Monday, July 25, 2011

ಬ್ರಾಡ್‌ಬ್ಯಾಂಡ್:ರೂ.20000 ಕೋಟಿ
ದೇಶದ ಪ್ರತಿ ಪಂಚಾಯತ್ ಪ್ರದೇಶದಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಲಭ್ಯವಾಗಿಸುವ ಯೋಜನೆಗೆ ಟೆಲಿಕಾಂ ಇಲಾಖೆಯ ಅನುಮತಿ ದೊರೆತಿದೆ.ಇದಕ್ಕೆ ಇಪ್ಪತ್ತು ಸಾವಿರ ಕೋಟಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.ಒಪ್ಟಿಕ್ ಫೈಬರ್ ಕೇಬಲ್‌ಗಳನ್ನು ದೇಶದ ಮೂಲೆ ಮೂಲೆಗೂ ಹಾಕುವುದರ ಮುಖಾಂತರ ಇದನ್ನು ಸಾಧ್ಯವಾಗಿಸುವ ಯೋಜನೆಯಿದೆ.ಯೋಜನೆಯ ಅನುಷ್ಠಾನದ ಉಸ್ತುವಾರಿಯನ್ನು ನೋಡಿಕೊಳ್ಳಲು ಒಂದು ವಿಶೇಷ ಸಮಿತಿಯ ರಚನೆಯಾಗಲಿದೆ.ಬಿ ಎಸ್ ಎನ್ ಎಲ್ ಆರಂಭಿಕ ಅನುಷ್ಠಾನ ಮತ್ತು ಸಮಿತಿ ರಚನೆಯ ಜವಾಬ್ದಾರಿಯನ್ನು ಹೊರುತ್ತದೆ.ಹಳ್ಳಿಯ ಜನರು ಮಾಹಿತಿಯನ್ನು ವಿನಿಮಯ ಮಾಡುವುದಕ್ಕೆ,ಹೊರ ಜಗತ್ತಿನ ಜತೆ ಎಗ್ಗಿಲ್ಲದೆ ವ್ಯವಹರಿಸುವುದಕ್ಕೆ ಈ ಜಾಲ ಅನುವು ಮಾಡಿ,ಹಳ್ಳಿಗಳಿಂದ ವಲಸೆ ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗಬಹುದು.ಯೋಜನೆಯ ಖರ್ಚು ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳು.
---------------------------------------------------------------------------
ಗೂಗಲ್ ಪ್ಲಸ್:ಎರಡು ಕೋಟಿ

ಮೂರೇ ವಾರಗಳಲ್ಲಿ ಇಪ್ಪತ್ತು ದಶಲಕ್ಷ ಜನರನ್ನು ತನ್ನ ಜಾಲಕ್ಕೆ ಸೇರುವಂತೆ ಮಾಡಲು ಗೂಗಲ್ ಪ್ಲಸ್ ಸಮರ್ಥವಾಗಿದೆ.ಇದು ಸಾಮಾಜಿಕ ಜಾಲತಾಣಗಳ ಮಟ್ಟಿಗೆ ಹೊಸ ದಾಖಲೆ ಎನ್ನಲಡ್ದಿಯಿಲ್ಲ.ಆದರೆ ಫೇಸ್‍ಬುಕ್‌ನಲ್ಲಿ ಸದ್ಯ ಇರುವ  ಸದಸ್ಯರ ಸಂಖ್ಯೆ ಎಪ್ಪತ್ತೈದು ಕೋಟಿ ಎನುವುದನ್ನು ನೆನಪಿಸಿದರೆ,ಗೂಗಲ್ ಪ್ಲಸ್ ಬಹುದೂರದಲ್ಲಿದೆ ಎನ್ನುವುದು ಗಮನಕ್ಕೆ ಬರುತ್ತದೆ.ಅಲ್ಲದೆ ಫೇಸ್‌ಬುಕ್‌ಗೆ ಪ್ರತಿದಿನ ಅರ್ಧಾಂಶ ಸಂಖ್ಯೆಯ ಅಂದರೆ ಮೂವತ್ತು ಕೋಟಿ ಜನರಾದರೂ ಲಾಗಿನ್ ಆಗುತ್ತಾರೆ.
-----------------------------------------------------------------------------
ತೊಂದರೆಯಲ್ಲಿದ್ದಾಗ ಟ್ವೀಟಿಸಿ


ತೊಂದರೆಯಲ್ಲಿದ್ದವರು ಸಂದೇಶ ರವಾನಿಸುವ ಮೂಲಕ ನೆರವು ಪಡೆಯುವ ಘಟನೆಗಳು ಇತ್ತಿಚೆಗೆ ಸಾಮಾನ್ಯವಾಗಿವೆ.ಮೊಬೈಲ್ ಜಾಲಗಳ ಮೂಲಕ ಸಾಮಾಜಿಕ ಜಾಲತಾಣಗಳಾದ ಟ್ವಿಟರ್,ಫೇಸ್‍ಬುಕ್ ಮತ್ತು ಇತ್ತೀಚಿನ ಗೂಗಲ್ ಪ್ಲಸ್ ತಾಣಗಳನ್ನು ಹೆಚ್ಚೆಚ್ಚು ಜನರು ಬಳಸುತ್ತಿರುವುದು ಇದಕ್ಕೆ ಕಾರಣ.ಸಂಕಷ್ಟದಲ್ಲಿರುವವರ ಬಗ್ಗೆ ಮಾಹಿತಿ ಸಿಕ್ಕಿದರೆ,ಅಗ್ನಿಶಾಮಕ ದಳಗಳೋ ಅಥವಾ ಯಾವುದೇ ಸ್ವಯಂಸೇವಕ ಸಂಸ್ಥೆಗಳೋ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಬಹುದು.ತುರ್ತು ಪರಿಹಾರ ಸಿಕ್ಕಿದರೆ,ಎಷ್ಟೋ ಜೀವಗಳನ್ನು ಉಳಿಸಬಹುದು.ಆದರೆ ಸಂದೇಶಗಳು ಬಹಳ ಸಲ ಯಾವುದೇ ನಿಖರ ಮಾಹಿತಿ ನೀಡದೆ,ನಿರೀಕ್ಷಿತ ನೆರವು ಸಿಗದೇ ಹೋಗುವ ಅಪಾಯವೂ ಇದೆ.ಹಾಗಾಗಿ ಸಂದೇಶಗಳನ್ನು ಕಿರಿದಾಗಿಯೂ,ಉಪಯುಕ್ತವಾಗುವಂತೆಯೂ ಬರೆಯುವ ಕಲೆಯನ್ನು ರೂಡಿಸಿಕೊಳ್ಳುವುದು ಒಳ್ಳೆಯದು.ಆಗಿರುವ ತೊಂದರೆಯೇನು,ಯಾವ ಜಾಗದಲ್ಲಿ ಎಂದು ಸಂದೇಶಗಳಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.ಹಾಗೆಯೆ ಸಂದೇಶಗಳನ್ನು ಶೋಧಿಸುವುದುಸುಲಭವಾಗುವಂತೆ,ಅವುಗಳಲ್ಲಿ  ಪ್ರಮುಖ ಶಬ್ದಗಳನ್ನು ಬಳಸಬಹುದು.ಸಂದೇಶಗಳು ಸಂಬಂಧಿತ ಏಜನ್ಸಿಗಳಿಗೆ ಕಳುಹಿಸಲು ಸಾಧ್ಯವಾದರೆ ಇನ್ನೂ ಒಳಿತು.ಸ್ಮಾರ್ಟ್‌ಪೋನುಗಳ ಜಿಪಿಎಸ್-ಸ್ಥಾನ ಪತ್ತೆ ತಂತ್ರಜ್ಞಾನ ಬಹಳ ಪ್ರಯೋಜನಕಾರಿ.ಬಿರುಗಾಳಿ ಬೀಸಿದ ನಗರದಲ್ಲಿ,ರಸ್ತೆ ಸೂಚಕ ಫಲಕಗಳು,ಇನ್ನಿತರ ಫಲಕಗಳೂ ನಾಶವಾಗಿ,ಯಾವ ಸ್ಥಳದಲ್ಲಿ ತಾನಿದ್ದೇನೆ ಎನ್ನುವುದು ವ್ಯಕ್ತಿಗೆ ಗೊತ್ತಾಗದೇ ಹೋದರೂ,ಜಿಪಿಎಸ್ ಮೂಲಕ ಇದನ್ನು ತಿಳಿದುಕೊಳ್ಳಲು ಸಾಧ್ಯ.ನೆರವೀಯುವವರೂ ತಮ್ಮ ಸಾಧನೆಯ ಬಗ್ಗೆ ಸಂದೇಶ ರವಾನಿಸಿ,ಜನರ ಮನಸ್ಸಿನಲ್ಲಿ ಮೂಡಿರಬಹುದಾದ ಆತಂಕವನ್ನು ಕಡಿಮೆ ಮಾಡಬಹುದು.
--------------------------------------------------------
ಮ್ಯಾಕ್‌ಬುಕ್ ಏರ್:ಸೂಪರ್ ನೋಟ್‌ಬುಕ್
ಆಪಲ್ ಕಂಪೆನಿಯು ತನ್ನ ಮ್ಯಾಕ್‍ಬುಕ್ ಏರ್ ಎನ್ನುವ ನೋಟ್‌ಬುಕ್ ಅನ್ನು ಸುಧಾರಿಸಿ ಬಿಡುಗಡೆ ಮಾಡಿದೆ.ಇದೀಗ ಅದು ಹೊಸ ಓಎಸ್ ಎಕ್ಸ್ 10.7ಲಯನ್ ಜತೆ ಬಂದಿದೆ.ಹದಿಮೂರು ಇಂಚು ಮತ್ತು ಹನ್ನೊಂದು ಇಂಚು ಹೀಗೆ ಎರಡು ಗಾತ್ರಗಳಲ್ಲಿದು ಲಭ್ಯ.ದೊಡ್ಡದರಲ್ಲಿ ನಾಲ್ಕು ಜೀಬಿ ಸ್ಮರಣಶಕ್ತಿ ಇದ್ದರೆ,ಕಿರುಗಾತ್ರದಲ್ಲಿ ಎರಡು ಜೀಬಿ ಸ್ಮರಣಕೋಶ ಇದೆ.ಅಲ್ಲದೆ ಕೋರ್ ಐ5 ಸಂಸ್ಕಾರಕ ಇದರಲ್ಲಿದೆ.ಮ್ಯಾಕ್‌ಬುಕ್-ಪ್ರೋ ಎನ್ನುವ ಇನ್ನೊಂದು ನೋಟ್‌ಬುಕ್‌ಗೆ ಇದು ಸ್ಪರ್ಧೆಯೊಡ್ದುವುದು ಸಂಭವನೀಯ.ಥಂಡರ್‌ಬೋಲ್ಟ್ ಎನ್ನುವ ಹೊಸ ನಮೂನೆಯ ಪೋರ್ಟ್ ಇದರ ಇನ್ನೊಂದು ವಿಶೇಷತೆ.ಯು ಎಸ್ ಬಿ ಎನ್ನುವ ಪೋರ್ಟ್‌ಗಳಿಗಿಂತ ಇವು ಹೆಚ್ಚು ವೇಗವಾಗಿ ದತ್ತಾಂಶ ವಿನಿಮಯ ಮಾಡಿಕೊಳ್ಳಬಲ್ಲುವು.ಇವುಗಳಿಗಿನ್ನೂ ಸಾಧನಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.ಆದರೆ ಇನ್ನು ಮುಂದೆ ಸಾಧನಗಳ ತಯಾರಕರು ಅಂತಹ ಡ್ರೈವರ್ ತಂತ್ರಾಂಶಗಳ ಸಹಿತ ಸಾಧನಗಳನ್ನು ಬಿಡುಗಡೆ ಮಾಡದಿರರು.ಅಂದ ಹಾಗೆ ಆಪಲ್ ತನ್ನ ತ್ರೈಮಾಸಿಕ ಫಲಿತಾಂಶದಲ್ಲಿ ಭಾರೀ ಮುನ್ನಡೆ ಸಾಧಿಸಿದೆ.
-------------------------------------------------------------------------------------------
ಸ್ಮಾರ್ಟ್‌ಪೋನ್:ಯಾರು ಟಾಪ್?
ಸ್ಮಾರ್ಟ್‌ಫೋನ್ ಮಾರುಕಟೆಯಲ್ಲಿ,ಇದುವರೆಗೆ ನೋಕಿಯಾ ಕಂಪೆನಿ ಮುನ್ನಡೆಯಲ್ಲಿತ್ತು.ಈಗ ಅದನ್ನು ಆಪಲ್ ಕಂಪೆನಿಯು ದ್ವಿತೀಯ ಸ್ಥಾನಕ್ಕೆ ತಳ್ಳಿದೆ.ಜತೆಗೇ ಆಪಲ್ ಎಚ್ ಟಿ ಸಿ ಮತ್ತು ಸಾಮ್ಸಂಗ್ ಕಂಪೆನಿಗಳ ಮೇಲೆ ಹಕ್ಕುಸ್ವಾಮ್ಯ ಕೇಸುಗಳನ್ನೂ ಹಾಕಿ,ಬಗ್ಗು ಬಡಿಯಲು ಪ್ರಯತ್ನಿಸುತ್ತಿದೆ.ಎಚ್ ಟಿ ಸಿ ಕಂಪೆನಿಯು ಗೂಗಲ್ ಆಂಡ್ರಾಯಿದ್ ಫೋನ್‌ಗಳನ್ನು ತಯಾರಿಸಿದ ನಂತರ ಅದ್ಭುತ ಪ್ರಗತಿ ಕಾಣುತ್ತಿರುವುದು ಎಲ್ಲರ ಕಣ್ಣು ಕುಕ್ಕಿದೆ.ಇತ್ತೀಚಿನ ವರೆಗೂ,ಎಚ್ ಟಿ ಸಿಯು ಇತರ ಸೇವಾದಾತೃಗಳ ಜತೆ ಒಪ್ಪಂದ ಮಾಡಿಕೊಂಡು ಅವುಗಳಿಗೆ ಹ್ಯಾಂಡ್‌ಸೆಟ್ ಪೂರೈಸುತ್ತಿತ್ತು.ಈಗದು ಸ್ವತಂತ್ರವಾಗಿ ಸ್ಮಾರ್ಟ್‌ಫೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡತೊಡಗಿದೆ.ಅಲ್ಲದೆ ಅದರ ಸ್ಮಾರ್ಟ್‌ಫೋನುಗಳು ಬಹು ಜನಪ್ರಿಯವಾಗುತ್ತಿವೆ.ಇದು ಆಪಲ್ ಕಂಪೆನಿಗೆ ನಿದ್ದೆ ಕೆಡಿಸಿದೆಯೇನೋ!
-----------------------------------------------------------------
ಚಂದ್ರ:ಶಕ್ತಿಯ ಮೂಲ?
ಹೀಲಿಯಮ್3 ಎನ್ನುವ ಧಾತುವನ್ನು ಬಳಸಿ,ಸಂಯೋಗದ ಮೂಲಕ ಶಕ್ತಿ ಉತ್ಪಾದಿಸುವುದು ಸಾಧ್ಯವೆಂದು ವಿಸ್ಕೋನ್ಸಿನ್ ವಿಶ್ವವಿದ್ಯಾಲಯದ ಸಂಶೋಧಕರು ತೋರಿಸಿಕೊಟ್ಟಿದ್ದಾರೆ.ವಿದಳನ ಪ್ರಕ್ರಿಯೆಯ ಮೂಲಕ ಅಣುಶಕ್ತಿ ಪಡೆಯುವುದು ಹೆಚ್ಚು ಸುಲಭ ಮತ್ತು ಈಗಿನ ಅಣುಶಕ್ತಿ ಸ್ಥಾವರಗಳು ಅಂತಹ ಪ್ರಕ್ರಿಯೆ ಮೂಲಕವೇ ಕೆಲಸ ಮಾಡುತ್ತಿವೆ.ಧಾತುಗಳ ಸಂಯೋಗದ ಮೂಲಕ ಶಕ್ತಿಯು ಬಿಡುಗಡೆಯಾಗುತ್ತದೆನ್ನುವುದು ಮೊದಲಿನಿಂದಲು ಗೊತ್ತಿದೆ.ಸೂರ್ಯ ಮತ್ತು ನಕ್ಷತ್ರಗಳು ಬಿಡುಗಡೆ ಮಾಡುತ್ತಿರುವ ಶಕ್ತಿ ಇದೇ ಪ್ರಕ್ರಿಯೆಯನ್ನವಲಂಬಿಸಿದೆ.ಆದರೆ ಇದನ್ನು ನಿಯಂತ್ರಿಸುವುದು ಕಠಿನ.ಆದರೆ ಸಂಶೋಧಕರು ಮಾದರಿ ಸ್ಥಾವರವನ್ನು ರಚಿಸಿ,ಹೀಲಿಯಂ ಸಂಯೋಗದಿಂದ ಶಕ್ತಿ ಬಿಡುಗಡೆ ಮಾಡಿ ತೋರಿಸಿದ್ದಾರೆನೋ ಸರಿ,ಆದರೆ ಆ ಹೀಲಿಯಂ ಧಾತು ಭೂಮಿಯ ಮೇಲೆ ಒಟ್ಟಿಗೆ ಇರುವುದೇ ಬರೇ ಮೂವತ್ತು ಕಿಲೋಗ್ರಾಮ್ ಅಂತೆ.ಚಂದ್ರನ ಮೇಲೆ ಇದಕ್ಕಿಂತ ಅದೆಷ್ಟೋ ಹೆಚ್ಚು ಹೀಲಿಯಂ ಇದೆಯೆನ್ನುವುದು,ಚಂದ್ರ ಭೂಮಿಗೆ ಶಕ್ತಿಯ ಮೂಲವಾಗಬಹುದು ಎನ್ನುವ ಲೆಕ್ಕಾಚಾರಕ್ಕೆ ಕಾರಣ.ಹೀಲಿಯಂ ವಿಕಿರಣ ಮುಕ್ತ ಶಕ್ತಿ ನೀಡುತ್ತದಂತೆ.ಹೀಲಿಯಮ್3 ಅಪೂರ್ವ ಧಾತುವಾದ್ದರಿಂದ ಅದರ ಬೆಲೆ ಭಾರೀ ಹೆಚ್ಚು.ಪ್ರತಿಗ್ರಾಮಿಗೆ ಒಂದು ಸಾವಿರ ಡಾಲರ್ ಬೆಲೆ, ಈಗ ಏಳುಸಾವಿರ ಡಾಲರಿಗೇರಿದೆ.ಅದನ್ನು ಬಳಸಿ ವಿದ್ಯುತ್ ತಯಾರಿಸಿದರೆ,ವಿದ್ಯುತ್ ಬೆಲೆ ಎಷ್ಟಾಗಬಹುದು ಎಂದು ಯೋಚಿಸಿ.ಡ್ಯುಟೀರಿಯಮ್ ಮತ್ತು ಟ್ರೀಟಿಯಮ್ ಎನ್ನುವ ಧಾತುಗಳು ಅಪಾಯಕಾರಿ ಎನ್ನುವ ಕಾರಣ,ಹೀಲಿಯಂ ಆಧಾರಿತ ಸ್ಥಾವರ ಅಭಿವೃದ್ಧಿಗೆ ಪ್ರಯತ್ನ ನಡೆದಿದೆ.ಭೂಮಿಯಲ್ಲಿ ಅಪೂರ್ವವಾಗಿರುವ ಹೀಲಿಯಮ್3 ಚಂದ್ರನ ಮೇಲೆ ಟನ್‌ಗಟ್ಟಲೆ ಇದೆ.ಅದು ಇರುವ ಸ್ಥಳವೂ ಗೊತ್ತು.ಹಾಗಾಗಿ ಚಂದ್ರನ ಮೇಲೆ ಠಿಕಾಣಿ ಹೂಡಿ,ಹೀಲಿಯಮ್3 ರವಾನಿಸಲು ಸಾಧ್ಯವಾದರೆ,ಭೂಮಿಯ ಮೇಲೆ ಅದನ್ನಲವಂಬಿಸಿದ ಸ್ಥಾವರ ಸ್ಥಾಪಿಸಬಹುದು.
----------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಭಾರತದ ಐಟಿ ಕಂಪೆನಿಗಳ ಪೈಕಿ,ಮೂರನೆ ಸ್ಥಾನಕ್ಕೆ ಪೈಪೋಟಿ ಇರುವ ಕಂಪೆನಿಗಳು ಯಾವುವು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS41 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಜುಲೈ 24ಕ್ಕೆ ಆರು ವರ್ಷ ಪೂರೈಸುವ ಜನಪ್ರಿಯ ಕನ್ನಡ ಸಮುದಾಯ ತಾಣ ಸಂಪದ.ನೆಟ್
*ವಾರ್ಷಿಕೋತ್ಸವ ಸಂದರ್ಭ ನಡೆದ ಇನ್ನೊಂದು ವಿಶೇಷ ಕಾರ್ಯಕ್ರಮ ಸಾರಂಗ ಮೀಡಿಯಾ ವತಿಯಿಂದ "ಹಂಸನಾದ" ಪುಸ್ತಕ ಬಿಡುಗಡೆ.ಸರಿಯುತ್ತರಗಳು ಬಂದಿಲ್ಲ.
 

Udayavani Unicode
-------------------------------
Udayavani
*ಅಶೋಕ್‌ಕುಮಾರ್ ಎ

Monday, July 18, 2011

ಸ್ಮರಣಶಕ್ತಿ ಕುಂದಿಸುವ ಕಂಪ್ಯೂಟರ್

ಸ್ಮರಣಶಕ್ತಿ ಕುಂದಿಸುವ ಕಂಪ್ಯೂಟರ್
ಕಂಪ್ಯೂಟರ್,ಅಂತರ್ಜಾಲದಲ್ಲಿ ಬೇಕಾದ ಮಾಹಿತಿ ಸುಲಭವಾಗಿ ಸಿಗುತ್ತದೆ ಎನ್ನುವ ಅಂಶ ನಮ್ಮ ಸ್ಮರಣಶಕ್ತಿ ಕುಂದಿಸುತ್ತದೆ ಎನ್ನುವುದು ಸಂಶೋಧನೆಗಳಿಂದ ದೃಡ ಪಟ್ಟಿದೆ.ಬೇಕಾದ ಮಾಹಿತಿಯನ್ನು ಗೂಗಲ್‍ನಂತಹ ‍ಸರ್ಚ್ ಇಂಜಿನ್‍ಗಳು  ‍ಕ್ಷಣಮಾತ್ರದಲ್ಲಿ ಹುಡುಕಿಕೊಡುತ್ತವೆ,ಮತ್ಯಾಕೆ ಅವುಗಳನ್ನು ನೆನಪಿನಲ್ಲಿರಿಸುವ ಕಷ್ಟ ತೆಗೆದುಕೊಳ್ಳಬೇಕು ಎನ್ನುವುದು ನಮ್ಮ ಯೋಚನಾಲಹರಿಯಲ್ಲಿ ಸೇರಿಹೋಗುತ್ತದೆ.ಇದನ್ನು ಖಚಿತ ಪಡಿಸಿಕೊಳ್ಳಲು ಹಲವಾರು ಪರೀಕ್ಷೆಗಳನ್ನೂ ನಡೆಸಿ,ಸಂಶೋಧಕರು ತಮ್ಮ ಪ್ರಬಂಧ ಮಂಡಿಸಿದ್ದಾರೆ.ಜನರನ್ನು ಎರಡು ಗುಂಪುಗಳಾಗಿಸಿ,ಹಲವು ವಿಷಯಗಳನ್ನು ಹೇಳುವಾಗ,ಒಂದು ಗುಂಪಿಗೆ ಮಾಹಿತಿಯು ಕಂಪ್ಯೂಟರಿನಲ್ಲಿ ಉಳಿಯುತ್ತದೆ ಎಂದೂ, ಇನ್ನೊಂದಕ್ಕೆ ಮಾಹಿತಿ ಎಲ್ಲೂ ಉಳಿಯದು ಎಂದೂ ಸೂಚಿಸಿಲಾಯಿತು.ನಂತರ ಹಂಚಿಕೊಂಡ ಮಾಹಿತಿಯ ಮೇಲೆ ಪ್ರಶ್ನೆಗಳನ್ನು ಕೇಳಿದಾಗ,ಮೊದಲ ಗುಂಪು ಉತ್ತರಿಸಲು ಕಂಪ್ಯೂಟರ್ ಬಳಕೆ ಮಾಡುವುದೂ ಕಂಡು ಬಂತು.ಎರಡನೆಯ ಗುಂಪು ಮಾಹಿತಿಯನ್ನು ನೆನಪಿನಲ್ಲಿರಿಸಲು ಶಕ್ತವಾಯಿತು. ಇಂತಹ ಇನ್ನೂ ಕೆಲವು ಪರೀಕ್ಷೆಗಳು ಇದೇ ತೆರನ ಫಲಿತಾಂಶ ನೀಡಿದುವು.ತರಗತಿಗಳಲ್ಲೂ ಪ್ರಶ್ನೆಗಳನ್ನು ಕೇಳಿದಾಗ,ಸ್ಮಾರ್ಟ್‌ಪೋನುಗಳ ಮೂಲಕ ಅಂತರ್ಜಾಲದಲ್ಲಿ ಹುಡುಕಾಡಿ ಉತ್ತರಿಸುವ ಯತ್ನ ಮಾಡುವ ಟ್ರೆಂಡ್ ಬೆಳೆದಿದೆ.ವಿದ್ಯಾಥಿಗಳು ಬುದ್ಧಿವಮ್ತರಾ
-------------------------------
ಗೂಗಲ್ ಸಯನ್ಸ್ ಫೇರ್:ಹುಡುಗಿಯರೇ ಮುಂದೆ
ಗೂಗಲ್ ಸಯನ್ಸ್ ಫೇರ್ ಎನ್ನುವ ವಿಜ್ಞಾನ ಸಂಶೋಧನಾ ಸ್ಪರ್ಧೆಯಲ್ಲಿ ಹೆಚ್ಚಿನ ಬಹುಮಾನಗಳನ್ನು ಹುಡುಗಿಯರೇ ಬಗಲಿಗೇರಿಸಿಕೊಂಡಿದ್ದಾರೆ.ಕಂಪ್ಯೂಟರ್ ಕಂಪೆನಿಯೊಂದು ನಡೆಸಿದ ಸ್ಪರ್ಧೆಯಲ್ಲಿ ಮೊದಲ ಮುರೂ ಬಹುಮಾನಗಳೂ ಬಯೋಸಯನ್ಸ್‌ಗೆ ಸಂಬಂಧಿಸಿದ ಸಂಶೋಧನೆಗಳ ಪಾಲಾಗಿರುವುದೂ ಇನ್ನೊಂದು ವಿಶೇಷ.ಅಂಡಾಶಯದ ಕ್ಯಾನ್ಸರಿನಿಂದ ಬಳಲುವ,ಕೇಮೋತೆರಪಿ ಚಿಕಿತ್ಸೆಗೆ ಬಗ್ಗದ ರೋಗಿಗಳಿಗೆ ಚಿಕಿತ್ಸೆ ನೀಡುವ ಕ್ರಮವನ್ನು ಸಂಶೋಧಿಸಿರುವ ಹದಿನೇಳು ವರ್ಷದ ಶ್ರೀಬೋಸ್,ಗಾಳಿಯನ್ನು ಸ್ವಚ್ಛಗೊಳಿಸಿ,ಅಸ್ತಮಾದಂತಹ ತೊಂದರೆಯಿರುವವರಿಗೆ ಕೋಣೆಯನ್ನು ಹೆಚ್ಚು ಸುಖಕರವಾಗಿಸುವ ನವೋಮಿ ಶಾ ಅವರ ಸಂಶೋಧನೆಗಳು ಬಹುಮಾನ ಗಳಿಸಿವೆ.ಗ್ರಿಲ್ ಮಾಡಿದ ಕೋಳಿಯಲ್ಲಿರುವ ಕ್ಯಾನ್ಸರ್‌ಕಾರಕ ಅಂಶಗಳನ್ನು ಕಡಿಮೆಗೊಳಿಸುವ ವಿಧಾನಗಳನ್ನು ಸಂಶೋಧಿಸಿರುವ ಲೌರೆನ್ ಹೋಜ್ ಕೂಡಾ ಬಹುಮಾನ ಗೆದ್ದಿದ್ದಾರೆ.ಇವೆಲ್ಲವೂ ಒಂದೇ ಬಗೆಯ ಸಂಶೋಧನೆಗಳು.ಸ್ಪರ್ಧೆಯಲ್ಲಿ ತೊಂಭತ್ತೊಂದು ದೇಶಗಳ ಏಳೂವರೆ ಸಾವಿರ ಪ್ರಾಜೆಕ್ಟ್‌ಗಳನ್ನು ಪರಿಶೀಲಿಸಲಾಯಿತು.ಅತ್ಯುತ್ತಮ ಹದಿನೈದು ಪ್ರಾಜೆಕ್ಟ್‌ಗಳಿಗೆ ಬಹುಮಾನ ನೀಡಲಾಯಿತು.ಪಾನೀಯದ ಕ್ಯಾನುಗಳನ್ನು ಮರುಬಳಕೆ ಮಾಡಿ,ಸೌರಶಕ್ತಿ ಉತ್ಪಾದಿಸುವ,ಅಂಗವಿಕಲರಿಗೆ ಸಹಾಯಕವಾಗಬಲ್ಲ ರೊಬೋಟಿಕ್ ಅಂಗಗಳೂ ಬಹುಮಾನಕ್ಕೆ ಪರಿಶೀಲನೆಗೊಳಗಾದ ಪ್ರಾಜೆಕ್ಟುಗಳಲ್ಲಿ ಸೇರಿವೆ.
-----------------------------------------------------------------
ಧರ್ಮಕ್ವಿಜ್:ಟ್ವಿಟರಿನಲ್ಲಿ ಕ್ವಿಜ್
http://dharmaquiz.blogspot.comನಲ್ಲಿ ನಿಯಮಿತವಾಗಿ ರಸಪ್ರಶ್ನೆಗಳನ್ನು ಕೇಳಲಾಗುತ್ತದೆ.ಈ ಪ್ರಶ್ನೆಗಳು ಟ್ವಿಟರಿನಲ್ಲಿಯೂ ಕೇಳಲ್ಪಡುತ್ತವೆ.ಕಿರಣ್ ಎಂಬ ಉತ್ಸಾಹಿ,ಈ ರಸಪ್ರಶ್ನೆಗಳನ್ನು ಕೇಳುತ್ತಾರೆ.ಟ್ವಿಟರ್ ಸಂದೇಶದಲ್ಲಿ ಪ್ರಶ್ನೆಸಂಖ್ಯೆ ನಮೂದಿಸಿ,ಆಸಕ್ತರು ಕಿರಣ್ ಅವರಿಗೆ ಉತ್ತರಿಸುತ್ತಾರೆ.ದಿನದಾಂತ್ಯದಲ್ಲಿ, ಸರಿಯುತ್ತರಗಳನ್ನು ಮತ್ತು ವಿಜೇತರ ಪಟ್ಟಿಯನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಾರೆ.ಟ್ವಿಟರಿನಲ್ಲಿಯೂ ವಿಜೇತರ ಪಟ್ಟಿ,ಸಂದೇಶವಾಗಿ ಕಾಣಿಸಿಕೊಳ್ಳುತ್ತದೆ.ಪ್ರಶ್ನೆಗಳು ಭಾರತದ ಸಂಸ್ಕೃತಿ,ಪುರಾಣ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ್ದು ಎನ್ನುವುದು ಬ್ಲಾಗಿನ ಹೆಸರೂ ಸೂಚಿಸುತ್ತದೆ.ಟ್ವಿಟರ್‌ನ http://twitter.com/#!/KiranKS ಎನ್ನುವ ಪುಟದಲ್ಲಿ ರಸಪ್ರಶ್ನೆ ಕಾಣಿಸಿಕೊಳ್ಳುತ್ತದೆ
---------------------------------------------------------------
ವಿಂಡೋಸ್:ಹೆಸರಿಗೆ ಗುಡ್‌ಬೈ?
ಮೈಕ್ರೋಸಾಫ್ಟ್ ತನ್ನ ಪ್ರಸಿದ್ಧ ಆಪರೇಟಿಂಗ್ ವ್ಯವಸ್ಥೆ ವಿಂಡೋಸ್ ಎಂಬ ಹೆಸರಿಗೆ ವಿದಾಯ ಹೇಳಲಿದೆಯೇ?1983ನಿಂದಾರಂಭಿಸಿ,ಈಗಲೂ ಅದೇ ಹೆಸರಿಗೆ ಜೋತು ಬಿದ್ದಿರುವ ಕಂಪೆನಿಯು,ತನ್ನ ತಂತ್ರಾಂಶದ  ಕೆಲವು ಹೊಸ ಆವೃತ್ತಿಗಳಲ್ಲಿ ಹಿನ್ನಡೆ ಕಂಡಿರುವುದೂ ಇದೆ."ಕಂಪ್ಯೂಟರ್ ಕಿಟಕಿ ತೆರೆದನವ,ಮುಚ್ಚಿದ ಕೋಣೆಯ ಕಿಟಕಿ" ಎಂಬಂತಹ ಕವನದ ಕಟಕಿ ಸಾಲು(ಕೃಪೆ:ತರಂಗ),"ವಿಂಡೋಸ್‌ಗೆ ಯಾಕಂಟಿದ್ದೀರಿ,ನಾವು ಬಾಗಿಲು(ಡೋರ್) ತೆರೆದಿರುವಾಗ?" ಎಂಬಂತಹ ಎದುರಾಳಿ ಲಿನಕ್ಸ್ ಉತ್ಸಾಹಿಗಳ ನುಡಿಗೆ ವಸ್ತುವಾಗಿರುವ,ವಿಂಡೋಸ್‌ಗೆ ಹೊಸ ಇಮೇಜ್ ಒದಗಿಸಲು ಹೆಸರು ಬದಲಾವಣೆ ಸೂಕ್ತವೆಂದು ಮೈಕ್ರೋಸಾಫ್ಟ್‌ಗೆ ಅನಿಸಿದ್ದರೆ ಆಶ್ಚರ್ಯವಿಲ್ಲ.ಆದರೂ,ಯಶಸ್ಸು ಗಳಿಸಿ,ಜನರ ಮೆಚ್ಚಿನ ಆಯ್ಕೆಯಾಗಿರುವ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶದ ಹೆಸರನ್ನು ಬಿಟ್ಟುಕೊಡುವುದು ಅಂತಹ ಸುಲಭದ ನಿರ್ಧಾರವೂ ಅಲ್ಲ.ಈಗ ಸ್ಮಾರ್ಟ್‌ಪೋನ್,ಟ್ಯಾಬ್ಲೆಟ್,ಡೆಸ್ಕ್‌ಟಾಪ್ ಮತ್ತು ನೋಟ್‌ಬುಕ್ ಹೀಗೆ ಎಲ್ಲಾ ಸಾಧನಗಳಿಗೂ ಸೂಕ್ತವಾದ ತಂತ್ರಾಂಶ ವ್ಯವಸ್ಥೆಗೆ ಸರಿ ಹೊಂದುವ ಹೆಸರಿನ ಹುಡುಕಾಟ ನಡೆದಿರಬಹುದು.ಸದ್ಯಕ್ಕಂತೂ ಇದು ಅಂತೆಕಂತೆ.
--------------------------------------------
ಗೂಗಲ್ ಟ್ರಾನ್ಸಿಟ್:ಚೆನ್ನೈ,ಹೈದರಾಬಾದ್‌ನಲ್ಲಿ ಲಭ್ಯ
ಬಸ್ ಮತ್ತು ರೈಲು ಸೇವೆಗಳ ಲಭ್ಯತೆ ಬಗ್ಗೆ ಜನರಿಗೆ ಮಾಹಿತಿ ನೀಡುವ ಗೂಗಲ್ ಟ್ರಾನ್ಸಿಟ್ maps.google.co.inನಲ್ಲಿ ಲಭ್ಯವಿದೆ.ಸದ್ಯ ಚೆನ್ನೈ ಮತ್ತು ಹೈದರಾಬಾದ್ ನಗರಗಳ ಬಳಕೆಗಷ್ಟೇ ಇದು ತೆರೆದಿದೆ.ಸಾರ್ವಜನಿಕ ಸಾರಿಗೆ ಉಪಯೋಗಿಸುವವರಿಗೆ,ನಗರದ ಎರಡು ಸ್ಥಳಗಳ ನಡುವೆ ಎಷ್ಟು ಬಸ್‌ಗಳ ಲಭ್ಯತೆ,ಅವುಗಳ ಸಮಯ,ಪ್ರಯಾಣ ಸಮಯದಂತಹ ಮಾಹಿತಿಗಳನ್ನು ಪಡೆಯಲು ಸೇವೆ ಸೂಕ್ತವಾಗಿದೆ.ಅಧಿಕೃತ ಮಾಹಿತಿಗಳನ್ನು ಇಲ್ಲಿ ಲಭ್ಯವಾಗಿಸಲಾಗಿದೆ.ಇಲ್ಲಿನ ಮಾಹಿತಿಗಳು ತಾಜಾ ಮಾಹಿತಿಗಳೇನೂ ಅಲ್ಲ.ಹಾಗಾಗಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಓಡಾಡದಿದ್ದರೆ,ಅಥವಾ ರದ್ದಾಗಿದ್ದರೆ ಅನನುಕೂಲವಾಗಬಹುದು.ಸ್ಮಾರ್ಟ್‌ಫೋನ್ ಬಳಸುವವರಿಗೆ,ಸಮೀಪದ  ಬಸ್‍ಸ್ಟಾ‍ಪ್ ಬಗ್ಗೆಯೂ ಮಾಹಿತಿ ಸಿಗುತ್ತದೆ.ಇಲ್ಲಿ ವ್ಯಕ್ತಿಯ ಸ್ಥಾನ ಪತ್ತೆ ಮಾದುವ ತಂತ್ರಜ್ಞಾನ ಉಪಯೋಗಕ್ಕೆ ಬರುತ್ತದೆ.  
-----------------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ನಿವೃತ್ತ ಬ್ಯಾಂಕ್ ಅಧಿಕಾರಿ ಎ ಎಸ್ ಕಲ್ಲೂರಾಯ,ಅಂಬಲಪಾಡಿ.
*ಜುಲೈ 24ಕ್ಕೆ ಆರು ವರ್ಷ ಪೂರೈಸುವ ಜನಪ್ರಿಯ ಕನ್ನಡ ಸಮುದಾಯ ತಾಣ ಯಾವುದು?
*ವಾರ್ಷಿಕೋತ್ಸವ ಸಂದರ್ಭ ನಡೆದ ಇನ್ನೊಂದು ವಿಶೇಷ ಕಾರ್ಯಕ್ರಮ ಏನು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS40 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಗೂಗಲ್ ಬಜ್‌ನಲ್ಲಿ ತಮ್ಮ ಬಳಗದ ಜತೆ "ಉದಯವಾಣಿ"ಯ ಮಂಗಳೂರು ಬ್ಯೂರೋದ ಮುಖ್ಯಸ್ಥ ಮನೋಹರ ಪ್ರಸಾದ್ ಅವರ "ನನಗೂ ಕ್ರಿಕೆಟಿಗೂ ನಲುವತ್ತು ವರ್ಷದ ನಂಟು" ಬ್ಲಾಗನ್ನು ಹಂಚಿಕೊಂಡ ಪ್ರೇಮಲತಾ ಅವರು ಬಹುಮಾನ ಗೆದ್ದಿದ್ದಾರೆ. ಅಭಿನಂದನೆಗಳು.
UDAYAVANI
*ಅಶೋಕ್‌ಕುಮಾರ್ ಎ

Monday, July 11, 2011

ಜಿಯೋಕ್ಯಾಷಿಂಗ್:ಅಂತರ್ಜಾಲದ ಮೂಲಕ ಟ್ರೆಷರ್ ಹಂಟ್

ಜಿಯೋಕ್ಯಾಷಿಂಗ್:ಅಂತರ್ಜಾಲದ ಮೂಲಕ ಟ್ರೆಷರ್ ಹಂಟ್

ಅಂತರ್ಜಾಲಿಗರು ಹೊರಜಗತ್ತಿನಿಂದ ದೂರವುಳಿಯದೆ ಆಡಬಹುದಾದ ಆಟವೇ "ಜಿಯೋಕ್ಯಾಶಿಂಗ್". ಇದರಲ್ಲಿ ಉತ್ಸಾಹಿಗಳು ಸಣ್ಣ ಉಡುಗೊರೆಗೊರೆಯನ್ನು ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ತುಂಬಿ,ಅವಿತಿಡುತ್ತಾರೆ.ಇದರ ಜತೆಗೆ ಈ ಸ್ಥಳದ,ಅಕ್ಷಾಂಶ-ರೇಖಾಂಶಗಳ ಮಾಹಿತಿಯೂ ಇರುತ್ತದೆ.ಈ ಸ್ಥಾನದ ಮಾಹಿತಿಯನ್ನು ಆನ್‌ಲೈನಿನ ನಿಗದಿತ ತಾಣದಲ್ಲೂ ದಾಖಲಿಸುತ್ತಾರೆ.ಜಿಪಿಎಸ್ ಸಾಧನದ ಮೂಲಕ ಈ ಸ್ಥಾನದ ಮಾಹಿತಿಯನ್ನವರು ಕಂಡುಕೊಳ್ಳುತ್ತಾರೆ.ಇಲ್ಲಿ ಅವಿತಿರಿಸುವ ಡಬ್ಬವೇ ಜಿಯೋಕ್ಯಾಷ್.ಆಟದಲ್ಲಿ ಭಾಗವಹಿಸಲಿಚ್ಛಿಸುವವರು,ಅಂತರ್ಜಾಲದಲ್ಲಿ ನೋಂದಾಯಿಸಿಕೊಂಡು,ತಾವಿರುವ ಜಾಗದ ಸಮೀಪವಿರುವ ಜಿಯೋಕ್ಯಾಷ್‌ಗಳ ಸ್ಥಾನವನ್ನರಿತುಕೊಂಡು,ಅವುಗಳನ್ನು ಹುಡುಕಬಹುದು.ಈ ಹುಡುಕಾಟಕ್ಕೆ ಅವರ ಸ್ಮಾರ್ಟ್‌ಪೋನುಗಳ ಜಿಪಿಎಸ್ ಸೌಲಭ್ಯ ಸಹಾಯ ಮಾಡುತ್ತದೆ ಎನ್ನುವುದು ಸ್ಪಷ್ಟ.ಅವನ್ನು ಪತ್ತೆ ಮಾಡಿದರೆ,ಅದನ್ನು ಡಬ್ಬದಲ್ಲಿರುವ ಕಾಗದದಲ್ಲಿ ಬರೆದಿಡುವ ಜತೆಗೆ,ಅನ್‌ಲೈನಿನಲ್ಲೂ ದಾಖಲಿಸಬೇಕು.ಉಡುಗೊರೆಯನ್ನು ತೆಗೆದುಕೊಳ್ಳುವುದೂ ಬಿಡುವುದು ಆಟಗಾರರಿಗೆ ಬಿಟ್ಟಿದ್ದು.ಬೇರೆ ಉಡುಗೊರೆಯನ್ನು ಇಡಲೂ ಬಹುದು.ಮಂಗಳೂರಿನ "ಉದಯವಾಣಿ" ಓದುಗ ಲಕ್ಷ್ಮೀನಾರಾಯಣ ಕಾಮತ್ ಅಮ್ಮೆಂಬಳ ಅವರು "ಜಿಯೋಕ್ಯಾಷಿಂಗ್" ಉತ್ಸಾಹಿ.ಓದುಗರು geocaching.com ಅಂತರ್ಜಾಲತಾಣವನ್ನು ನೋಡಿ,ಇದರಲ್ಲಿ ಭಾಗವಹಿಸಲು ಕೋರಿದ್ದಾರೆ.
-------------------------
ವಿಡಿಯೋ ಚಾಟಿಂಗೇ ನನ್ನ ಉತ್ತರ:ಫೇಸ್‌ಬುಕ್
ಕಳೆದವಾರ ಗೂಗಲ್ ಪ್ಲಸ್ ಸಾಮಾಜಿಕ ಜಾಲತಾಣವನ್ನು ಆರಂಭಿಸಿ,ಫೇಸ್‌ಬುಕ್‌ಗೆ ಸವಾಲೊಡ್ಡಲು ಮತ್ತೊಂದು ಪ್ರಯತ್ನ ಆರಂಭಿಸಿದ ಗೂಗಲ್ ಸುದ್ದಿಯಲ್ಲಿದೆ.ಗೂಗಲ್ ಪ್ಲಸ್‌ನ ಸವಾಲಿನ ಬೆನ್ನ ಹಿಂದೆಯೇ ಫೇಸ್‌ಬುಕ್ ತನ್ನ ಬಳಕೆದಾರರಿಗೆ ವಿಡಿಯೋಚಾಟಿಂಗ್ ಸೇವೆ ಒದಗಿಸಲಾರಂಭಿದೆ.ಇದನ್ನು ಸ್ಕೈಪ್ ಎನ್ನುವ ಅಂತರ್ಜಾಲ ಆಧಾರಿತ ದೂರಸಂಪರ್ಕ ಸವಲತ್ತು ನೀಡುತ್ತಿರುವ ಜನಪ್ರಿಯ ಕಂಪೆನಿಯ ಸಹಭಾಗಿತ್ವದಲ್ಲಿ ನೀಡುತ್ತಿದೆ. ಹೀಗಾಗಿ,ಸ್ಕೈಪ್ ಬಳಕೆದಾರರು, ಫೇಸ್‌ಬುಕ್ ಸದಸ್ಯರಾಗಿಲ್ಲವಾದರೆ,ಈಗ ಹೊಸತಾಗಿ ಸೇರುವ ಸಾಧ್ಯತೆಯೂ ಇದೆ.ಫೇಸ್‌ಬುಕ್ ತನ್ನ ಬಳಕೆದಾರರನ್ನು ತನ್ನ ತಾಣದಲ್ಲಿ ಹೆಚ್ಚು ಹೊತ್ತು ನಿಲ್ಲುವಂತೆ ಮಾಡುವ, ಆಟ,ಮನರಂಜನೆ ಸೇವೆಗಳನ್ನು ಒದಗಿಸಿ,ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳಲೂ ಶಕ್ತವಾಗುತ್ತಿದೆ.ವಿಡಿಯೋಚಾಟಿಂಗ್ ಈ ಅವಧಿಯನ್ನು ಹೆಚ್ಚಿಸುವ ಸಾಧ್ಯತೆ ಉಜ್ವಲವಾಗಿದೆ.ಗೂಗಲ್ ಪ್ಲಸ್‌ನಲ್ಲಿಯೂ ವಿಡಿಯೊಚಾಟಿಂಗ್ ಸೌಕರ್ಯವಿದೆ.ಮಾತ್ರವಲ್ಲ,ಅದು ಫೇಸ್‌ಬುಕ್‌ನ ವಿಡಿಯೋಚಾಟ್‌ಗಿಂತ ಹೆಚ್ಚು ಅನುಕೂಲಕರವೂ ಹೌದು-ಹೇಗೆನ್ನುತ್ತೀರಾ?ಅಲ್ಲಿ ಹತ್ತುಮಂದಿ ಏಕಕಾಲದಲ್ಲಿ ಜತೆ ಸೇರಿ ವಿಡಿಯೋಚಾಟಿಂಗ್ ಮಾಡಬಹುದು.ಗೆಳೆಯರ ಬಳಗದ ಸಂವಾದಕ್ಕದು ಹೇಳಿ ಮಾಡಿಸಿದಂತಿದೆ.ಗೂಗಲ್ ಪ್ಲಸ್ ಅದಕ್ಕೆ ಹ್ಯಾಂಗೌಟ್ ಎಂಬ ಹೆಸರನ್ನೂ ನೀಡಿದೆ.ಫೇಸ್‌ಬುಕ್‌ನ ವಿಡಿಯೋಚಾಟಿಂಗ್‌ನಲ್ಲಿ ಸದ್ಯಕ್ಕಂತೂ ಈರ್ವರೇ ಮಾತನಾಡಲು ಬರುತ್ತದೆ.ಸ್ಕೈಪ್ ಕಂಪೆನಿಗೆ ಈ ಪಾಲುದಾರಿಕೆಯಿಂದ ಲಾಭವಿದೆಯೇ?ಹೌದು,ಫೇಸ್‌ಬುಕ್‌ನ ಎಪ್ಪತ್ತೈದು ಕೋಟಿಯ ಬಳಕೆದಾರರ ಪೈಕಿ,ಎಷ್ಟೋ ಜನ ಸದ್ಯ ಸ್ಕೈಪ್‌ನ್ನು ಬಳಸದವರಿರಬಹುದು.ಇವರು ಮಾಮೂಲಿ ಫೋನ್‌ಲೈನುಗಳಿಗೆ ಕರೆ ಮಾಡಿದಾಗ,ಅದಕ್ಕೆ ಶುಲ್ಕ ಪಾವತಿಸ ಬೇಕಾಗಬಹುದು-ಅದು ಅಗ್ಗವೇನೋ ಹೌದು,ಆದರೆ ಸ್ಕೈಪ್ ಆದಾಯ ಹೆಚ್ಚಳ ಆಗದಿರದು.ಅಂದ ಹಾಗೆ ಮೈಕ್ರೋಸಾಫ್ಟ್ ಸ್ಕೈಪನ್ನಿ ಖರೀದಿಸುವುದರಲ್ಲಿದೆ.ಫೇಸ್‌ಬುಕ್‌ನಲ್ಲೂ ಮೈಕ್ರೋಸಾಫ್ಟ್ ಪಾಲುದಾರಿಕೆ ಹೊಂದಿದೆ.ಮೈಕ್ರೋಸಾಫ್ಟ್ ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿಯಾದ ನೋಕಿಯಾದ ಜತೆಯೂ ಹೊಸತಾಗಿ ಒಪ್ಪಂದ ಮಾಡಿ ತನ್ನ ಆಪರೇಟಿಂಗ್ ವ್ಯವಸ್ಥೆಯನ್ನು ನೋಕಿಯಾ ಫೋನ್ ಸೆಟ್ಟುಗಳಲ್ಲಿ ಬಳಸಲು ಉಪಾಯ ಮಾಡಿದೆ.ಇವೆಲ್ಲವೂ ಈ ಕಂಪೆನಿಗಳ ಪರಸ್ಪರ ಸಹಕಾರ,ಸಹಭಾಗಿತ್ವಕ್ಕೆ ಕಾರಣವಾಗಲಿದೆ.ಗೂಗಲ್ ಈ ಅತಿರಥ-ಮಹಾರಥರುಗಳ ಒಗ್ಗಟ್ಟಿನ ಬಲದ ಮುಂದೆ ಸ್ಪರ್ಧಿಸಿ ಏಗುವಷ್ಟು ಪ್ರಬಲವಾಗಿದೆಯೇ ಎನ್ನುವುದು ಕುತೂಹಲದ ವಿಷಯ.ಗೂಗಲ್ ಪ್ಲಸ್ ಅನ್ನು ಫೇಸ್‌ಬುಕ್‌ಗೆ ಹೋಲಿಸಿದಾಗ ತುಂಬಾ ವಿಭಿನ್ನವಾಗಿಲ್ಲ,ಅದು ಸಾಧ್ಯವೂ ಅಲ್ಲವೆನ್ನಿ.ವಿಡಿಯೋ ಚಾಟಿಂಗ್ ಗೂಗಲ್ ಪ್ಲಸ್‌ನ ಪ್ಲಸ್ ಪಾಯಿಂಟ್ ಆಗಬಹುದಿತ್ತು-ಆದರೀಗ ಅದಕ್ಕೂ ಹೆಚ್ಚಿನ ಕಲ್ಲುಬಿದ್ದಿದೆ. ದಿನಗಳೆದಂತೆ ಫೇಸ್‍ಬುಕ್-ಸ್ಕೈಪ್ ಸಹಭಾಗಿತ್ವ ಚಾಟ್ ಸೇವೆ ಹೆಚ್ಚು ಸಮೃದ್ಧವಾಗಲಿದೆ.
----------------------------------
ಫೇಸ್‌ಬುಕ್ ಹಿಂದಿಕ್ಕಲು ಗೂಗಲ್ ಪ್ಲಸ್ ಏನು ಮಾಡಬಹುದು?
ಅಂದಹಾಗೆ ಗೂಗಲ್ ಪ್ಲಸ್ ಸಂಗೀತದ ಮೂಲಕವೇ ಜನಾಕರ್ಷಣೆ ಹೆಚ್ಚಿಸಿಕೊಳ್ಳಬಹುದು ಎಂಬ ಸಲಹೆಗಳು ಬರುತ್ತಿವೆ.ಗೂಗಲ್ ಪ್ಲಸ್‌ನ ಹ್ಯಾಂಗೌಟ್ ಸಂವಾದದಲ್ಲಿ ಸಂಗೀತದ ಆಲ್ಬಮುಗಳನ್ನು ಜತೆಗೇ ಅಲಿಸುವ ಸವಲತ್ತನ್ನು ನೀಡಲು ಹೆಚ್ಚು ಕಷ್ಟವಿಲ್ಲ.ಹೇಗೂ ಯುಟ್ಯೂಬಿನ ಅಪಾರ ಸಂಗೀತ ಮುದ್ರಿಕೆಗಳ ದೊಡ್ಡ ಸಂಗ್ರಹ ಗೂಗಲ್‌ನಲ್ಲಿದೆ.ಹ್ಯಾಂಗೌಟ್‌ನ್ನು ಬಳಸುವವರು,ಜತೆಗೂಡಿ ಸಂಗೀತ ರಚಿಸಿ,ಯುಟ್ಯೂಬಿಗೆ ಅಪ್ಲೋಡ್ ಮಾಡುವ ಸೌಕರ್ಯ ನೀಡಲೂ ಬಹುದು.ಗೂಗಲ್‌ನ ಆಂಡ್ರಾಯಿಡ್ ಅಪ್ಲಿಕೇಶನ್‌ಗಳ ಮೂಲಕ ಗೂಗಲ್ ಪ್ಲಸ್‌ನ್ನು ಸ್ಮಾರ್ಟ್‌ಪೋನುಗಳಲ್ಲಿ ಹೆಚ್ಚು ಜನಪ್ರಿಯವಾಗಿಸಿ,ಫೇಸ್‌ಬುಕ್‌ಗೆ ದೊಡ್ಡ ಸವಾಲೆಸೆಯಬಹುದು.ಇಲ್ಲಂತೂ ಫೇಸ್‌ಬುಕ್ ಹಿನ್ನಡೆಯಲ್ಲಿದೆ.ಗೂಗಲ್ ಮ್ಯೂಸಿಕ್ ಬೀಟಾ ಎನ್ನುವ ಸೇವೆಯನ್ನು ಅಭಿವೃದ್ಧಿ ಪಡಿಸುತ್ತಿರುವ ಗೂಗಲ್,ಅದನ್ನು ಗೂಗಲ್ ಪ್ಲಸ್‌ನಲ್ಲಿ ನವೀನ ಸೇವೆಗಳನ್ನು ಶುರು ಮಾಡಲು ಬಳಸುವ ಸಾಧ್ಯತೆಗಳ ಕಡೆಗೂ ಗಮನ ಹರಿಸಬಹುದು.
----------------------------------------------------------
ಕಾಣಲಾಗದವರಿಗೆ ಕನ್ನಡಕ
ದೃಷ್ಟಿದೋಷದಿಂದ ತಮ್ಮ ಮುಂದಿನ ಅಡೆತಡೆಗಳನ್ನು ಸ್ಪಷ್ಟವಾಗಿ ನೋಡಲಾಗದವರಿದೆ ಸಹಾಯ ಮಾಡುವ ಕನ್ನಡಕ ಬಂದಿದೆ.ಇದರಲ್ಲಿ ಕನ್ನಡಕಕ್ಕೆ ಕ್ಯಾಮರಾಗಳನ್ನು ಮತ್ತು ಮೈಕ್ರೋಕಂಪ್ಯೂಟರನ್ನು ಅಳವಡಿಸಲಾಗಿದೆ.ಕನ್ನಡಕದ ಒಳಭಾಗದಲ್ಲಿ ನೂರಾರು ಎಲ್ ಇ ಡಿ ದೀಪಗಳಿವೆ.ಅಡೆತಡೆಗಳಿದ್ದರೆ,ದೀಪಗಳು ಪ್ರಖರವಾಗಿ ಬೆಳಗುವಂತೆ ಕಂಪ್ಯೂಟರ್ ಮಾಡುವುದರಿಂದ,ವ್ಯಕ್ತಿಗೆ ಸೂಚನೆ ಸಿಗುತ್ತದೆ. ಆತ ಪಕ್ಕಕ್ಕೆ ಸರಿದು ಮುಂದೆ ಸಾಗುವ ಮೂಲಕ ಅಡೆತಡೆಯನ್ನು ನಿವಾರಿಸಿಕೊಳ್ಳಬಹುದು.
--------------------------------------------
ಸ್ಮಾರ್ಟ್‌ಫೋನ್:ಮಾತು,ಕಡ್ಡಿ ಬರವಣಿಗೆ

ಸ್ಪರ್ಶಸಂವೇದಿ ಸ್ಮಾರ್ಟ್‌ಪೋನುಗಳಲ್ಲಿ ಮಾತಿನ ಮೂಲಕ ಪದಪುಂಜವನ್ನುಚ್ಛರಿಸಿ,ಅದನ್ನು ಗೂಗಲ್ ಶೋಧ ಸೇವೆ ಮೂಲಕ ಹುಡುಕುವ ಸವಲತ್ತನ್ನು ಗೂಗಲ್ ನೀಡುತ್ತಿದೆ.ಸ್ಮಾರ್ಟ್‌ಪೋನುಗಳಲ್ಲಿ ಈ ರೀತಿಯ ಶೋಧ ಸಹಜ ಕೂಡಾ-ಹೇಗೋ ಧ್ವನಿಗ್ರಹಣಕ್ಕೆ ಅಗತ್ಯವಾದ ಮೈಕ್ ಹ್ಯಾಂಡ್‌ಸೆಟ್ಟಿನಲ್ಲಿರುತ್ತದೆ.ಬಾಯಿಯನ್ನು ಮೈಕ್ ಬಳಿ ಹಿಡಿದು ಪದವನ್ನುಚ್ಛರಿಸುವುದೂ ತೊಂದರೆಯಲ್ಲ.ಡೆಸ್ಕ್‌ಟಾಪ್ ಕಂಪ್ಯೂಟರುಗಳಲ್ಲೂ ಈ ಸೌಲಭ್ಯವನ್ನು ನೀಡಲು ಶುರು ಮಾಡಿದ್ದರೂ,ಮೈಕ್ ದೂರದಲ್ಲಿರುವುದು ಮತ್ತದು ಸಾಕಷ್ಟು ಶಕ್ತಿಶಾಲಿಯಾಗಿಲ್ಲದಿರುವುದು ಸಮಸ್ಯೆಯೊಡ್ಡಿದೆ.ಇನ್ನು ಸ್ಮಾರ್ಟ್‌ಪೋನುಗಳಲ್ಲಿ ಸಂದೇಶ ಬರೆಯಲು ಕಡ್ಡಿ(ಸ್ಟೈಲಸ್) ನೀಡುವ ಎಚ್ ಟಿ ಸಿ ಸ್ಮಾರ್ಟ್‌ಫೋನ್,ಸಣ್ಣ ತಂತ್ರಾಂಶದ ಜತೆ ಬಳಸಿದಾಗ ಬರವಣಿಗೆಯನ್ನು ದಾಖಲಿಸಿಕೊಳ್ಳಲು ಸಮರ್ಥವಾಗುತ್ತವೆ.ಚಿತ್ರ ರಚನೆಗಂತೂ ಇವು ಬಹು ಅನುಕೂಲಕರವಾಗಿವೆ.ಚಿತ್ರ ರಚಿಸಿದಾಗ ಕಡ್ಡಿಯ ಒತ್ತಡ ಮತ್ತು ವೇಗಕ್ಕನುಗುಣವಾಗಿ,ಚಿತ್ರ ಮೂಡಿಸಲು ಸೂಕ್ಷ್ಮಸಂವೇದಿ ತೆರೆಗಳು ಬೇಕು.
--------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ನಿವೃತ್ತ ಬ್ಯಾಂಕ್ ಅಧಿಕಾರಿ ಎ ಎಸ್ ಕಲ್ಲೂರಾಯ,ಅಂಬಲಪಾಡಿ.
*ಫೇಸ್‌ಬುಕ್ ಅಥವಾ ಗೂಗಲ್‌ಪ್ಲಸ್ ತಾಣದಲ್ಲಿ "ಉದಯವಾಣಿ"ಯ ಬಗ್ಗೆ ವಿಶೇಷವನ್ನೇನಾದರೂ ತಮ್ಮ ಬಳಗದ ಜತೆ ಹಂಚಿಕೊಳ್ಳಿ.ಇದರ ಮಾಹಿತಿ ನೀಡಿ.ಅತ್ಯುತ್ತಮವಾದದ್ದಕ್ಕೆ ಬಹುಮಾನ.
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS39 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಆನ್‌ಲೈನ್ ಮೌಲ್ಯಮಾಪನ ಅಳವಡಿಸಿ,ಸುದ್ದಿಯಲ್ಲಿರುವ ವಿಶ್ವವಿದ್ಯಾಲಯ ಬೆಂಗಳೂರು ವಿ.ವಿ.
*ಹೊಸ ವ್ಯವಸ್ಥೆಯಲ್ಲಿ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ,ಅದನ್ನು ಮೌಲ್ಯಮಾಪಕರಿಗೆ,ಅಂತರ್ಜಾಲ ಮೂಲಕ ಕಳುಹಿಸಲಾಗುತ್ತದೆ.ಅಂಕಗಳನ್ನು ನೀಡುವಾಗ,ಪ್ರಶ್ನೆಗೆ ನೀಡಿದ ಅಂಕವು ನಿಗದಿತ ಅಂಕವನ್ನು ಮೀರದಂತೆ ಪರೀಕ್ಷಿಸುವ ವ್ಯವಸ್ಥೆಯಿದೆ.ಅಂಕಗಳನ್ನು ಕಂಪ್ಯೂಟರೇ ಕೂಡಿಸಿ ಉತ್ತರಪತ್ರಿಕೆಯಲ್ಲಿ ದಾಖಲಿಸುತ್ತದೆ.ವಿಶ್ವೇಶ್ವರಯ್ಯ ತಾಂತ್ರಿಕ ವಿವಿ(ವಿಟಿಯು) ಕೂಡಾ ಇದೇ ರೀತಿ ಮೌಲ್ಯಮಾಪನ ಮಾಡಿಸುತ್ತಿದೆ.ಸರಿಯುತ್ತರ ಕಳುಹಿಸಿ,ಬಹುಮಾನ ಪಡೆದವರು ಪ್ರಶಾಂತ್. ಅಭಿನಂದನೆಗಳು.
UDAYAVANI UNICODE
UDAYAVANI
*ಅಶೋಕ್‌ಕುಮಾರ್ ಎ

Monday, July 04, 2011

ಗೂಗಲ್ ಪ್ಲಸ್:ಆಮಂತ್ರಣ ಸಿಕ್ಕಿತೇ?

ಗೂಗಲ್ ಪ್ಲಸ್:ಆಮಂತ್ರಣ ಸಿಕ್ಕಿತೇ?

ಗೂಗಲ್ ಪ್ಲಸ್ ಎಂಬ ಹೊಸ ಸಾಮಾಜಿಕ ಜಾಲತಾಣ ವಾರವಿಡಿ ಸುದ್ದಿ ಮಾಡಿತು.ಅರ್ಕುಟ್,ಬಜ್ ಮತ್ತು ವೇವ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕ ಜನಾಕರ್ಷಣೆಗೆ ಗೂಗಲ್ ಯತ್ನಿಸಿ,ಅರ್ಕುಟ್‌ನಲ್ಲಿ ಮಾತ್ರಾ ತಕ್ಕ ಮಟ್ಟಿಗೆ ಯಶಸ್ವಿಯಾಯಿತು.ಫೇಸ್‌ಬುಕ್,ಟ್ವಿಟರ್ ಅಂತಹ ತಾಣಗಳು ಅಗಾಧ ಜನಸ್ತೋಮವನ್ನು ಆಕರ್ಷಿಸಿ,ಹಿಡಿದಿಟ್ಟುಕೊಳ್ಳಲು ಯಶಸ್ವಿಯಾಗಿ,ಗೂಗಲ್ ಮತ್ತೆ ಮತ್ತೆ ಇಂತಹ ಪ್ರಯನಕ್ಕೆ ಕೈಹಾಕುವಂತೆ ಮಾಡುತ್ತಿವೆ.ಆದರೆ ಗೂಗಲ್ ಸ್ಥಿತಿ,ರೈಲು ಹೋದ ಮೇಲೆ ನಿಲ್ದಾಣ ತಲುಪಿದ ಪ್ರಯಾಣಿಕನ ಸ್ಥಿತಿಯಂತಾಗಿದೆ ಎನ್ನದೆ ವಿಧಿಯಿಲ್ಲ.ಈಗಾಗಲೇ ಐವತ್ತು ಕೋಟಿ ಸದಸ್ಯರನ್ನು ಹೊಂದಿರುವ ಫೇಸ್‌ಬುಕ್ ತಾಣಕ್ಕೆ ಸ್ಪರ್ಧೆ ನೀಡಿ,ಜನರನ್ನು ಆಕರ್ಷಿಸಲು ಗೂಗಲ್ ಪ್ಲಸ್‌ನಲ್ಲಿ ಕೆಲವಾರು ಆಕರ್ಷಣೆಗಳಿವೆ.ಸದಸ್ಯರು ತಮ್ಮ ಗುರುತಿನವರನ್ನು ಸಂಬಂಧಿಗಳು,ಸ್ನೇಹಿತರು,ಸಹೋದ್ಯೋಗಿಗಳು ಹೀಗೆ ಬೇರೆ ಬೇರೆ ಗುಂಪಿಗೆ ಸೇರಿಸಬಹುದು.ಇದರಿಂದ ಒಮ್ದು ಗುಂಪಿನವರ ಜತೆ ಯಾವ ಮಾಹಿತಿ ಬೇಕೋ ಅದನ್ನು ಮಾತ್ರಾ ಹಂಚಿಕೊಳ್ಳಬಹುದು.ಖಾಸಗಿ ಚಿತ್ರಗಳನ್ನು ಸಂಬಂಧಿಗಳ ಜತೆ,ಸಹೋದ್ಯೊಗಿಗಳ ಜತೆ ಕಚೇರಿ ಮಾಹಿತಿಗಳನ್ನು ಹೀಗೆ ಹಂಚಿಕೊಳ್ಳಲು ಬರುವುದು ಇದರ ಪ್ಲಸ್‌ಪಾಯಿಂಟ್.ಈ ಸೌಕರ್ಯ ಇತರ ಜಾಣಗಳಲ್ಲಿಲ್ಲ.ಎಲ್ಲರಿಗೂ ನಿಮ್ಮ ಸಾರ್ವಜನಿಕ ಮಾಹಿತಿಗಳು ಲಭ್ಯವಾಗುತ್ತವೆ.ಹ್ಯಾಂಗೌಟ್ ಎನ್ನುವ ಸವಲತ್ತಿನಲ್ಲಿ ಬೇಕಾದ ಜನರನ್ನಷ್ಟೇ ಆಹ್ವಾನಿಸಿ,ವಿಚಾರ ವಿನಿಮಯ-ವೀಡಿಯೋ ಕಾನ್ಫರೆನ್ಸ್ ನಡೆಸಬಹುದು.ಗೂಗಲ್ ತನ್ನ ಶೋಧ ಪಟುತ್ವವನ್ನು ಗೂಗಲ್‌ಪ್ಲಸ್ ಮೂಲಕವೂ ನೀಡಲು ಸ್ಪಾರ್ಕ್ ಎಂಬ ಸೌಕರ್ಯ ನೀಡಿದೆ.ಇದೂ ಫೇಸ್‌ಬುಕ್‌ನಲ್ಲಿಲ್ಲ.ಇನ್ನು ಗೂಗಲ್ ಪ್ಲಸ್‌ನಲ್ಲಿ ಗೂಗಲ್ ಅಂಚೆ,ಪಿಕಾಸಾ,ಗ್ರೂಪ್,ಮ್ಯಾಪ್ ಇವೆಲ್ಲವೂ ಒಂದೇ ಕಡೆಯಿಂದ ಸಿಗುವ ಅನುಕೂಲ ಬೇರೆ ಇದೆ.ನಿಮಗೆ ಗೂಗಲ್ ಪ್ಲಸ್ ಸಾಕೆನಿಸಿದರೆ,ಅದರ ಖಾತೆ ಮುಚ್ಚಿ ಹೋಗುವಾಗ,ಇದುವರೆಗೆ ನೀವಲ್ಲಿ ಹಂಚಿಕೊಂಡಿದ್ದ ಸರ್ವವಿಧದ ಮಾಹಿತಿಯನ್ನು ವಾಪಸ್ಸು ಪಡೆಯುವ ಡೇಟಾ ಲಿಬರೇಶನ್ ಎಂಬ ವಿನೂತನ ವಿಧಾನ ಇದೆ.ಇಂತಹ ಖಾಸಗಿತನವನ್ನು ಗೌರವಿಸುವ ಸವಲತ್ತು ಇಲ್ಲದ್ದು ಫೇಸ್‌ಬುಕ್,ಟ್ವಿಟರ್ ತಾಣಗಳ ಮುಖ್ಯ ತೊಂದರೆಯೂ ಹೌದು.ಆಮಂತ್ರಣ ಮೂಲಕ ಮಾತ್ರಾ ಸದಸ್ಯತ್ವ ಎನ್ನುವ ತನ್ನ ತಂತ್ರದ ಮೂಲಕ,ಗೂಗಲ್ ಪ್ಲಸ್ ಮೊದಲಿಗೆ ಸುದ್ದಿ ಮಾಡಿತು.ಇಬೇ ತಾಣದಲ್ಲಿ ಇದರ ಆಮಂತ್ರಣ ಇಪ್ಪತ್ತು ಡಾಲರಿಗೆ ಮಾರಾಟವಾಗಿಯೂ ಹೋಗತೊಡಗಿತು.ನಂತರವೀಗ ನೇರವಾಗಿ ಸದಸ್ಯರಾಗುವ ಅವಕಾಶವಿದೆ.ಆಸಕ್ತರು https://plus.google.com/up/start/?continue=https ವಿಳಾಸಕ್ಕೆ ಭೇಟಿಕೊಡಿ.
ಅಂದ ಹಾಗೆ ಟ್ವಿಟರ್ ಬಳಕೆದಾರರ ಸಂಖ್ಯೆ ಇಪ್ಪತ್ತು ಕೋಟಿಯಂತೆ.ದಿನನಿತ್ಯ ಇಪ್ಪತ್ತು ಕೋಟಿ ಟ್ವೀಟ್‌ಗಳಿಲ್ಲಿ ಪ್ರಕಟವಾಗುತ್ತವೆ.ಟ್ವೀಟ್‌ಗಳು ನೂರನಲುವತ್ತು ಅಕ್ಷರಗಳಿಗೆ ಮಾತ್ರಾ ಸೀಮಿತವೆನ್ನುವುದು ನಿ.ಸಂ. ಒದುಗರಿಗೆ ಚೆನ್ನಾಗಿ ಗೊತ್ತು.
-----------------------------------------
ಮೈಸ್ಪೇಸ್:ಮಾರಾಟ
ರೂಪರ್ಟ್ ಮುರ್ಡೋಚ್‌ನ ನ್ಯೂಸ್‌ಕಾರ್ಪ್ ಸಂಸ್ಥೆಯು ಮೈಸ್ಪೇಸ್ ಸಾಮಾಜಿಕ ತಾಣವನು ಬರೇ ಮೂವತ್ತೈದು ದಶಲಕ್ಷ ಡಾಲರಿಗೆ ಮಾರಾಟ ಮಾಡಿ ಕೈತೊಳೆದುಕೊಂಡಿದೆ.ಮುರ್ಡೋಚ್ ಇದನ್ನು ಆರು ವರ್ಷಗಳ ಕಾಲ ನಡೆಸಿ ಕೈಸುಟ್ಟುಕೊಂಡದ್ದಷ್ಟೇ ಲಾಭ.ಸುಮಾರು ಆರುನೂರು ದಶಲಕ್ಷ ಡಾಲರು ಬೆಲೆ ತೆತ್ತು ಮೈಸ್ಪೇಸ್ ತಾಣವನ್ನು ಖರೀದಿಸಿದ ಮುರ್ಡೋಚ್,ಗೂಗಲ್ ಜತೆ ಒಪ್ಪಂದ ಮಾಡಿಕೊಂಡು,ತಾಣದಲ್ಲಿ ಜಾಹೀರಾತು ನೀಡತೊಡಗಿ,ಸಾಕಷ್ಟು ಲಾಭಗಿಟ್ಟಿಸಿಕೊಂಡರು.ನಂತರ ಇತರ ಸಾಮಾಜಿಕ ತಾಣಗಳು ಜನಪ್ರಿಯವಾಗ ತೊಡಗಿದೊಡನೆ,ಮೈಸ್ಪೇಸ್ ಜಾಹೀರಾತು ಕಾಟದಿಂದ ಬೇಸತ್ತ ಅದರ ಸದಸ್ಯರ ಸಂಖ್ಯೆ ಇಳಿಯ ತೊಡಗಿತು-ತಾಣವು ನಷ್ಟದ ಬಾಬತ್ತಾಯಿತು.ಈಗ ತಾಣ ನಡೆಸುವುದೇ ಕಷ್ಟ ಎನ್ನುವ ಪರಿಸ್ಥಿತಿ ಏರ್ಪಟ್ಟಿತು.ಮುರ್ಡೋಚ್‌ಗೆ ಅಂತರ್ಜಾಲ ಒಲಿದಿಲ್ಲ-ಮುದ್ರಣ ಮತ್ತು ಟಿವಿ ಮಾಧ್ಯಮಗಳೇ ಒಳಿತು ಎಂಬಂತೆ ಕಾಣುತ್ತಿದೆ.
----------------------------------------
ಸೌರಶಕ್ತಿಯಿಂದ ನಡೆವ ಜಾಹೀರುಫಲಕ

ಕಂಪೆನಿಯೊಂದು ತನ್ನ ಜಾಹೀರಾತು ಫಲಕವನ್ನು ಬೆಳಗಲು ಸಂಪೂರ್ಣವಾಗಿ ಸೌರಶಕ್ತಿ ಮತ್ತು ಪವನಶಕ್ತಿಯನ್ನು ಅವಲಂಬಿಸಿದೆ.ಹನ್ನೆರಡು ಕಿಲೋವ್ಯಾಟ್ ಶಕ್ತಿಯನ್ನು ಈ ಎರಡು ಶಕ್ತಿ ಮೂಲಗಳಿಂದ ಪಡೆಯಲು,ಫಲಕದಲ್ಲಿ ತೊಂಭತ್ತಾರು ಸೌರಫಲಕಗಳು ಮತ್ತು ಐದು ಗಾಳಿಯ ಟರ್ಬೈನ್‌ಗಳಿವೆ.ಇದನ್ನು ಲಂಡನ್‌ನ ಹೀತ್ರೂ ವಿಮಾನ ನಿಲ್ದಾಣದ ಸಮೀಪ ಸ್ಥಾಪಿಸಿರುವ ಕಂಪೆನಿಯ ಇನ್ನೊಂದು ಸೌರಶಕ್ತಿಚಾಲಿತ ಜಾಹೀರಾತು ಫಲಕ ನ್ಯೂಯಾರ್ಕ್‌ಟೈಮ್ಸ್ ಸ್ಕ್ವೇರಿನಲ್ಲಿದೆ.
----------------------------------------------------------------
ಹಳೆ ಶೈಲಿ;ಹೊಸ ತಂತ್ರ
ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಅಂಗಡಿಯೊಂದು ಹಳೆಯ ಮಾರಾಟ ಶೈಲಿ ಅನುಸರಿಸಿ ಸುದ್ದಿ ಮಾಡಿದೆ.ನಮ್ಮಲ್ಲಿನ್ನೂ ಪ್ರಚಲಿತದಲ್ಲಿರುವ ಬ್ರಾಂಡ್-ರಹಿತ ವಸ್ತುಗಳ ಮಾರ್ಕೆಟಿಂಗ್ ಅಮೆರಿಕಾದಲ್ಲಿ ಇದ್ದ ಹಾಗಿಲ್ಲ.ಅಲ್ಲಿ ಪ್ರತಿ ಉತ್ಪನ್ನವನ್ನೂ ಪ್ಯಾಕೆಟಿನಲ್ಲಿ ಹಾಕಿ,ಹೆಸರಿಟ್ಟು ಮಾರುವುದು ಸಾಮಾನ್ಯವಾಗಿದೆ.ಈಗ ಇನ್-ಗ್ರೇಡಿಯಂಟ್ ಎನ್ನುವ ಅಂಗಡಿಯೊಂದು,ವಸ್ತುಗಳನ್ನು ಬಿಡಿಯಾಗಿ ಮಾರುವ ನಿರ್ಧಾರ ಪ್ರಕಟಿಸಿದೆ-ಇದು ಪರಿಸರಪ್ರಿಯ ಮಾರ್ಕೆಟಿಂಗ್ ವಿಧಾನ ಎಂಬ ಹಣೆಪಟ್ಟಿಯ ಜತೆಗೆ,ಅಗ್ಗವಾಗಿಯೂ ದೊರಕುತ್ತದೆ.ಚೀಲ ತಂದರೆ,ಅದರಲ್ಲಿ ತುಂಬಿಕೊಂಡು ಹೋಗಬಹುದು.ರಾಶಿ ರಾಶಿ ಪ್ಲಾಸ್ಟಿಕ್ ಬಳಸುವ ನಮ್ಮ ಮಾಲ್‌ಗಳ್ಯಾಕೆ ಇತ್ತ ಗಮನಹರಿಸಬಾರದು?
---------------------------------------------
ವಿಮಾನ ನಿಲ್ದಾಣ:ಮಳೆ ಹೆಚ್ಚು?
ವಿಮಾನ ನಿಲ್ದಾಣಗಳ ಬಳಿ ಮಳೆ ಹೆಚ್ಚು ಎನ್ನುವವರಿದ್ದಾರೆ.ಹಾಗಿರುವುದು ಸಾಧ್ಯ ಎನ್ನುವುದು ಸಂಶೋಧನೆಯಿಂದ ವ್ಯಕ್ತವಾಗಿದೆ.ವಿಮಾನಗಳು ವೇಗವಾಗಿ ಚಲಿಸುವಾಗ,ಸುತ್ತಲಿನ ಗಾಳಿ ಹಿಗ್ಗಿ,ತಣಿಯುತ್ತದೆ.ಇದರಿಂದ ನೀರಾವಿಯು ಘನೀಕರಿಸಿ,ಮಂಜುಗಡ್ಡೆಯಾಗಿ ಮಾರ್ಪಟ್ಟು ಮಳೆ ಬೀಳುವ ಸಾಧ್ಯತೆಯಿದೆಯಂತೆ.ಸುತ್ತಲಿನ ಹವಾಗುಣ,ವಿಮಾನಗಳ ವೇಗ,ಗಾತ್ರ ಇವೆಲ್ಲವುಗಳೂ ಮಳೆಯ ಸಾಧ್ಯತೆಯನ್ನು ಬದಲಿಸಬಹುದು ಎಂದು ಎನ್‌ಸಿಏಆರ್(ನೇಶನಲ್ ಸೆಂಟರ್ ಫಾರ್ ಅಟ್ಮೋಸ್ಪಿಯರಿಕ್ ರಿಸರ್ಚ್)ಸಂಸ್ಥೆಯಲ್ಲಿ ನಡೆದಿರುವ ಸಂಶೋಧನೆ ಇದನ್ನು ಕಂಡುಕೊಂಡಿದೆ.
--------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ನಿವೃತ್ತ ಬ್ಯಾಂಕ್ ಅಧಿಕಾರಿ ಎ ಎಸ್ ಕಲ್ಲೂರಾಯ,ಅಂಬಲಪಾಡಿ.
*ಆನ್‌ಲೈನ್ ಮೌಲ್ಯಮಾಪನ ಅಳವಡಿಸಿ,ಸುದ್ದಿಯಲ್ಲಿರುವ ವಿಶ್ವವಿದ್ಯಾಲಯ ಯಾವುದು?
*ಏನಿದು ಹೊಸ ವ್ಯವಸ್ಥೆ?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS38 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*FOSS ಎಂದರೆ ಉಚಿತ ಮತ್ತು ಮುಕ್ತ ತಂತ್ರಾಂಶ.
*ಉದಯವಾಣಿ ಇ-ಪತ್ರಿಕೆ ತಾಣವು ಬಳಕೆದಾರ ಸ್ನೇಹಿಯಾಗುವತ್ತ ತೆಗೆದುಕೊಂಡಿರುವ ಹೆಜ್ಜೆ-ಎಲ್ಲಾ ಆವೃತ್ತಿಗಳ ಎಂಟು ದಿನಗಳ ಪತ್ರಿಕೆಯ ಕೊಂಡಿಗಳೂ ಗೋಚರಿಸುವಂತೆ ಅಳವಡಿಸಲಾಗಿದೆ.(http://epaper.udayavani.com ನೋಡಿ. ಐಪ್ಯಾಡ್ ಆವೃತ್ತಿಯೂ ಲಭ್ಯ. ಸರಿಯುತ್ತರ ಕಳುಹಿಸಿ,ಬಹುಮಾನ ಪಡೆದವರು ಪ್ರಾಣೇಶ್ ಜೋಷಿ,ಬನ್ನಿಕಟ್ತಿ,ಕೊಪ್ಪಳ. ಅಭಿನಂದನೆಗಳು.
UDAYAVANI UNICODE
UDAYAVANI
*ಅಶೋಕ್‌ಕುಮಾರ್ ಎ