಾನಪರ್ಯಂತ ಪಡೆಯ ಬಹುದು.
------------------------------------------------------
ಅಮೆರಿಕಾದ ವಿರುದ್ಧ ಸೈಬರ್ ಯುದ್ಧ?
ಕಳೆದವಾರ ಅಮೆರಿಕಾದ ಹಲವು ಅಂತರ್ಜಾಲ ತಾಣಗಳ ಸೇವೆ ಲಭ್ಯವಿರಲಿಲ್ಲ. ಅಂತರ್ಜಾಲದ ಸುಮಾರು ಹತ್ತು ಸಾವಿರ ಕಂಪ್ಯೂಟರುಗಳನ್ನು ತಮ್ಮ ವಶ ಮಾಡಿಕೊಂಡ ಯಾರೋ ಅವುಗಳ ಮೂಲಕ ಈ ತಾಣಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದರು. ಸ್ವೇತಭವನ ಮತ್ತು ಪೆಂಟಗನ್‌ದ ತಾಣವೂ ಸೇರಿದಂತೆ ಸರಕಾರದ ಹಲವು ತಾಣಗಳಲ್ಲಿ ಸಮಸ್ಯೆಯಿತ್ತು.ಇದಕ್ಕೆ ಇನ್ನೂ ಪತ್ತೆಯಾಗದ ಸೈಬರ್ ದಾಳಿ ಕಾರಣ. ಈ "ದಾಳಿ" ನಡೆಸಲು ಬಳಸಲಾದ ಹತ್ತು ಸಾವಿರ ಕಂಪ್ಯೂಟರುಗಳ ಪೈಕಿ ಹೆಚ್ಚಿನವು ದಕ್ಷಿಣ ಕೊರಿಯಾದಲ್ಲಿದ್ದವಾದರೆ, ಉಳಿದುವು ಜಪಾನ್,ಚೀನಾ,ಅಮೆರಿಕಾಗಳಲ್ಲಿದ್ದುವು.ಇಂತಹ ಅಪರೋಕ್ಷ ದಾಳಿಗಳ ಮೂಲ ಯಾವುದು ಎಂದು ಪತ್ತೆ ಮಾಡುವುದು ಅಷ್ಟು ಸುಲಭವಲ್ಲ. ದಾಳಿಯನ್ನು ಉತ್ತರ ಕೊರಿಯಾ ಮಾಡಿರಬಹುದು ಎಂಬ ಸಂಶಯ ಇದ್ದೇ ಇದೆ. ಆದರೆ ಅದಕ್ಕೆ ಪುರಾವೆ ಸಿಕ್ಕುವುದು ಕಠಿನ. ಪುರಾವೆ ಸಿಕ್ಕಿದರೂ,ಅಮೆರಿಕಾ ಏನು ತಾನೇ ಮಾಡಬಹುದು? ರಾಯಭಾರಿಯನ್ನು ಹಿಂದೆ ಕರೆಸಿಕೊಳ್ಳುವಂತಹ ಕ್ರಮಗಳು ಅಸಾಧ್ಯ,ಯಾಕೆಂದರೆ ಉತ್ತರ ಕೊರಿಯಾದಲ್ಲಿ ಅಮೆರಿಕಾದ ರಾಯಭಾರ ಕಚೇರಿಯೇ ಇಲ್ಲ.ವ್ಯಾಪಾರ ನಿಷೇಧ ಮಾಡುವುದು ಇನ್ನುಳಿದ ಮಾರ್ಗ. ವಿಶ್ವಸಂಸ್ಥೆಯ ಬಳಿ ದೂರು ನೀಡಿದರೂ ಅಷ್ಟೆ ಬಿಟ್ಟರೂ ಅಷ್ಟೆ!
-------------------------------------------------------------------------------
ಗೂಗಲ್ ಕ್ರೋಮ್ ಓಎಸ್
ಗೂಗಲ್ ಮೈಕ್ರೋಸಾಫ್ಟ್ ಕಂಪೆನಿಗೆ ಸಿಂಹಸ್ವಪ್ನವಾಗುವ ಲಕ್ಷಣಗಳೀಗ ಸ್ಪಷ್ಟವಾಗಿದೆ.2010ರ ಜೂನ್ ವೇಳೆಗೆ ಗೂಗಲ್ ಕ್ರೋಮ್ ಎಂಬ ಅತ್ಯಂತ ಸರಳ ಮತ್ತು ಕಂಪ್ಯೂಟರಿನ ಹೆಚ್ಚು ಯಂತ್ರಾಂಶವನ್ನು ಬೇಡದ ಕಾರ್ಯನಿರ್ವಹಣಾ ತಂತ್ರಾಂಶ ಬಿಡುಗಡೆಯಾಗಲಿದೆ.ಗೂಗಲ್ ಕ್ರೋಮ್ ಬ್ರೌಸರ್ ಬಿಡುಗಡೆಯಾದ ಒಂಭತ್ತು ತಿಂಗಳ ನಂತರ ಗೂಗಲ್ ಕಂಪೆನಿಯ ಈ ಘೋಷಣೆ ಹೊರಬಿದ್ದಿದೆ.ಆರ್ಮ್ ಮತ್ತು x86 ಸಂಸ್ಕಾರಕಗಳನ್ನು ಹೊಂದಿದ,ಅಂತರ್ಜಾಲ ಜಾಲಾಟಕ್ಕಾಗಿಯೇ ವಿನ್ಯಾಸಗೊಳಿಸಿದ ನೆಟ್‌ಬುಕ್‌ಗಳಿಗೆ ಗೂಗಲ್ ಕ್ರೋಮ್ ಅನ್ನು ವಿನ್ಯಾಸಗೊಳಿಸಲು ಕಂಪೆನಿ ಬಯಸಿದೆ. ನೆಟ್‌ಬುಕ್‌ಗಳಲ್ಲಿ ಹೆಚ್ಚು ತಂತ್ರಾಂಶಗಳನ್ನು ಅಳವಡಿಸಿರುವುದಿಲ್ಲ. ಅವನ್ನು ಅಂತರ್ಜಾಲಕ್ಕೆ ಸಂಪರ್ಕಿಸುವ ಮೂಲಕ, ಅಗತ್ಯವಾದ ತಂತ್ರಾಂಶಗಳನ್ನು ಅಂತರ್ಜಾಲದಿಂದಲೇ ಬಳಸುವ ಉದ್ದೇಶದಿಂದ ತಯಾರಿಸಲಾಗುತ್ತದೆ.
ನೆಟ್‌ಬುಕ್‌ನಲ್ಲಿ ಬಳಸುವ ಓಎಸ್ ಬೇಗನೇ ಚಾಲೂ ಆಗಿ,ನೇರವಾಗಿ ಅಂತರ್ಜಾಲದ ಮಿಂಚಂಚೆಯಂತಹ ಸೇವೆಗಳನ್ನು ಬಳಸಲು ಸಿದ್ಧವಾಗುವಂತೆ ಹೊಸ ಓಎಸ್ ಅನ್ನು ವಿನ್ಯಾಸಗೊಳಿಸಿ,ಅಭಿವೃದ್ಧಿ ಪಡಿಸುವುದು ಗೂಗಲ್ ಯೋಜನೆ.ಅಂತೆಯೇ,ಅತ್ಯಂತ ಸರಳ,ಬಳಕೆದಾರ ಸ್ನೇಹಿ ಲಕ್ಷಣಗಳನ್ನು ಹೊಂದಿರಬೇಕು ಎನ್ನುವುದು ಅಭಿವೃದ್ಧಿಕಾರರ ಕನಸು. ಕಂಪ್ಯೂಟರ್ ಶರವೇಗದಲ್ಲಿ ಕೆಲಸ ಮಾಡಬೇಕು,ಬಳಸುವುದು ತಲೆನೋವು ತರಬಾರದು ಎಂದು ಅವರ ಲೆಕ್ಕಾಚಾರ.ಲಿನಕ್ಸ್ ತಿರುಳಿನ ಮೇಲೆ ಹೊಸ ಓಎಸ್ ಅಭಿವೃದ್ಧಿ ಪಡಿಸುವುದರತ್ತ ಗೂಗಲ್ ಇಂಜಿನಿಯರುಗಳ ಚಿತ್ತ.
ಹೊಸ ನೆಟ್‍ಬುಕ್ ಸಾಧನಗಳನ್ನು ಬಿಡುಗಡೆಗೊಳಿಸಲು ಯಂತ್ರಾಂಶ ತಯಾರಕರನ್ನು ಪ್ರಚೋದಿಸಲು ಗೂಗಲ್ ಬಯಸಿದೆ. ಅವುಗಳಲ್ಲಿ ತನ್ನ ಓಎಸ್ ಅಳವಡಿಸಿ ಮಾರುಕಟ್ಟೆಗೆ ಬಿಡುವುದು ಕಂಪೆನಿಯ ಯೋಚನೆ. ಆದರೆ ಡೆಸ್ಕ್‌ಟಾಪ್ ಕಂಪ್ಯೂಟರುಗಳಿಗಾಗಿ ಗೂಗಲ್ ಓಎಸ್ ತರಲು ಕಂಪೆನಿಗೆ ಮತ್ತಷ್ಟು ಸಮಯ ಹೀಡಿಯಲಿದೆ.ಆದ್ದರಿಂದ ಮೈಕ್ರೋಸಾಫ್ಟ್ ತುಸು ಸಮಾಧಾನ ಹೊಂದಬಹುದು.
ಜನರಿಗೆ ಇಷ್ಟವಾಗಬಲ್ಲ,ಬಳಸಲು ಹಿತವಾಗುವ ಓಎಸ್ ತಂದು ಮೈಕ್ರೋಸಾಫ್ಟಿನ ಏಕಾಧಿಪತ್ಯವನ್ನು ಮುರಿಯಲು ಗೂಗಲ್‌ಗೆ ಸಾಧ್ಯವಾಗಬಹುದೇ ಎನ್ನುವುದು ಕೌತುಕದ ವಿಷಯ.
----------------------------------------------
ನೂರು ಜನ ಅನುಸರಿಸುವ ಕನ್ನಡ ಬ್ಲಾಗ್
ಕನ್ನಡ ಬ್ಲಾಗುಗಳ ಪೈಕಿ ಅತಿ ಜನಪ್ರಿಯ ಬ್ಲಾಗು ಯಾವುದು? ಪ್ರಾಯಶ: ಪ್ರಕಾಶ್ ಹೆಗ್ಡೆಯವರ http://ittigecement.blogspot.com/ ಇರಬಹುದು. ವೃತ್ತಿಯಿಂದ ಕಟ್ಟಡ ನಿರ್ಮಾಣ,ವಿನ್ಯಾಸಕಾರ ಪ್ರಕಾಶ್ ಹೆಗ್ಡೆಯವರ ಪ್ರವೃತ್ತಿ ಬರವಣಿಗೆ,ಛಾಯಾಚಿತ್ರೀಕರಣ. ಬ್ಲಾಗ್ ಬರವಣಿಗೆ ಇಷ್ಟವಾದರೆ,ಅದನ್ನು ನಿಯತವಾಗಿ ಅನುಸರಿಸುವ ಅವಕಾಶ ಓದುಗನಿಗಿದೆ. ಕನ್ನಡದ ಬ್ಲಾಗಗಳ ಪೈಕಿ ಇಟ್ಟಿಗೆ ಸಿಮೆಂಟ್ ಬ್ಲಾಗ್ ಇದೀಗ ನೂರಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ವೃತ್ತಿಗೆ ಸಂಬಂಧಿಸಿದ ರಂಜನೀಯ ಘಟನೆಗಳು,ತಮ್ಮ ಅನುಭವಕ್ಕೆ ಬಂದ ರಂಜನೀಯ ಘಟನೆಗಳನ್ನು ಸರಳ ಸುಂದರ ರೀತಿಯಲ್ಲಿ ಪ್ರಸ್ತುತ ಪಡಿಸಿರುವುದು ಈ ಜನಪ್ರಿಯತೆಗೆ ಕಾರಣ.ಧಾರವಾಡದ ಸುನಾಥರ "ಸಲ್ಲಾಪ್" ಬ್ಲಾಗ್ ಗಂಭೀರ ವಿಷಯಗಳನ್ನು ಒಳಗೊಂಡೂ,ನಲುವತ್ತಾರು ಜನರು ಹಿಂಬಾಲಕರನ್ನು ಹೊಂದಿರುವ ಹೆಗ್ಗಳಿಕೆಯನ್ನು ಹೊಂದಿದೆ.ಶರೀಫರ,ಬೇಂದ್ರೆಯವರ ಕವನಗಳ ವಿಶ್ಲೇಷಣೆಗಳು ಇಲ್ಲಿವೆ(http://sallaap.blogspot.com).
--------------------------
udayavani
*ಅಶೋಕ್‌ಕುಮಾರ್ ಎ

Monday, July 06, 2009

ಸುಲಭದಲ್ಲಿ ಚಿತ್ರಿಸಿ

ಸುಲಭದಲ್ಲಿ ಚಿತ್ರಿಸಿ



ನಿಮಗೆ ಲೇಖನವೊಂದಕ್ಕೆ ವಿವರಣಾತ್ಮಕ ಚಿತ್ರಗಳು ಬೇಕೇ?ಇವನ್ನು ರಚಿಸಲು ಹೆಚ್ಚು ಪರಿಶ್ರಮ ಪಡಬೇಕಿಲ್ಲ. ಡಯಾ(http://dia-installer.de/index_en.html ಎನ್ನುವ ಸುಲಭದಲ್ಲಿ ಚಿತ್ರ ರಚಿಸುವ ತಂತ್ರಾಂಶವು ಲಭ್ಯವಿದೆ. ಇದೊಂದು ಮುಕ್ತ ತಂತ್ರಾಂಶವಾಗಿದ್ದು,ವಿಂಡೋಸ್ ಆವೃತ್ತಿಯೂ ಲಭ್ಯ.ಲಿನಕ್ಸ್ ಕಾರ್ಯನಿರ್ವಹಣಾ ತಂತ್ರಾಂಶದಲ್ಲೂ ಇದು ಲಭ್ಯವಿದೆ. ಕಂಪ್ಯೂಟರ್ ಜಾಲ ಇತ್ಯಾದಿಗಳ ಚಿತ್ರ ರಚಿಸುವುದಂತೂ ಚಿಟಿಕೆ ಹೊಡೆದಷ್ಟೇ ಸುಲಭವಾಗಿಸುವ ತಂತ್ರಾಂಶ ಎಲ್ಲರ ಕಂಪ್ಯೂಟರಿನಲ್ಲೂ ಸ್ಥಾನ ಪಡೆದರೆ ಅಚ್ಚರಿಯಿಲ್ಲ.
---------------------------------------------------
ಮುದ್ರಿಸ ಬಹುದಾದ ಬ್ಯಾಟರಿ
ಬ್ಯಾಟರಿಯನ್ನು ಮುದ್ರಿಸುವುದೇ?ಹೌದು,ಒಂದೂವರೆ ವೋಲ್ಟಿನ ಒಂದು ಮಿಲಿಮೀಟರ್ ದಪ್ಪದ ಬ್ಯಾಟರಿಗಳನ್ನು,ರೇಷ್ಮೆ ಬಟ್ಟೆಯಲ್ಲಿ ಮುದ್ರಿಸುವ ತಂತ್ರಜ್ಞಾನಕ್ಕೆ ಸಮಾನವಾದ ರೀತಿಯಲ್ಲಿ ತಯಾರಿಸಬಹುದು. ಇದು ಜರ್ಮನಿಯ ಫ಼್ರಾನ‌ಹೋಪರ್ ಸಂಶೋಧನಾಲಯದ ವಿಜ್ಞಾನಿಗಳ ಸಂಶೋಧನೆಯ ಫಲ. ಸಣ್ಣ ಗಾತ್ರದ ಈ ಬ್ಯಾಟರಿಗಳ ಬಾಳಿಕೆ ಕಡಿಮೆ. ಇವನ್ನು ಕಾರ್ಡುಗಳಲ್ಲಿ ಬಳಸಲುದ್ದೇಶಿಸಲಾಗಿದೆ.ಬಳಸಿ ಎಸೆಯುವ ವಸ್ತುಗಳಲ್ಲಿ ಇವನ್ನು ಬಳಸುವುದು ಅನುಕೂಲಕರ.ಪಾದರಸದಂತಹ ವಿಷಕಾರಿ ಲೋಹಗಳನ್ನು ಬಳಸಬೇಕಿಲ್ಲದಿರುವುದು, ಈ ಬ್ಯಾಟರಿಗಳ ಇನ್ನೊಂದು ಧನಾತ್ಮಕ ಅಂಶ.ತಯಾರಿಸಲು ಅಗ್ಗ ಮತ್ತು ಇವನ್ನು ದೊಡ್ಡ ಸಂಖ್ಯೆಯಲ್ಲಿ ತಯಾರಿಸುವುದು ಸಾಧ್ಯ.
-----------------------------------------------
ನಿರ್ಧಾರ ಕೈಗೊಳ್ಳಲು ಸಹಾಯಹಸ್ತ

ಕಂಪ್ಯೂಟರ್ ಖರೀದಿಸಲು ಬಯಸುತ್ತೀರಾ? ಲ್ಯಾಪ್‌ಟಾಪ್ ಅಥವ ಡೆಸ್ಕ್‌ಟಾಪ್-ಇವುಗಳ ಪೈಕಿ ಯಾವುದು ಹಿತ ಎಂದು ನಿರ್ಧರಿಸಲು ಕಷ್ಟವಾಗುತ್ತಿದೆಯೇ? ಇಂತಹ ನಿರ್ಣಯಗಳನ್ನು ಕೈಗೊಳ್ಳಲು ಸಹಾಯ ಮಾಡುವ ಅಂತರ್ಜಾಲ ತಾಣವೇ www.hunch.com. ನಿಮ್ಮ ಬಜೆಟ್,ಯಾವ ಕೆಲಸಗಳಿಗೆ ನೀವು ಕಂಪ್ಯೂಟರ್ ಬಳಸುತ್ತೀರಿ? ನಿಮ್ಮ ಉದ್ಯೋಗ ಯಾವ ತೆರನದ್ದು ಮೊದಲಾದ ಪ್ರಶ್ನೆಗಳನ್ನು ಕೇಳಿ,ನಿಮಗೆ ಸುಕ್ತ ಸಲಹೆ ನೀಡುವ ಸೇವೆ ಈ ತಾಣದಲ್ಲಿ ಲಭ್ಯ.ನೀವು ಉತ್ತರಿಸಲು ಬಯಸದ ಪ್ರಶ್ನೆಗಳನ್ನು ಬಿಡಲು ಸಾಧ್ಯವಿದೆ.ಹತ್ತು ಪ್ರಶ್ನೆಗಳನ್ನು ಕೇಳಿ ನಿಮಗೆ ಸಲಹೆ ನೀಡಲು ತಾಣವು ಸಮರ್ಥವಾಗಿದೆ.
----------------------------------------------------------
ದೂರುಗಂಟೆ ಬಾರಿಸಲು ಟ್ವಿಟರ್ ಬಳಕೆ
ಗ್ರಾಹಕರು ತಮ್ಮ ದೂರುಗಳಿಗೆ ಪರಿಹಾರ ಕಂಡುಕೊಳ್ಳಲು ಗ್ರಾಹಕ ಸೇವಾ ಕೇಂದ್ರಗಳಿಗೆ ದೂರವಾಣಿ ಕರೆ ಮಾಡುವುದಿದೆ. ಆದರೆ ಹಲವೊಮ್ಮೆ ಈ ಮಾರ್ಗ ನಿರೀಕ್ಷಿತ ಪರಿಣಾಮ ಬೀರದಿರಬಹುದು. ಈಗೀಗ ಗ್ರಾಹಕರು ಟ್ವಿಟರ್ ಅಂತರ್ಜಾಲ ಸೇವೆ (www.twitter.com) ಬಳಸಿ ತಮ್ಮ ದೂರುಗಳನ್ನು ಬಗೆಹರಿಸಿಕೊಳ್ಳಲು ಯಶಸ್ವಿಯಾಗುತ್ತಿದ್ದಾರೆ.ಜನ ಸಾಮಾನ್ಯರ ಹಾಗೆ ಪತ್ರಿಕೆಗಳು,ಸಂಸ್ಥೆಗಳೂ ಟ್ವಿಟರ್ ಖಾತೆ ಹೊಂದಿರುತ್ತಾರೆ. ಇತ್ತೀಚೆಗೆ ವಿಮಾನ ಪ್ರಯಾಣಿಕರೊಬ್ಬರು ತನಗೆ ಹಾಗೂ ತಮ್ಮ ಕುಟುಂಬದವರಿಗೆ ಜತೆಯಾಗಿ ಸೀಟು ಕಾಯ್ದಿರಿಸದ್ದು ನೋಡಿ,ಕರೆ ಮಾಡಿದಾಗ ಅವರ ದೂರಿಗೆ ಪ್ರತಿಕ್ರಿಯೆ ಬರಲಿಲ್ಲ.ಆದರವರು ಈ ವಿಷಯವನ್ನು ಟ್ವಿಟರ್ ಮೂಲಕ ವಿಮಾನ ಕಂಪೆನಿಗೆ ತಿಳಿಸಿದ ಕೆಲವೇ ನಿಮಿಷಗಳಲ್ಲಿ ಅವರ ದೂರಿನ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಪ್ರತಿಕ್ರಿಯೆ ಬಂತು. ನಂತರ ಸ್ವಲ್ಪವೇ ಹೊತ್ತಿನಲ್ಲಿ ಅವರಿಗೆ ಬೇಕಾದ ರೀತಿಯೇ ಸೀಟೂ ನಿಗದಿಯಾಯಿತು. ಇಂತಹ ಅನುಭವಗಳು ಸಾಕಷ್ಟು ಜನರಿಗೆ ಆದ ಬಗ್ಗೆ ವರದಿಗಳಿವೆ. ಕಂಪೆನಿಯ ಟ್ವಿಟರ್ ಖಾತೆಯನ್ನು ಲಕ್ಷಾಂತರ ಜನರು ಅನುಸರಿಸುತ್ತಿರುತ್ತಾರೆ. ಹಾಗಾಗಿ ಒಬ್ಬರು ಬರೆದ ದೂರು ಇತರರಿಗೂ ಗೊತ್ತಾಗುತ್ತದೆ. ಇದು ಕಂಪೆನಿಯ ಇಮೇಜನ್ನು ಕೆಡಿಸುವ ಅಪಾಯ ಇರುವ ಕಾರಣ ಕಂಪೆನಿಗಳು ಸುಮ್ಮನಿರುವುದಿಲ್ಲ. ಅವರು ಪ್ರತಿಕ್ರಿಯೆ ನೀಡಿದರೆ,ಅವರು ಚುರುಕಾಗಿದ್ದಾರೆ ಎಂಬಂಶವೂ ಇತರರಿಗೆ ತಿಳಿದು,ಗ್ರಾಹಕರು ಕಂಪೆನಿಯ ಬಗ್ಗೆ ಉತ್ತಮ ಅಭಿಪ್ರಾಯ ಹೊಂದುತ್ತಾರೆ. ಹೀಗಾಗಿ ಟ್ವಿಟರ್ ಸಂದೇಶಗಳನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿದೆ.
-------------------------------------------------
ಅಮೆರಿಕಾ ಚಂದ್ರಯಾನ ಸುಳ್ಳೇ?
ಅಮೆರಿಕನ್ನರು ಚಂದ್ರನ ಮೇಲೆ ಕಾಲಿರಿಸಿದ್ದು ಕಟ್ಟು ಕತೆ ಎಂದು ನಂಬುವವರು ಬಹಳಷ್ಟಿದ್ದಾರೆ.ಇದನ್ನು ಪುಷ್ಟೀಕರಿಸಲು ಕೆಲವು ವಾದಗಳನ್ನು ಮುಂದಿಡಲಾಗುತ್ತಿತ್ತು.ಈ ಸವಾಲುಗಳಿಗೆ ಸಮಾಧಾನ ಹೇಳುವ ಪ್ರಯತ್ನ ಇತ್ತೀಚೆಗೆ ನಡೆದಿದೆ. ಚಂದ್ರನ ಮೇಲೆ ಅಮೆರಿಕನ್ನರು ನೆಟ್ಟ ಧ್ವಜ ಅಲುಗಾಡಿದ್ದು ಹೇಗೆ ಎಂಬ ಸವಾಲಿಗೆ ,ಅದು ಅಲುಗಾಡಿದಾಗ ಯಾವನಾದರೂ ಗಗನಯಾತ್ರಿ ಧ್ವಜವನ್ನು ಹಿಡಿದಿದ್ದರು ಎಂಬ ಸಮಾಧಾನ ನೀಡಲಾಗಿದೆ.ಚಿತ್ರಗಳಲ್ಲಿ ವಿವಿಧ ವಸ್ತುಗಳ ನೆರಳುಗಳು ಬೇರೆ ಬೇರೆ ಕೋನಗಳಲ್ಲಿ ಇವೆ,ಇದು ಸ್ಟುಡಿಯೋ ಚಿತ್ರೀಕರಣದಂತೆ ಹಲವು ಬೆಳಕಿನ ಮೂಲಗಳ ಉಪಯೋಗ ಮಾಡಿದ್ದರ ಫಲ ಎನ್ನುವ ವಾದ ಮುಂದಿಡಲಾಗುತ್ತಿತ್ತು. ಹಾಗೇನಾದರೂ ಆದರೆ ಒಂದು ವಸ್ತು ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನೆರಳು ಬೀರಬೇಕಿತ್ತು.ಚಂದ್ರನ ಮೇಲ್ಮೈಯಲ್ಲಿ ಸೂರ್ಯ ಪ್ರಕಾಶ ಮತ್ತು ನೆಲದ ಏರು ತಗ್ಗುಗಳು ಇಂತಹ ನೆರಳು ಉಂಟಾಗಲು ಕಾರಣವಿರಬಹುದು ಎಂಬ ತರ್ಕ ಮುಂದಿಡಲಾಗುತ್ತಿದೆ. ಗಗನಯಾತ್ರಿಗಳೆಲ್ಲರೂ ಚಿತ್ರದಲ್ಲಿದ್ದಾಗ ಚಿತ್ರೀಕರಿಸಿದವರು ಯಾರು ಎಂಬ ಪ್ರಶ್ನೆಗೆ ಅದು ಬಾಹ್ಯಾಕಾಶ ವಾಹನದ ಕ್ಯಾಮರ ತೆಗೆದ ಚಿತ್ರ ಎಂಬ ಸಮರ್ಥನೆ ನೀಡಲಾಗಿದೆ.ಹಬಲ್ ದೂರದರ್ಶಕದ ಮೂಲಕ ಚಂದ್ರನ ಮೇಲ್ಮೈಯಲ್ಲಿ ಬಿಡಲಾಗಿರುವುದೆನ್ನಲಾದ ಬಾಹ್ಯಾಕಾಶ ವಾಹನದ ಚಿತ್ರವನ್ನು ತೆಗೆದು ತೋರಿಸಲು ನಾಸಾ ಪ್ರಯತ್ನಿಸಿಲ್ಲವೇಕೆ ಎಂಬ ಪ್ರಶ್ನೆಗೆ ದೂರದರ್ಶಕವು ಹತ್ತು ಮೀಟರಿಗಿಂತ ಕಡಿಮೆ ಅಳತೆಯ ವಸ್ತುಗಳನ್ನು ಚಿತ್ರೀಕರಿಸಲು ಸಮರ್ಥವಾಗಿಲ್ಲ ಎಂಬ ವಾದ ಮುಂದೊಡ್ದಲಾಗಿದೆ.ಚಂದ್ರನ ಮೇಲ್ಮೈಯಲ್ಲಿ ಗಗನಯಾತ್ರಿಗಳ ಹೆಜ್ಜೆ ಗುರುತುಗಳು ಮೂಡಲು ಅಲ್ಲಿ ನೀರ ಪಸೆ ಇತ್ತೇ ಎಂಬ ಪ್ರಶ್ನೆಗೆ ಚಂದ್ರನ ಮೇಲ್ಮೈಯಲ್ಲಿರುವ ಉಸುಕಿಗೂ ಭೂಮಿಯಲ್ಲಿರುವ ಉಸುಕಿಗೂ ವ್ಯತ್ಯಾಸವಿದೆ. ಅಲ್ಲಿ ಹೆಜ್ಜೆ ಗುರುತುಗಳು ಮೂಡಲು ನೀರ ಪಸೆ ಅಗತ್ಯವಿಲ್ಲ ಎಂಬ ತರ್ಕಿಸಲಾಗಿದೆ.ಇನ್ನು ಚಿತ್ರಗಳಲ್ಲಿ ಹಿನ್ನೆಲೆಯ ಆಗಸದಲ್ಲಿ ನಕ್ಷತ್ರಗಳು ಮೂಡದಿರುವುದಕ್ಕೆ ಅತಿ ವೇಗದ ಶಟರ್ ಸ್ಪೀಡ್ ಬಳಸಿ ಚಿತ್ರೀಕರಿಸಿದುದರಿಂದ ಹೀಗಾದೀತು ಎಂಬ ಅಭಿಪ್ರಾಯ ವ್ಯಕ್ತ ಪಡಿಸಲಾಗಿದೆ.ಚಂದ್ರನಿಂದ ಹಿಂದಿರುಗುವ ರಾಕೆಟಿನಲ್ಲಿ ಜ್ವಾಲೆ ಇಲ್ಲದ್ದಕ್ಕೆ ಕಾರಣ,ರಾಕೆಟ್ಟಿನಲ್ಲಿ ಬಳಸಿದ ನೈಟ್ರೋಜನ್ ಟೆಟ್ರಾಕ್ಸೈಡ್ ಮತ್ತು ಎರೋಜೈನ್‌ನ ಜ್ವಾಲೆಗಳು ಪಾರದರ್ಶಕವಾಗಿದ್ದು,ಚಿತ್ರದಲ್ಲಿ ಮೂಡಿಲ್ಲವೆನ್ನಲಾಗಿದೆ.
*ಅಶೋಕ್‍ಕುಮಾರ್ ಎ

ಉದಯವಾಣಿ
 
googledc7e93ba1a7703ae.html