ಜೈಲು ಕಾಯಲು ರೊಬೋಟ್
ದಕ್ಷಿಣ ಕೊರಿಯಾದ ಜೈಲೊಂದರಲ್ಲಿ ರೊಬೋಟುಗಳನ್ನು ಕಾವಲುಗಾರರಾಗಿ ಬಳಸಲಾಗುತ್ತಿದೆ.ಅವು ಇತರ ಕಾವಲುಗಾರರಿಗೆ ಖೈದಿಗಳ ಮೇಲೆ ಕಣ್ಣಿಡಲು ಸಹಾಯ ಮಾಡಲಿವೆ.ಖೈದಿಗಳು ಸಂಶಯಾಸ್ಪದ ನಡವಳಿಕೆ ಪ್ರದರ್ಶಿಸಿದರೆ,ಸೂಚನೆ ನೀಡುತ್ತವೆ.ಹೀಗಾಗಿ,ಇತರ ಕಾವಲಿನವರ ಕೆಲಸ ಹಗುರವಾಗುತ್ತದೆ.ರೊಬೋಟುಗಳ ಬಗ್ಗೆ ಸಂಶೋಧನೆಗೆ ದಕ್ಷಿಣ ಕೊರಿಯಾ ಗಮನ ಹರಿಸಿದೆ.ಜಪಾನ್ ಈ ನಿಟ್ಟಿನಲ್ಲಿ ಈಗಾಗಲೇ ದಾಪುಗಾಲು ಹಾಕಿದ್ದು,ದಕ್ಷಿಣ ಕೊರಿಯಾವು ಭಾರೀ ಬಜೆಟ್ ಹೂಡಿ,ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ.ದೇಶದ ದಕ್ಷಿಣ ಭಾಗದ ಪೊಹಾಂಗ್ ಜೈಲಿನಲ್ಲಿ ಈ ರೊಬೋಟುಗಳ ಬಳಕೆ ನಡೆದಿದೆ.ಒಂದೂವರೆ ಮೀಟರ್ ಎತ್ತರದ ರೊಬೋಟುಗಳನ್ನು ದಕ್ಷಿಣ ಕೊರಿಯಾದ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.ಅವರುಗಳು ಜೈಲು ನಿಯಮ ಮತ್ತು ಅಪರಾಧೀಕರಣ ವಿಷಯದಲ್ಲಿ ಪರಿಣತಿ ಹೊಂದಿದದವರು.ರೊಬೋಟುಗಳು ಚಲಿಸಲು ನಾಲ್ಕು ಚಕ್ರಗಳಿವೆ.ಕ್ಯಾಮರಾ,ಸೆನ್ಸರುಗಳನ್ನೂ ರೊಬೋಟ್ ಹೊಂದಿವೆ.ಕ್ಯೋಂಗಿ ವಿಶ್ವವಿದ್ಯಾಲಯದ ಲೀ-ಬೈಕ್-ಚು ರೊಬೋಟುಗಳನ್ನು ವಿನ್ಯಾಸಗೊಳಿಸಿದ್ದಾರೆ.ಒಂದು ತಿಂಗಳ ಮಟ್ಟಿಗೆ ಈ ಪ್ರಯೋಗ ಮುಂದುವರಿಯಲಿದೆ.ರೊಬೋಟಿನ ಆಪರೇಟಿಂಗ್ ವ್ಯವಸ್ಥೆಯನ್ನು ಮಾರ್ಪಾಡು ಮಾಡುವತ್ತ ಸಂಶೋಧಕರು ಗಮನ ಹರಿಸಿದ್ದಾರೆ
--------------------------------------------------
ಕೀಟ ಸೈಬೋರ್ಗುಗಳು:ಹುಡುಕಾಟಕ್ಕೆ ಬಳಕೆ
ಅಪಾಯಕಾರಿ ಪರಿಸ್ಥಿತಿಗಳಲ್ಲಿ ಸಿಕ್ಕಿಬಿದ್ದವರನ್ನು ಪತ್ತೆ ಹಚ್ಚಿ,ಅವರಿಗೆ ನೆರವಾಗಲು ಕೀಟಗಳನ್ನು ಬಳಸಲು ಮಿಚಿಗನ್ ವಿಶ್ವವಿದ್ಯಾಲಯದ ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.ಕೀಟಗಳ ಸಣ್ಣ ದೇಹ,ಗಾಳಿಯನ್ನು ನುಗ್ಗಿ ಮುಂದೆ ಸಾಗಲು ಅನುವು ಮಾಡುವ ಆವುಗಳ ಎರೋಡೈನಾಮಿಕ್ ವಿನ್ಯಾಸ ಸಂಶೋಧಕರ ಗಮನ ಸೆಳೆದಿವೆ.ಕೀಟಗಳ ದೇಹದಲ್ಲಿ ಇಲೆಕ್ಟ್ರೋಡುಗಳನ್ನು ಅಳವಡಿಸಿ,ಸೈಬೋರ್ಗುಗಳಾಗಿಸಿ,ಅವನ್ನು ನಿಯಂತ್ರಿಸಲು ಸಂಶೋಧಕರಿಗೆ ಸಾಧ್ಯವಾಗಿದೆ.ಅವುಗಳ ದೇಹದ ಮೇಲೆ ಕ್ಯಾಮರಾ,ಸಂವೇದಕಗಳನ್ನು ಅಳವಡಿಸಿ,ಶೋಧ ಕಾರ್ಯದಲ್ಲಿ ಬಳಸಲು ಅವರು ಯೋಜಿಸಿದ್ದಾರೆ.ಸಾಧನಗಳಿಗೆ ವಿದ್ಯುತ್ ಪೂರೈಕೆ ಮಾಡುವುದು ಹೇಗೆ ಎನ್ನುವುದು ಅವರ ತಲೆ ತಿನ್ನುತ್ತಿರುವ ಸಮಸ್ಯೆ.ಇದಕ್ಕೆ ಸೌರ ವಿದ್ಯುತ್ ಅನ್ನು ಬಳಸುವುದು ಅವರಿಗೆ ಬೇಕಿಲ್ಲ.ಹಾಗೆ ಮಾಡಿದರೆ,ಅದು ಸುತ್ತ ಬೆಳಕು ಇದ್ದಾಗ ಮಾತ್ರಾ ಶಕ್ತಿ ಉತ್ಪಾದಿಸುತ್ತದೆ,ಹಾಗಾಗಿ ಅವುಗಳ ಬಳಕೆ ಬಗ್ಗೆ ಸಂಶೋಧಕರಿಗೆ ಉತ್ಸಾಹವಿಲ್ಲ.ಕೀಟಗಳ ರೆಕ್ಕೆಗಳ ಚಲನೆ ಮತ್ತು ಶಕ್ತಿಯನ್ನು ಬಳಸಿ ಶಕ್ತಿ ಉತ್ಪಾದಿಸುವತ್ತ ಅವರ ಗಮನ ಹರಿದಿದೆ.ಪೀಜೋ ಇಲೆಕ್ಟ್ರಿಕ್ ಪರಿಣಾಮ ಮತ್ತು ಥರ್ಮೋ ಇಲೆಕ್ಟ್ರಿಕ್ ಪರಿಣಾಮಗಳನ್ನು ಬಳಸಿ ವಿದ್ಯುಚ್ಛಕ್ತಿ ಬಳಸುವತ್ತ ಸಂಶೋಧನೆ ಮುಂದುವರಿದಿದೆ.ಕೊಳವೆಯಾಕಾರದ ವಿದ್ಯುಜ್ಜನಕವು 0.2ಗ್ರಾಮ್ ತೂಗಿ,45ಮೈಕ್ರೋವ್ಯಾಟ್ ಶಕ್ತಿ ಉತ್ಪಾದಿಸಲು ಶಕ್ತವಾಗಿದೆ.ಹಿಂದೆಯೂ ಸಂಶೋಧಕರು ಇಲಿ,ಮೀನುಗಳನ್ನು ಸೈಬೋರ್ಗ್ಗಳಾಗಿಸಲು ಪ್ರಯತ್ನಿಸಿದ್ದಿದೆ.ಇಲೆಕ್ಟ್ರೋಡುಗಳ ಮೂಲಕ ಅವುಗಳ ಮಿದುಳಿಗೆ ಸಂವೇದನೆ ನೀಡಿ,ಆ ಮೂಲಕ ಅವನ್ನು ಬೇಕಿದ್ದಲ್ಲಿಗೆ ಹೋಗುವಂತೆ ಮಾಡಿ,ಅವನ್ನು ರಕ್ಷಣಾ ಕಾರ್ಯಗಳಲ್ಲಿ ಬಳಸಲು ಪ್ರಯತ್ನಿಸಲಾಗಿತ್ತು.
-----------------------------------
ಜನಪ್ರಿಯವಾಗದ ಸೇವೆಗಳು:ಗೂಗಲ್ ಎಳ್ಳುನೀರು
ಗೂಗಲ್ ಕಂಪೆನಿಯು ಹೊಸ ಹೊಸ ಸೇವೆಗಳನ್ನು ಆರಂಭಿಸುತ್ತಾ,ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇದೆ.ಈ ಪ್ರಯತ್ನದಲ್ಲಿ ಅದಕ್ಕೆ ಯಶಸ್ಸು ಸಿಕ್ಕಿರುವುದು ಆಗೊಮ್ಮೆ ಈಗೊಮ್ಮೆ ಮಾತ್ರಾ.ಹಲವು ಉತ್ಪನ್ನಗಳು ಜನಮನ್ನಣೆ ಗಳಿಸಿಕೊಳ್ಳಲು ವಿಫಲವಾಗಿ ಮೂಲೆಗುಂಪಾಗಿವೆ.ಅಂತಹ ಹಲವು ವಿಫಲ ಯೋಜನೆಗಳಿಗೆ ಗುಡ್ಬೈ ಹೇಳಿ,ತನ್ನ ಸೇವೆಯನ್ನು ಸೀಮಿತಗೊಳಿಸಿ,ಗುಣಮಟ್ಟದ ಸೇವೆ ನೀಡಲು ಗೂಗಲ್ ಪ್ರಯತ್ನಿಸಲಿದೆ.ಗೂಗಲ್ ವೇವ್,ಬಜ್,ನೋಟ್ಬುಕ್,ಗೂಗಲ್ ಬುಕ್ಮಾರ್ಕ್,ಗೂಗಲ್ ಫ್ರೆಂಡ್ ಕನೆಕ್ಟ್,ಗೂಗಲ್ ಸರ್ಚ್ ಟೈಮ್ಲೈನ್,ನೋಲ್,ಕಲ್ಲಿದ್ದಲಿಗಿಂತ ಅಗ್ಗದ ನವೀಕರಿಸಬಹುದಾದ ಇಂಧನ ಯೋಜನೆ ಇವೆಲ್ಲವೂ ಗೂಗಲ್ ಕೈ ಬಿಡಲಿರುವ ಯೋಜನೆಗಳು.ಇವುಗಳ ಪೈಕಿ ನೋಲ್ ಎನ್ನುವುದು ವಿಕಿಪೀಡಿಯಾದಂತಹ ವಿಶ್ವಕೋಶ ಯೋಜನೆಯಾಗಿತ್ತು.ಗೂಗಲ್ ವೇವ್ ಎನ್ನುವುದು ಆನ್ಲೈನ್ ಸಹಭಾಗಿತ್ವವನ್ನು ಹೆಚ್ಚಿಸುವ ಉದ್ದೇಶ ಹೊಂದಿದ ಸೇವೆ.ಬಜ್ ಪೇಸ್ಬುಕ್ ಹಾಗೆ ಸಾಮಾಜಿಕ ಜಾಲತಾಣ.ಇನ್ನು ಮುಂದೆ ಹೊಸ ಸೇವೆ ಅಥವಾ ಉತ್ಪನ್ನಗಳನ್ನು ಆರಂಭಿಸುವ ಮುನ್ನ ಹೆಚ್ಚು ಜಾಗ್ರತೆ ವಹಿಸುವುದಾಗಿ ಕಂಪೆನಿ ಹೇಳಿಕೊಂಡಿದೆ.ಆಪಲ್ ಅಂತಹ ಕಂಪೆನಿಗಳು ಅಪರೂಪವಾಗಿ ಮಾತ್ರಾ ಹೊಸ ಸೇವೆಗಳನ್ನು ಅಳೆದು-ಸುರಿದು ಎನ್ನುವಂತೆ ಪ್ರಕಟಿಸುತ್ತವೆಗೂಗಲ್ ಆದರೋ ನಿಯಮಿತವಾಗಿ ಇಂತಹ ಸೇವೆಗಳನ್ನು ಪ್ರಕಟಿಸುತ್ತಾ ಬಂದಿದೆ.ಹಲವು ಸೇವೆಗಳು ಆರಂಭಿಕವಾಗಿ ಗುಲ್ಲೆಬ್ಬಿಸಿದರೂ,ದಿನ ಕಳೆದಂತೆ ಜನಮನದಿಂದ ದೂರವಾಗುತ್ತಿದ್ದುವು.ಮುಚ್ಚಲು ನಿರ್ಧರಿಸಿದ ಸೇವೆಗಳಲ್ಲಿ ಗೂಗಲ್+ ಸೇರಿಲ್ಲ.ಇದಕ್ಕೆ ನೂರು ದಿನಗಳಲ್ಲಿ ಹತ್ತು ನಾಲ್ಕು ದಶಲಕ್ಷ ಬಳಕೆದಾರರು ನೋಂದಾಯಿಸಿಕೊಂಡಿದ್ದರು.ಅರ್ಕುಟ್ ಕೂಡಾ ಮುಂದುವರಿದಿದೆ.
----------------------------------------------------------------
ಆಧಾರ್:ಸಚಿವ ಸಂಪುಟ ಅನುಮೋದನೆ ಲಭಿಸಿಲ್ಲ!
ಪ್ರತಿ ಭಾರತೀಯನ ಜೈವಿಕ ಚಹರೆಯನ್ನು ಸಂಗ್ರಹಿಸಿ,ಆತನಿಗೆ ಪ್ರತ್ಯೇಕ ಆಧಾರ್ ಸಂಖ್ಯೆಯನ್ನು ನೀಡುವ ಆಧಾರ್ ಯೋಜನೆಗೆ ಅಂಗೀಕಾರ ನೀಡುವ ಪ್ರಸ್ತಾಪ ಕೇಂದ್ರ ಸಚಿವ ಸಂಪುಟದ ಮೂಂದೆ ಬಂದಿಲ್ಲವಂತೆ.ಈ ಬಗ್ಗೆ ಕೇಂದ್ರ ಸಚಿವ ಚಿದಂಬರಂ ಪ್ರಧಾನ ಮಂತ್ರಿಯವರ ಗಮನ ಸೆಳೆದಿದ್ದಾರೆ.ಆಧಾರ್ ಯೋಜನೆಯ ಅನುಷ್ಠಾನ ಜಾರಿಯಲ್ಲಿದ್ದು,ಹಲವು ರಾಜ್ಯಗಳಲ್ಲಿ ಆಧಾರ್ ಸಂಖ್ಯೆಯನ್ನು ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ.ಭಾರತದ ರಿಜಿಸ್ಟರ್ಡ್ ಜನರಲ್ ಅವರು ಮಾತ್ರಾ ಭಾರತೀಯರ ಜೈವಿಕ ಚಹರೆಯನ್ನು ಸಂಗ್ರಹಿಸಿ,ಅವರಿಗೆ ಗುರುತು ಪತ್ರ ನೀಡುವ ಅಧಿಕಾರ ಹೊಂದಿದ್ದಾರೆ.ಈಗ ಆಧಾರ್ ಯೋಜನೆಯಲ್ಲಿ ಅದೇ ಕೆಲಸ ನಡೆಯುತ್ತಿದ್ದು,ರಾಜ್ಯಗಳು ಯಾವ ಗುರುತು ಸಂಖ್ಯೆಗೆ ಮಾನ್ಯತೆ ನೀಡಬೇಕೆಂದು ಗಲಿಬಿಲಿಗೊಂಡಿವೆ.ಅದಲ್ಲದೆ ಹಲವೆಡೆ ಆಧಾರ್ ಯೋಜನೆಯಲ್ಲಿ ಪಾಲ್ಗೊಂಡವರ ಸಂಖ್ಯೆ ಜನಗಣತಿಯ ಸಂಖ್ಯೆ ಜತೆ ತಾಳೆಯಾಗುತ್ತಿಲ್ಲವಂತೆ.ಉದಾಹರಣೆಗೆ ಹೈದರಾಬಾದಿನ ಅಂಬರ್ಪೇಟೆಯಲ್ಲಿ ಜನಗಣತಿಯಲ್ಲಿ ಹದಿನೈದು ಸಾವಿರ ಜನ ಲೆಕ್ಕಕ್ಕೆ ಸಿಕ್ಕಿದ್ದರೆ,ಆಧಾರ್ ಪ್ರಕಾರ ಅದು ಇಪ್ಪತ್ತೊಂದು ಸಾವಿರ.ಹಾಗೆಯೇ ಸೆಕುಂದರಾಬಾದಿನಲ್ಲಿ ಆಧಾರ್ ಯೋಜನೆಯಡಿ ಮೂವತ್ತೇಳು ಸಾವಿರ ಜನ ಗುರುತಿಸಿಕೊಂಡಿದ್ದಾರೆ-ಆದರೆ ಗಣತಿಯ ಪ್ರಕಾರ ಅಲ್ಲಿದ್ದದ್ದು ಹದಿಮೂರು ಸಾವಿರ ಜನರು ಮಾತ್ರಾ.ಈ ವೈಪರೀತ್ಯಗಳಿಗೆ ಕಾರಣವೇನು ಎನ್ನುವುದು ಚೋದ್ಯದ ವಿಷಯ.
--------------------------------------------
ವೆಬ್ಕ್ಯಾಮ್ ಮೂಲಕ ಟೈಲರಿಂಗ್
ಅಂತರ್ಜಾಲ ತಾಣಗಳ ಮೂಲಕ ಖರೀದಿಸುವ ಇ-ವಾಣಿಜ್ಯ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ.ಅದರಲ್ಲೂ ಯುವಜನರು ಇದರಲ್ಲಿ ಮುಂದಿದ್ದಾರೆ.ಆದರೆ ಉಡುಪುಗಳ ಖರೀದಿಗೆ ಇ-ವಾಣಿಜ್ಯ ತುಸು ತಾಪತ್ರಯದ್ದೇ.ವೆಬ್ಸೈಟಿನಲ್ಲಿ ಲಭ್ಯವಿರುವ ಉಡುಪು ತನ್ನ ಅಳತೆಗೆ ಹೊಂದುತ್ತದೆಯೇ ಎನ್ನುವುದನ್ನು ಪರಿಶೀಲಿಸುವುದು ಕಷ್ಟದ ಕೆಲಸ.ಈಗ ಅದಕ್ಕೂ ಆನ್ಲೈನ್ ಪರಿಹಾರವಿದೆ.ವೆಬ್ಕಾಮ್ ಮುಂದೆ ಗ್ರಾಹಕ ವಿವಿಧ ಭಂಗಿಯಲ್ಲಿ ಪೋಸು ನೀಡಿದರೆ,ತಂತ್ರಾಂಶವೊಂದು,ಆತನ ಅಳತೆಯನ್ನು ತೆಗೆದುಕೊಳ್ಳುತ್ತದೆ.ವೆಬ್ಸೈಟಿನ ಉಡುಪು ಆ ಅಳತೆಯದ್ದೇ ಎನ್ನುವುದನ್ನು ಗ್ರಾಹಕ್ ಅತಿಳಿದುಕೊಳ್ಳಬಹುದು.ಹಾಗೆಯೆ ಆತನಿಗೆ ಸೂಕ್ತ ಉಡುಪನ್ನು ಅಂತರ್ಜಾಲ ತಾಣ ಶಿಫ್ಹಾರ್ಸು ಮಾಡಲೂ ಬಹುದು.ರೊಬೋಟು ಪ್ರತಿಕೃತಿಗಳಿಗೆ ಉಡುಪನ್ನು ತೊಡಿಸಿ,ಅವು ಸೂಕ್ತವಾಗಿ ದೇಹಕ್ಕೆ ಹೊಂದುತ್ತದೆಯೋ ಎಂದೂ ನೋಡಬಹುದು.ಈ ರೊಬೋಟುಗಳ ಅಳತೆಯನ್ನು ಹೆಚ್ಚುಕಡಿಮೆ ಮಾಡಿ,ಗ್ರಾಹಕನ ಅಲತೆಯದ್ದಕ್ಕೆ ಉಡುಪು "ಫಿಟ್"" ಆಗುತ್ತದೋ ಎಂದೂ ಪರೀಕ್ಷಿಸಬಹುದು.ಪುಸ್ತಕ ಮತ್ತು ಇಲೆಕ್ಟ್ರಾನಿಕ್ ವಸ್ತುಗಳು ಆನ್ಲೈನಿನಲ್ಲಿ ನೂರಕ್ಕೆ ಇಪ್ಪತ್ತೈದು ಭಾಗದಷ್ಟು ಮಾರಾಟ ಆಗುತ್ತವೆ.ಒಟ್ಟು ಮಾರಾಟವಾಗುವ ಉಡುಪುಗಳ ಪೈಕಿ ಹತ್ತು ಶೇಕಡಾ ಮಾತ್ರಾ ಅಂತರ್ಜಾಲದ ಮೂಲಕ ಮಾರಾಟವಾಗುತ್ತವೆ.ಈ ಹೊಸ ಬೆಳವಣಿಗೆ ಇದನ್ನು ಹೆಚ್ಚಿಸಬಹುದು ಎನ್ನುವ ನಿರೀಕ್ಷೆಯಿದೆ.
-------------------------------------
ಪೇಸ್ಬುಕ್:ನಿಮಗೂ ಅವನಿಗೂ ಅಂತರವೆಷ್ಟು?
ಅಪರಿಚಿತ ವ್ಯಕ್ತಿಯೊಬ್ಬನನ್ನು ತೆಗೆದುಕೊಂಡರೆ,ನಿಮ್ಮ ಸ್ನೇಹಿತನ ಸ್ನೇಹಿತ,ಆ ಅಪರಿಚಿತ ವ್ಯಕ್ತಿಯ ಸ್ನೇಹಿತನನ್ನು ಬಲ್ಲವನಾಗಿರುತ್ತಾನೆ.ಅಂದರೆ ವ್ಯಕ್ತಿಗಳ ನಡುವಣ ಅಂತರ ನಾಲ್ಕು.ಸದ್ಯ ಫೇಸ್ಬುಕ್ಕಿನಲ್ಲಿ ಈ ಅಂತರ 3.74 ಎಂದು ಸಂಶೋಧಕರು ಅಂದಾಜಿಸಿದ್ದಾರೆ.ಭೂಮಿಯ ಜನರನ್ನು ತೆಗೆದುಕೊಂಡರೆ,ಈ ಅಂತರ ಆರು ಎನ್ನುವುದು ನಿಮಗೆ ತಿಳಿದಿರಬಹುದು.ಹಿಂದೆ ಈ ಅಂತರ ಹೆಚ್ಚಿತ್ತು.ಫೇಸ್ಬುಕ್ ಪ್ರತಿಯೋರ್ವ ಸದಸ್ಯನಿಗೂ ಹೆಚ್ಚೆಂದರೆ ಐದು ಸಾವಿರ ಗೆಳೆಯರನ್ನು ಹೊಂದಲು ಅವಕಾಶ ನೀಡುತ್ತದೆ.ಫೇಸ್ಬುಕ್ ಸದಸ್ಯರು ಪರಸ್ಪರ ಮಿತೃತ್ವವನ್ನು ಸಾಧಿಸಿದಂತೆಲ್ಲಾ ಈ ಅಂತರ ತಗ್ಗುತ್ತದೆ.ಆದರಿನ್ನು ಈ ಅಂತರ ತಗ್ಗುವ ಪ್ರಕ್ರಿಯೆ ನಿಧಾನವಾಗಲಿದೆ.
Udayavani
*ಅಶೋಕ್ಕುಮಾರ್ ಎ





