Monday, December 26, 2011

ಸಿಂಪಲ್:ಬ್ಯಾಂಕಲ್ಲದ ಬ್ಯಾಂಕು



ಸಿಂಪಲ್:ಬ್ಯಾಂಕಲ್ಲದ ಬ್ಯಾಂಕು
ಸಿಂಪಲ್.ಕಾಂ ಎನ್ನುವ ತಾಣವು ಶುಲ್ಕರಹಿತವಾಗಿ ಬ್ಯಾಂಕ್ ಸೇವೆಗಳನ್ನು ಗ್ರಾಹಕರಿಗೆ ನೀಡುವ ಗುರಿಯೊಂದಿಗೆ ಕೆಲಸ ಮಾಡಲಿದೆ.ಸಿಂಪಲ್ ತಾಣದ ಮೂಲಕ ಉಳಿತಾಯ ಮಾಡುವುದು,ಖರ್ಚು ಮಾಡುವುದು ಮತ್ತು ಆಯವ್ಯಯದ ಲೆಕ್ಕ ತಿಳಿಯುವುದು ಸುಲಭವಾಗಲಿದೆ.ಅಂದ ಹಾಗೆ ಸಿಂಪಲ್ ತಾಣವು ಸದ್ಯ ಕೆಲಸ ಮಾಡುತ್ತಿರುವ ಬ್ಯಾಂಕುಗಳ ನೆರವು ಪಡೆದೇ ಬ್ಯಾಂಕ್ ಸೇವೆ ನೀಡುತ್ತದಾದರೂ,ಗ್ರಾಹಕನಿಗೆ ತನ್ನ ಸೇವೆ ಉಚಿತವಾಗಿಯೇ ನೀಡಲಿದೆ.ಬ್ಯಾಂಕುಗಳಿಗೆ ಹೊರಗುತ್ತಿಗೆ ನೀಡುವ ತೆರದಿ ತನ್ನ ಕೆಲಸವನ್ನದು ಅವುಗಳ ಮೂಲಕ ಮಾಡಿಸಿಕೊಳ್ಳುತ್ತದೆ.ಇದಕ್ಕೆ ನೀಡಬೇಕಾದ ಶುಲ್ಕ ಪಾವತಿಸಲು ತನ್ನದೇ ಆದ ಮಾದರಿಯನ್ನು ಅನುಸರಿಸಲಿದೆ.ಸದ್ಯ ಸಿಂಪಲ್ ತಾಣದ ಸದಸ್ಯತ್ವವು ಆಮಂತ್ರಣದ ಮೂಲಕ ಮಾತ್ರಾ ಲಭ್ಯ.ಆಮಂತ್ರಣಕ್ಕಾಗಿ ಯಾರು ಬೇಕಾದರೂ ಕೋರಿಕೆ ಸಲ್ಲಿಸಬಹುದು.
---------------------------------
ಮೊಬೈಲ್ ಪೋನ್:ವಿಕಿರಣ ಪಟ್ಟಿ
ಮೊಬೈಲ್ ಫೋನ್ ಹ್ಯಾಂಡ್‌ಸೆಟ್‌ಗಳು ಹೊರಸೂಸುವ ವಿಕಿರಣ ಪ್ರಮಾಣವನ್ನು ಅವುಗಳ ಮೇಲೆ ನಮೂದಿಸುವುದನ್ನು ಕಡ್ಡಾಯಗೊಳಿಸಲು ಸರಕಾರ ಉದ್ದೇಶಿಸಿದೆ.ಪ್ರಸಕ್ತ ವಿಕಿರಣ ಪ್ರಮಾಣವನ್ನು ಪ್ರತಿ ಕಿಲೋಗ್ರಾಮಿಗೆ ಎರಡು ವ್ಯಾಟ್ ಎಂದು ನಿಗದಿ ಪಡಿಸಲಾಗಿದೆ.ಇದನ್ನು ಪ್ರತಿ ಕೆ.ಜಿ.ಗೆ1.6 ವ್ಯಾಟ್ ಎಂದು ನಿಗದಿ ಪಡಿಸಲಿದೆ.ನಮ್ಮ ದೇಹವು ನಿಗದಿತ ಹೀರಿಕೆ ದರದಲ್ಲಿ ವಿಕಿರಣವನ್ನು ಹೀರಿಕೊಳ್ಳುತ್ತದೆ.ಪ್ರತಿ ಕೆಜಿ ದೇಹತೂಕಕ್ಕೆ ಈ ಪ್ರಮಾಣವನ್ನೇ ಸರಕಾರ ನಿಗದಿ ಪಡಿಸಿದೆ.ಇಂದಿನ ಸ್ಮಾರ್ಟ್‌ಫೋನುಗಳು ಹೊರಸೂಸುವ ವಿಕಿರಣ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚೇ ಇರುವ ಸಾಧ್ಯತೆ ಹೆಚ್ಚು.ಆದರಿದನ್ನು ಫೋನಿನಲ್ಲಿ ಸ್ಪಷ್ಟವಾಗಿ ನಮೂದಿಸಿರದ ಕಾರಣ,ಅದು ಗ್ರಾಹಕರ ಗಮನಕ್ಕೆ ಬರುವುದಿಲ್ಲ.ಇನ್ನು ಅದನ್ನು ನಮೂದಿಸುವುದು ಕಡ್ಡಾಯ,ಮಾತ್ರವಲ್ಲ-ಸರಕಾರ ಅದನ್ನು ಪರೀಕ್ಷಿಸಲಿದೆ.ಚೀನೀ ಸೆಟ್‌ಗಳ ಸಹಿತ ವಿದೇಶೀ ಹ್ಯಾಂಡ್‌ಸೆಟ್‌ಗಳು ಈ ಪ್ರಮಾಣವನ್ನು ಮೀರಿದರೆ,ಅವುಗಳನ್ನು ನಿಷೇಧಿಸಲು ಸರಕಾರ ಯೋಜಿಸಿದೆ.ಅಲ್ಲದೆ,ಗ್ರಾಹಕರು ಮೊಬೈಲ್ ಬಳಕೆ ಕಾಲಾವಧಿಯನ್ನು ಮಿತಗೊಳಿಸುವುದು ಒಳಿತು ಎಂದು ಸಲಹೆ ನೀಡಲಾಗಿದೆ.ಧ್ವನಿ ಕರೆಗಳ ಬದಲಿಗೆ,ಕಿರು ಸಂದೇಶಗಳನ್ನು ಬಳಸಲೂ ಸಲಹೆ ನೀಡಲಾಗಿದೆ.ಕರಮುಕ್ತ ಬಳಕೆಯು ಸೂಕ್ತವೆನ್ನುವುದು ಇನ್ನೊಂದು ಸಲಹೆಯಾಗಿದೆ.ಇನ್ನು ತಮ್ಮ ದೇಹದಲ್ಲಿ ಇಲೆಕ್ಟ್ರಾನಿಕ್ ವಸ್ತುಗಳನ್ನು ಜೋಡಿಸಿಕೊಂಡವರು,ಮೊಬೈಲ್ ಸೆಟ್ ಬಳಸಲೇ ಬೇಕೆಂದರೆ,ಅದನ್ನು ಅರ್ಧ ಅಡಿ ದೂರದಲ್ಲಿರಿಸುವುದು ಒಳಿತು ಎಂದು ಎಚ್ಚರಿಸಲಾಗಿದೆ.
---------------------------------------------------------
ಸೌರಶಕ್ತಿ ಬಳಕೆ:ಪೈಂಟ್ ಶಕ್ತ


ನೋಟ್ರೆ ಡೇಂ‌ನ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿ ಪಡಿಸಿರುವ ಪೈಂಟ್ ಅನ್ನು ಲೇಪಿಸಿದ ವಸ್ತುವಿನ ಮೇಲ್ಮೈ ಸೌರಶಕ್ತಿಯನ್ನು ಉತ್ಪಾದಿಸಲು ಸಮರ್ಥವಾಗಲಿದೆ.ಪೈಂಟಿನಲ್ಲಿರುವ ಅರೆವಾಹಕ ನ್ಯಾನೋಕಣಗಳು ಬೆಳಕನ್ನು ಹೀರಿಕೊಂಡು,ವಿದ್ಯುಚ್ಛಕ್ತಿ ಉತ್ಪಾದಿಸಲು ಸಮರ್ಥವಾಗಿವೆ.ಆದರೆ ಇವುಗಳ ದಕ್ಷತೆ ಸದ್ಯದ ಮಾನಕಗಳ ಪ್ರಕಾರ ಬಹು ಕಡಿಮೆಯೇ.ಬಹು ವಿಸ್ತಾರವಾದ ಮೇಲ್ಮೈಗೆ ಪೈಂಟ್ ಲೇಪಿಸಿ,ಬೇಕಾದ ವಿದ್ಯುಚ್ಛಕ್ತಿ ಉತ್ಪಾದನೆ ಮಾಡಿಕೊಳ್ಳಲು ಸಾಧ್ಯ.ಈ ಪೈಂಟ್ ಅಗ್ಗವಾದ ಕಾರಣ,ಹೆಚ್ಚು ವಿಸ್ತಾರಕ್ಕೆ ಇದನ್ನು ಬಳಿಯಲು ಹೆಚ್ಚು ಖರ್ಚು ಬರದು.ಬೆಳಕಿನಲ್ಲಿರುವ ಶಕ್ತಿಯ ಶೇಕಡಾ ಒಂದು ಅಂಶವನ್ನಷ್ಟೇ ವಿದ್ಯುಚ್ಛಕ್ತಿಯಾಗಿಸುವ ಸಾಮರ್ಥ್ಯ ಈ ಲೇಪನಕ್ಕಿದೆ.ಲಭ್ಯವಿರುವ ಇತರ ಸೌರಕೋಶಗಳು ಶೇಕಡಾ ಹದಿನೈದು ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿಸಲು ಸಮರ್ಥವಾಗಿವೆ.ಪೈಂಟಿನಲ್ಲಿ ಬಳಸಿದ ನ್ಯಾನೋಕಣಗಳು ಟೈಟಾನಿಯಂ ಡಯಾಕ್ಸೈಡ್ನದ್ದು ಎಂದು ಸಂಶೋಧಕರು ಪ್ರಕಟಿಸಿದ್ದಾರೆ.
-------------------------------------------------------------
ಸ್ಮಾರ್ಟ್‌ಪೋನುಗಳು ಸ್ಮಾರ್ಟ್ ಆದ ಬಗೆ
ಮುಕ್ತಾಯ ಹಂತದಲ್ಲಿರುವ ವರ್ಷದಲ್ಲಿ ಸ್ಮಾರ್ಟ್‌ಫೋನುಗಳು ಬದಲಾಗಿರುವ ರೀತಿಯೇನು ಎಂದು ಕಣ್ಣಾಡಿಸಿದರೆ,ಅದನ್ನು ಐದು ಬಗೆಯಾಗಿ ಕಾಣಬಹುದು.ಮೊದಲನೆಯದಾಗಿ,ಏಕಮುಖ ಕೇಂದ್ರ ಸಂಸ್ಕಾರಕಗಳಿಂದ ದ್ವಿಮುಖ ಕೇಂದ್ರವುಳ್ಳ ಸಂಸ್ಕಾರಕಗಳ ಬಳಕೆಯನ್ನು ಈಗಿನ ಸ್ಮಾರ್ಟ್‌ಫೋನುಗಳಲ್ಲಿ ಕಾಣಬಹುದು.ಇವುಗಳ ವೇಗ 1.5ಗಿಗಾಹರ್ಟ್ಸ್‌ಗೆ ತಲುಪಿದೆ.ಮೊದಲು 1 ಗಿಗಾಹರ್ಟ್ಸ್ ವೇಗ ಸಾಮಾನ್ಯವಾಗಿತ್ತು.ಏಎಂಡಿ,ಎನ್ವಿಡಿಯಾ,ಟೆಕ್ಸಸ್ ಇನ್‌ಸ್ಟ್ರುಮೆಂಟ್ ಕಂಪೆನಿಗಳ ಸಂಸ್ಕಾರಕಗಳನ್ನು ಸ್ಮಾರ್ಟ್‌ಫೋನುಗಳಲ್ಲಿ ಬಳಸಲಾಗುತ್ತಿದೆ.ಈ ಹೊಸ ಸಂಸ್ಕಾರಕಗಳು ಹೆಚ್ಚು ಸ್ಪಷ್ಟತೆಯ ತೆರೆಯ ಬಳಕೆಗೆ ಅನುವು ಮಾಡಿವೆ.4.7 ಇಂಚಿನ ತೆರೆಗಳ ಬಳಕೆಗಿವು ಅನುವು ಮಾಡಿಕೊಟ್ಟಿವೆ.ಬ್ಯಾಟರಿ ಬಳಕೆಯೂ ಕಡಿಮೆಯಾಗಲಿವು ಕಾರಣವಾಗಿವೆ.ಒಮ್ಮೆ ಚಾರ್ಜ್ ಮಾಡಿದರೆ,ಇಡೀ ದಿನ ಸ್ಮಾರ್ಟ್‌ಫೋನು ಬಳಸಬಹುದು.ಎಲ್ಲಾ ತಂತ್ರಾಂಶಗಳು ದ್ವಿಮುಖ ಸಂಸ್ಕಾರಕಗಳನ್ನು ದುಡಿಸಿಕೊಳ್ಳಲು ಸಮರ್ಥವಾದರೆ,ಸ್ಮಾರ್ಟ್‌ಪೋನುಗಳು ಇನ್ನೂ ಹೆಚ್ಚು ಉಪಯುಕ್ತವಾಗಬಲ್ಲುವು.
ಸ್ಮಾರ್ಟ್‌ಫೋನುಗಳು ಹೆಚ್ಚು ವಿಸ್ತಾರವಾದ ತೆರೆಗಳನ್ನು ಹೊಂದಿರುವುದು ಈಗಿನ ಇನ್ನೊಂದು ವೈಖರಿಯಾಗಿದೆ.ಮೂರಿಂಚು ತೆರೆ ಮಾಮೂಲಿಯಾಗಿದ್ದುವಾದ್ರೆ,ಈಗವು 4.7 ಇಂಚಿನವಾಗಿರುವುದು ಮಾಮೂಲಿ.ಅಲ್ಲದೆ ಹೆಚ್ಚಿದ ಸ್ಪಷ್ಟತೆ ಕಾಣಬರುವ ಇನ್ನೊಂದು ಬದಲಾವಣೆ.1280X720ಪಿಕ್ಸೆಲ್‌ಗಳ ಸ್ಪಷ್ಟತೆಯೀಗ ಲಭ್ಯ.
4ಜಿ ಜಾಲಗಳಲ್ಲಿ ಬಳಸಬಹುದಾದ ಸಾಧನಗಳನ್ನು ತಯಾರಿಸಲು ಹ್ಯಾಂಡ್‌ಸೆಟ್ ತಯಾರಕರು ತೊಡಗಿರುವುದು,ವಿದೇಶಗಳಲ್ಲಿ ಕಾಣಬರುವ ಇನ್ನೊಂದು ಬೆಳವಣಿಗೆ.
ಇನ್ನು ತಂತಾಂಶಗಳತ್ತ ಗಮನ ಹರಿಸಿದರೆ,ಬಳಕೆದಾರರಿಗೆ ಒಂದು ದಶಲಕ್ಷ ಸಂಖ್ಯೆಯ ತಂತ್ರಾಂಶಗಳು ಲಭ್ಯವಿವೆ.ಆಂಡ್ರಾಯಿಡ್ ಫೋನು ಬಳಸುವವರು ಹತ್ತು ಬಿಲಿಯನ್ ಬಾರಿ ತಂತ್ರಾಂಶಗಳನ್ನು ಇಳಿಸಿಕೊಂಡಿದ್ದರೆ,ಆಪಲ್ ಕಂಪೆನಿಯ ಸಾಧನಗಳನ್ನು ಬಳಸುವವರು ಹದಿನೈದು ಬಿಲಿಯನ್ ಸಲ ತಂತ್ರಾಂಶಗಳನ್ನು ಇಳಿಸಿಕೊಂಡ ದಾಖಲೆಯಿದೆ.
ಆಪರೇಟಿಂಗ್ ವ್ಯವಸ್ಥೆಗಳ ಕಡೆ ನೋಡಿದರೆ ಆರು ಬಗೆಯ ವ್ಯವಸ್ಥೆಗಳಿದ್ದುವು.ಆಪಲ್‌ನ ಐಓಎಸ್,ಗೂಗಲ್‌ನ ಆಂಡ್ರಾಯಿಡ್,ಬ್ಲಾಕ್‌ಬೆರ್ರಿ,ವೆಬ್‌ಓಎಸ್,ವಿಂಡೋಸ್,ಸಿಂಬಿಯನ್ ಇವುಗಳು ಲಭ್ಯವಿದ್ದ ವ್ಯವಸ್ಥೆಗಳು.ಈಗ ಸಿಂಬಿಯನ್ ಮತ್ತು ವೆಬ್‌ಓಎಸ್ ತೆರೆಮರೆಗೆ ಸರಿದಿವೆ.
------------------------------------------
ದಿನವೊಂದರಲ್ಲಿ ಏಳು ಲಕ್ಷ ಆಂಡ್ರಾಯಿಡ್ ಸಾಧನಗಳ ಸೇರ್ಪಡೆ
ಆಂಡ್ರಾಯಿಡ್ ವ್ಯವಸ್ಥೆಯನ್ನು ಹೊತ್ತ ಸಾಧನಗಳನ್ನು ಗಣನೆಗೆ ತೆಗೆದುಕೊಂಡರೆ,ದಿನವೊಂದರಲ್ಲಿ ಏಳುಲಕ್ಷ ಸಂಖ್ಯೆಯ ಸಾಧನಗಳನ್ನು ಹೊಸದಾಗಿ ಬಳಸಲು ಆರಂಭಿಸಲಾಗಿರುತ್ತದಂತೆ.ಕಳೆದ ತ್ರೈಮಾಸಿಕದಲ್ಲಿದು ಐದು ಲಕ್ಷವಾಗಿತ್ತು.ಮರು ಮಾರಾಟವಾದ ಸಾಧನಗಳನ್ನಿಲ್ಲಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.ಬಳಕೆದಾರನು ಖರೀದಿಸಿ,ಸೇವಾದಾತೃವಿನ ಜಾಲವನ್ನು ಬಳಸಲಾರಂಭಿಸಿದಾಗ ಅದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.ಆಪಲ್‌ನ ಐಓಎಸ್ ಬಳಸುವ ಸಾಧನಗಳನ್ನು ದಿನವೊಂದಕ್ಕೆ ಎರಡುಮುಕ್ಕಾಲು ಲಕ್ಷ ಸಂಖ್ಯೆಯಲ್ಲಿ ಸೇರಿಸಲಾಗುತ್ತಿದೆ.
-----------------------------------------------------
ಸ್ವ-ರಿಪೇರಿ ಮಾಡಿಕೊಳ್ಳಬಲ್ಲ ಸಾಧನಗಳು


ಸರ್ಕ್ಯೂಟ್‌ಬೋರ್ಡುಗಳಲ್ಲಿ ಸಂಪರ್ಕ ಏರ್ಪಡಿಸುವ ತಂತಿಗಳು ಯಾವ ಕಾರಣದಿಂದಾದರೂ ಮುರಿದು ಹೋದರೆ,ಆ ಸಾಧನಗಳು ಕೆಲಸ ಮಾಡವು.ಈಗ ಇಲಿನಾಯ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಹೀಗೆ ವಿಫಲವಾದ ಸಾಧನಗಳಲ್ಲಿ,ತಂತಿಗಳ ಮರುಜೋಡಣೆಯಾಗುವಂತೆ ಮಾಡಲು ಸಮರ್ಥರಾಗಿದ್ದರೆ.ಗ್ಯಾಲಿಯಂ-ಇಂಡಿಯಂ ಇರುವ ಮೈಕ್ರೋಕ್ಯಾಪ್ಸೂಲುಗಳನ್ನು ತಂತಿಗಳ ಪಕ್ಕ ಜೋಡಿಸಿದ್ದು,ತಂತಿ ಕಿತ್ತು ಹೋದೊಡನೆ,ಮೈಕ್ರೋಕ್ಯಾಪ್ಸೂಲುಗಳೂ ಬಿರಿಯುವಂತೆ ಏರ್ಪಡಿಸಿರುವ ಕಾರಣ,ಗ್ಯಾಲಿಯಂ-ಇಂಡಿಯಂ ಹೊರಚೆಲ್ಲಲ್ಪಟ್ತು,ಇವುಗಳು ಮುರಿದ ತಂತಿಗಳ ಬದಲಿಗೆ ಹೊಸ ಸಂಪರ್ಕ ಏರ್ಪಡಿಸುತ್ತವಾದ್ದರಿಂದ ಸಾಧನಗಳು ಮತ್ತೆ ಕೆಲಸ ಮಾಡಲು ಸಮರ್ಥವಾಗುತ್ತವೆ.ಶೇಕಡಾ ತೊಂಭತ್ತೊಂಭತ್ತು ಭಾಗ ಸಂಪರ್ಕ ಏರ್ಪಡುತ್ತದೆ.ಹೀಗಾಗಿ ಸಾಧನ ಏನೂ ಸಂಭವಿಸದಂತೆ,ಕೆಲಸ ಮುಂದುವರಿಸಲು ಸಮರ್ಥವಾಗುತ್ತದೆ.ಎರಡು ಪದರಗಳ ಸರ್ಕ್ಯೂಟ್ ಬೋರ್ಡ್ ಇರುವ ಸಾಧನಗಳಲ್ಲಿದನ್ನು ಬಳಸಬಹುದು.ಹೀಗಾಗಿ ಕಂಪ್ಯೂಟರುಗಳಲ್ಲು ಈ ತಂತ್ರಜ್ಞಾನ ಬಳಕೆಗೆ ಸೂಕ್ತವಾಗಿದೆ.
Udayavani


ಅಶೋಕ್‌ಕುಮಾರ್ ಎ



Monday, December 19, 2011

ಜನರ ಬಳಿಗೆ ಸರಕಾರ:ಅಂತರ್ಜಾಲ ಬಳಕೆ


ಜನರ ಬಳಿಗೆ ಸರಕಾರ:ಅಂತರ್ಜಾಲ ಬಳಕೆ
ಸರಕಾರ ಮತ್ತು ಜನರ ಮಧ್ಯೆ ಹೆಚ್ಚು ಸಂವಹನ ಏರ್ಪಡಲು ಅಂತರ್ಜಾಲವನ್ನು ಬಳಸುವ ವಿಚಾರ ಕೇಂದ್ರ ಸರಕಾರದ ಪ್ರಸ್ತಾಪನೆಯಲ್ಲಿದೆ.ಇತ್ತೀಚೆಗೆ ಅಂತರ್ಜಾಲದ ನಿಯಂತ್ರಣದ ಬಗ್ಗೆ ಪ್ರಸ್ತಾಪಿಸಿದ್ದ ಕಪಿಲ್ ಸಿಬಾಲ್ ಅವರನ್ನು ಗೂಗಲ್,ಫೇಸ್‌ಬುಕ್ ತಾಣಗಳ ಪ್ರತಿನಿಧಿಗಳು ಭೇಟಿಯಾದ ನಂತರ ಸರಕಾರದ ಚಿಂತನೆ ಹೊಸ ದಿಕ್ಕು ಹಿಡಿದೆದೆ.ತಾಣಗಳನ್ನು ಬಳಸಿ,ಜನರನ್ನು ಮುಟ್ಟುವುದು ಹೇಗೆ ಎನ್ನುವುದನ್ನು ಚರ್ಚಿಸಲಾಯಿತು.ಮುಂಬೈಯ ಮತ್ತು ದೆಹಲಿಯ ಸಾರಿಗೆ ಇಲಾಖೆಯವರು ಫೇಸ್‌ಬುಕ್ ತಾಣದ ಮೂಲಕ ಜನರ ಜತೆ ಸೌಹಾರ್ದ ಸಂಬಂಧವನ್ನು ಹೊಂದಲು ಶಕ್ತವಾಗಿವೆ.ಸಾರಿಗೆಯ ನಿಯಮಗಳನ್ನು ಮುರಿದವರ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿ,ನಿಯಮ ಪಾಲನೆಗೆ ಜನರು ಮುತುವರ್ಜಿ ವಹಿಸಲು ಸಾರಿಗೆ ಇಲಾಖೆ ಕಾರಣವಾಗಿದೆ.ಅದೇ ರೀತಿ ವಿದೇಶ ವ್ಯವಹಾರ ಇಲಾಖೆಯೂ ಸಾಮಾಜಿಕ ತಾಣಗಳಲ್ಲಿ ಕ್ರಿಯಾಶೀಲವಾಗಿದೆ.ಆದರೆ ಇತ್ತೀಚೆಗೆ ಕೋರ್ಟು ಸಾರಿಗೆ ಇಲಾಖೆಗೆ ಅಪರಾಧಿಗಳ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸುವ ಬಗ್ಗೆ ಎಚ್ಚರಿಕೆ ನೀಡಿತು.ಈ ರೀತಿ ಮಾಡುವುದು ನಿಯಮ ಪಾಲಿಸಲು ಜನರನ್ನು ಪ್ರಚೋದಿಸಬಹುದು.ಆದರೆ ಜನರ ಖಾಸಗಿತನದ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕೋರ್ಟು ಕಿವಿ ಮಾತು ಹೇಳಿತು.ಕಪಿಲ್ ಸಿಬಾಲ್ ಅವರು ತಮ್ಮ ಚರ್ಚೆಯಲ್ಲಿ ಇಂತಹ ಸೂಕ್ಷ್ಮಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರಂತೆ.
ಹಾಗೆ ನೋಡಿದರೆ ಸರಕಾರ ಮತ್ತದರ ಇಲಾಖೆಗಳು ಅಂತರ್ಜಾಲದ ಮೂಲಕ ಮಾಹಿತಿ ಹಕ್ಕಿನ ಮೂಲಕ ನೀಡಬಹುದಾದ ಮಾಹಿತಿಯನ್ನು ಸಾರ್ವಜನಿಕಗೊಳಿಸಬಹುದು.ಸದ್ಯ ಮಾಹಿತಿ ಹಕ್ಕಿನ ಪ್ರಕಾರ ಜನರು ತಮಗೆ ಬೇಕಾದ ಮಾಹಿತಿಯನ್ನು ಕೋರಿ,ಸರಕಾರದ ಇಲಾಖೆಗಳಿಗೆ ಅರ್ಜಿ ಸಲ್ಲಿಸಿ,ಮಾಹಿತಿ ಪಡೆಯಬಹುದು.ಇಂತಹ ಮಾಹಿತಿ ಪ್ರಭಾವಶಾಲಿ ವ್ಯಕ್ತಿ ಇಲ್ಲವೇ ಸಂಸ್ಥೆಗಳಿಗೆ ಸಂಬಂಧಿಸಿದ,ಭ್ರಷ್ಟಾಚಾರ ಪ್ರಕರಣವನ್ನೋ,ಅಕ್ರಮ ವ್ಯವಹಾರಕ್ಕೋ ಸಂಬಂಧಿಸಿದ್ದಾದರೆ,ಮಾಹಿತಿ ಕೋರಿದವನ ಜೀವಕ್ಕೆ ಅಪಾಯ ಬರುವುದೂ ಇದೆ.ಸರಕಾರ ಹೊಸ ಕಾನೂನು ರೂಪಿಸಿ,ಮಾಹಿತಿ ಕೋರಿದ ವ್ಯಕ್ತಿಯ ಗೌಪ್ಯವಾಗಿರಿಸುವುದನ್ನು ಕಡ್ಡಾಯವಾಗಿಸುವ ಬಗ್ಗೆ ಕಾನೂನು ರೂಪಿಸುವ ಬಗ್ಗೆ ಯೋಚಿಸುತ್ತಿದೆ.ಆದರೆ ಮಾಹಿತಿ ಹಕ್ಕಿನ ಮೂಲಕ ನೀಡಬಹುದಾದ ಮಾಹಿತಿಯನ್ನು ಅಂತರ್ಜಾಲ  ಮೂಲಕ ಸಾರ್ವಜನಿಕಗೊಳಿಸಿದರೆ,ಬೇಕಾದವರು ಅದನ್ನು ಉಪಯೋಗಿಸಬಹುದು.ಅರ್ಜಿ ಸಲ್ಲಿಸಿ ಕಾಯುವ,ಯಾರದೋ ಆಗ್ರಹಕ್ಕೆ ತುತ್ತಾಗುವ ಸಂಭಾವ್ಯತೆಯನ್ನು ತಡೆಯಬಹುದು.
ನಮ್ಮಲ್ಲಿ ಅನೇಕ ಕಾಮಗಾರಿಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಲೋಕೋಪಯೋಗಿ ಇಲಾಖೆಗಳು ನಡೆಸುತ್ತಿರುತ್ತವೆ.ಎಷ್ಟೋ ವೇಳೆ ಈ ಕಾಮಗಾರಿಗಳು ಕಳಪೆಯಾಗಿರುವುದೂ ಇದೆ.ಕೆಲವೊಮ್ಮೆ,ಕಾಮಗಾರಿಗಳು ನಡೆಯದೇ ಅವುಗಳಿಗೆ ಹಣ ಪಾವತಿಯಾಗಿರುವುದೂ ಇದೆ.ಜನರಿಗೆ ಈ ಬಗ್ಗೆ ಮಾಹಿತಿಯೇ ಇರುವುದಿಲ್ಲ.ಇಂತಲ್ಲಿಯೂ ಅಂತರ್ಜಾಲ ಹೆಚ್ಚು ಉಪಯುಕ್ತವಾಗಬಹುದು.ಸ್ಥಳೀಯಾಡಳಿತ ಸಂಸ್ಥೆಗಳು,ಲೋಕೋಪಯೋಗಿ ಇಲಾಖೆಗಳು ಹಮ್ಮಿಕೊಂಡಿರುವ ಕಾಮಗಾರಿಗಳ ವಿವರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಿದರೆ,ಜನರು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಗಮನ ನೀಡಬಹುದು.ಕಾಮಗಾರಿಗಳು ನಡೆಯದ್ದರೆ ಜನರ ಗಮನಕ್ಕೆ ಬರುತ್ತದೆ.
--------------------------------------------------
ಚಾಲನೆ ವೇಳೆ ಸೆಲ್‌ಫೋನ್ ಬೇಡ
ವಾಹನ ಚಲಾಯಿಸುವ ವೇಳೆ ಸೆಲ್‌ಪೋನ್ ಕರೆಗಳನ್ನು ಮಾಡುವುದು ಅಥವಾ ಸ್ವೀಕರಿಸುವುದು ಅಪಘಾತಗಳಿಗೆ ಕಾರಣವಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ.ಸೆಲ್‌ಫೋನ್ ಅನ್ನು ಕೈಗಳಿಂದ ಮುಟ್ಟದೆ,ಕರೆಗಳನ್ನು ಮಾಡುವ ಮತ್ತು ಸ್ವೀಕರಿಸುವ ವ್ಯವಸ್ಥೆಗಳೂ ಈಗ ಲಭ್ಯ.ಆದರೆ ಇವುಗಳೂ ಅಪಾಯಕಾರಿಯೆ ಎನ್ನುವುದು ಸಂಶೋಧನೆಗಳಿಂದ ತಿಳಿದು ಬಂದಿದೆ.ಕರಮುಕ್ತ ವ್ಯವಸ್ಥೆಗಳ ಮೂಲಕ ಸೆಲ್‌ಫೋನು ಕರೆ ಉತ್ತರಿಸಿದಾಗಲೂ ಜನರ ಗಮನ ಮಾತಿನ ಕಡೆಗೆ ಇರುತ್ತದೆ-ರಸ್ತೆಯ ಕಡೆಗಲ್ಲ.ಹೀಗಾಗಿ,ಅಪಾಯ ಸಂಭವಿಸಬಹುದು ಎನ್ನುವುದು ಹಲವಾರು ಘಟನೆಗಳಲ್ಲೂ ಕಂಡು ಬಂದಿದೆ.
ಯಾರ ಜತೆಯಾದರೂ ಮಾತನಾಡುವಾಗ,ನಮ್ಮ ಮಿದುಳು ಮಾತನ್ನು ಆಲಿಸುವುದು,ಮಾತನ್ನು ವಿಶ್ಲೇಷಿಸುವುದು  ಮತ್ತು ಆ ಬಗ್ಗೆ ಯೋಚಿಸುತ್ತಿರುತ್ತದಾದ್ದರಿಂದ ರಸ್ತೆಯ ಕಡೆಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ ಎನ್ನುವುದು ಸ್ಪಷ್ಟ.ಸೆಲ್‌ಪೋನಿನಲ್ಲಿ ಮಾತನಾಡುವ ವೇಳೆ ಇತರ ಸಮಯಕ್ಕಿಂತ ಅಪಘಾತ ಭಯ ನಾಲ್ಕು ಪಟ್ಟು ಹೆಚ್ಚುತ್ತದೆ ಎನ್ನುವುದು ವ್ಯಕ್ತವಾದ ಅಂಶವಾಗಿದೆ.ಸ್ವೀಡನ್‌ನಲ್ಲಿ ನಡೆದ ಅಧ್ಯಯನವೂ ಸೆಲ್‌ಫೋನ್ ಕೈಯಲ್ಲಿ ಹಿಡಿದು ಮಾತನಾಡುವುದು ಅಥವಾ ಅವನ್ನು ಮುಟ್ಟದೆ,ಕರಮುಕ್ತ ವ್ಯವಸ್ಥೆಗಳ ಮೂಲಕ ಕರೆ ಮಾಡುವುದೂ ಎರಡೂ ಅಪಾಯಕಾರಿ ಎಂದು ಸ್ಪಷ್ಟವಾಗಿದೆ.
ಆದರೆ ಸುಮಾರು ಆರು ಸಾವಿರ ಚಾಲಕರನ್ನು ಈ ಬಗ್ಗೆ ಪ್ರಶ್ನಿಸಿದಾಗ,ಆವರುಗಳು ಕರಮುಕ್ತ ಸೆಲ್‌ಪೋನುಗಳನ್ನು ಬಳಸುವುದೂ ಅಪಾಯಕಾರಿ ಎನ್ನುವುದನ್ನು ಒಪ್ಪಲು ತಯಾರಿಲ್ಲ.ಸೆಲ್‌ಫೋನುಗಳನ್ನು ಕೈಯಲ್ಲಿ ಹಿಡಿದು ವಾಹನ ಚಲಾಯಿಸುವುದು ಅಪಾಯಕಾರಿ ಎನ್ನುವುದರ ಬಗ್ಗೆ ಹೆಚ್ಚು ಸಹಮತವಿದೆ.ವಾಹನ ಚಲಾವಣೆಯನ್ನು ಸಿಮ್ಯುಲೇಟರ್ ಮೂಲಕ ಮಾಡುವವರಲ್ಲಿ,ಅವರ ಮಿದುಳಿನ ಸಂಕೇತಗಳನ್ನು ಎಂ ಆರ್ ಐ ಮೂಲಕ ವಿಶ್ಲೇಷಣೆಗೊಳಪಡಿಸಿದಾಗ,ಹೆಡ್‌ಪೋನಿನಲ್ಲಿ ಧ್ವನಿಯನ್ನು ಆಲಿಸುವ ವ್ಯಕ್ತಿಯು ಧ್ವನಿಯನ್ನು ಆಲಿಸದ ವ್ಯಕ್ತಿಗಿಂತ ಶೇಕಡಾ ಮೂವತ್ತೇಳು ಕಡಿಮೆ ಗಮನ ಚಾಲನೆಯ ಕಡೆ ನೀಡುವುದು ವ್ಯಕ್ತವಾಯಿತು.
-------------------------------------------------
ಬಿಸಿಲಿಗೊಡ್ಡಿದರೆ ಸರಿ:ಬಟ್ಟೆ ಕ್ಲೀನ್


ಬಟ್ಟೆಯು ಸ್ವತ: ಸ್ವಚ್ಛವಾಗುವಂತೆ ಮಾಡುವ ಬಗ್ಗೆ ಸಂಶೋಧನೆ ಪ್ರಗತಿಯಲ್ಲಿದೆ.ಚೀನಾದ ಎರಡು ವಿಶ್ವವಿದ್ಯಾಲಯಗಳ ಸಂಶೋಧಕರು ಬಿಸಿಲಿಗೆ ಹರಡಿದಾಗ ಕಲೆ ನಿವಾರಿಸಿಕೊಂಡು ಸ್ವಚ್ಛವಾಗುವ ಬಟ್ಟೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.ಬಟ್ಟೆಗೆ ನೀಡಿದ ಟೈಟಾನಿಯಂ ಡಯಾಕ್ಸೈಡ್ ಲೇಪನ ಈ ಪವಾಡ ಮಾಡುತ್ತದೆ.ನಾಲ್ಕು ಸಲ ಬಟ್ಟೆಯನ್ನು ಬಿಸಿಲಿಗೆ ಹರಡಿದಾಗಲೂ,ಅದು ಸ್ವಚ್ಛವಾದುದರಿಂದ,ಈ ಲೇಪನ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎನ್ನುವುದು ವ್ಯಕ್ತವಾಗಿದೆ.ಜಪಾನಿನಲ್ಲಿ ಉನಿಕ್ಲೋ ಎನ್ನುವ ಮಾರಾಟ ಮಳಿಗೆಯೂ,ಸೆಕೆಯೆನಿಸಿದ ಮತ್ತು ದುರ್ಗಂಧ ಬೀರದ ವಸ್ತ್ರವನ್ನು ಮಾರಾಟ ಮಾಡತೊಡಗಿದೆ.ಇನ್ನು ಧರಿಸಿದಾಗ ಬೆಚ್ಚನೆ ಅನುಭವ ಕೊಡುವ ಬಟ್ಟೆಗಳೂ ಇವೆ.ಟೈಟಾನಿಯಮ್ ಡಯಾಕ್ಸೈಡ್ ಕೋಟಿಂಗ್ ಅಗ್ಗ,ವಿಷರಹಿತ ಮತ್ತು ಪರಿಸರ ಪ್ರಿಯ ಎನ್ನುವುದು ಮತ್ತೊಂದು ಪ್ಲಸ್‌ಪಾಯಿಂಟ್.
----------------------------------------
ಸೆಕೆಂಡಿಗೆ ಟ್ರಿಲಿಯನ್ ಫ್ರೇಮ್ ಹಿಡಿಯುವ ಕ್ಯಾಮರಾ
ಮಸಾಚ್ಯುಸೆಟ್ಸ್‌ನ ಎಂಐಟಿ ವಿದ್ಯಾಲಯವು ಸೆಕೆಂಡಿಗೆ ಟ್ರಿಲಿಯನ್ ಬಾರಿ ಫೋಟೋ ಹಿಡಿಯಬಲ್ಲ ಕ್ಯಾಮರಾವನ್ನು ಅಭಿವೃದ್ಧಿ ಪಡಿಸಿದೆ.ಅಂದರೆ ಇದು ಮಾಮೂಲಿ ಟೆಲಿವಿಷನ್  ಕ್ಯಾಮರಾಕ್ಕಿಂತ ನಲುವತ್ತು ಬಿಲಿಯನ್ ವೇಗವಾಗಿದೆ.ಭಾರೀ ವೇಗದಲ್ಲಿ ನಡೆವ ಪ್ರಕ್ರಿಯೆಗಳನ್ನು ಚಿತ್ರೀಕರಿಸಲಿದನ್ನು ಬಳಸಬಹುದು.ಇದಕ್ಕೆ ಫೆಂಟೋ ಛಾಯಾಚಿತ್ರೀಕರಣ ಎಂದು ಹೆಸರಿಸಲಾಗಿದೆ.
--------------------------------------------
ಚಾಲಕರಹಿತ ಕಾರು;ಗೂಗಲ್‌ಗೆ ಪೇಟೆಂಟ್
ಚಾಲಕರಹಿತ ಮತ್ತು ಚಾಲಕಸಹಿತವಾಗಿ ಹೀಗೆ ಎರಡು ವಿಧದಲ್ಲಿ ಚಲಿಸಬಲ್ಲ ಕಾರಿನ ಹಕ್ಕುಸ್ವಾಮ್ಯವೀಗ ಗೂಗಲ್ ಕಂಪೆನಿಗೆ ಲಭ್ಯವಾಗಿದೆ.ಕಾರನ್ನು ನಿಲ್ಲಿಸಿದ ಸ್ಥಳವು ಕಾರಿನ ಚಾಲನ ವ್ಯವಸ್ಥೆಗೆ ಸ್ಪಷ್ಟವಾಗಿ ಗೊತ್ತಾದಾಗಲದು,ಚಾಲಕರಹಿತ ಸ್ಥಿತಿಗೆ ಹೋಗುತ್ತದೆ.ಸ್ಥಾನವು ಜಿಪಿಎಸ್ ಮೂಲಕ ಕಾರಿಗೆ ಗೊತ್ತಾಗಬಹುದು.ನಂತರ ಹೋಗ ಬೇಕಾದ ಸ್ಥಳದ ಮಾಹಿತಿಯಿದ್ದರೆ,ಕಾರಿನ ಚಾಲನ ವ್ಯವಸ್ಥೆ,ಸ್ವತ: ಕಾರು ಚಲಾಯಿಸಿಕೊಂಡು ಗಮ್ಯವನ್ನು ತಲುಪಬಹುದು.ಗ್ಯಾರೇಜಿಗೆ ಕಾರನ್ನುತಲುಪಿಸ ಬೇಕಾದಾಗ,ಅಥವಾಕಾರು ಬಾಡಿಗೆ ನೀಡುವ ಕಂಪೆನಿಗಳಿಗೆ ಇಂತಹ ಕಾರು ಉಪಯುಕ್ತವಾಗಬಹುದು.
UDAYAVANI 
ಅಶೋಕ್‌ಕುಮಾರ್ ಎ

Sunday, December 11, 2011

ಅಂತರ್ಜಾಲದ ಮೇಲೆ ನಿಯಂತ್ರಣ:ಭಾರತದಲ್ಲೂ ಪ್ರಸ್ತಾವ


ಅಂತರ್ಜಾಲದ ಮೇಲೆ ನಿಯಂತ್ರಣ:ಭಾರತದಲ್ಲೂ ಪ್ರಸ್ತಾವ
ಅಂತರ್ಜಾಲದಲ್ಲಿ ಜನರ ಬಗ್ಗೆ  ಇಲ್ಲ ಸಲ್ಲದ ಮಾಹಿತಿಗಳನ್ನು ಹರಿಯಬಿಟ್ಟು ತಮಾಷೆ ನೋಡುವುದು,ಜನರ ಧಾರ್ಮಿಕ.ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿನ ಬರವಣಿಗೆಗಳನ್ನು ಪ್ರಚಾರಪಡಿಸುವುದು ಇವೆಲ್ಲಕ್ಕೂ ನಿಯಂತ್ರಣ ಹಾಕಬೇಕು ಎಂದು ಕಪಿಲ್ ಸಿಬಾಲ್ ಅವರು ಪೀಠಿಕೆ ಹಾಕಿದಾಗ,ಅವರಿಗೆ ವಿಪಕ್ಷವಾದ ಬಿಜೆಪಿಯ ಸಹಿತ ಹಲವರ ಬೆಂಬಲ ಸಿಕ್ಕಿತು.ಅವರು ಹೇಳಿದ ವಿಷಯ ಸತ್ಯವೇ ಆದರೂ,ಅಂತರ್ಜಾಲಕ್ಕೆ ನಿಯಂತ್ರಣ ಹಾಕುವುದು ಸುಲಭದ ಮಾತಲ್ಲ.ಚೀನಾ,ಕೊರಿಯಾ,ರಶ್ಯಾ,ಸಿರಿಯಾ ಹೀಗೆ ಹಲವು ದೇಶಗಳು ಅಂತರ್ಜಾಲದ ಮೇಲೆ ನಿಯಂತ್ರಣ,ಅಂತರ್ಜಾಲ ತಾಣಗಳ ಮೇಲೆ ನಿಷೇಧ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸುತ್ತಿವೆ.
ಗೂಗಲ್ ಪ್ರಕಾರ,ಭಾರತ ಸರಕಾರದ ಕಡೆಯಿಂದ ಅಂತರ್ಜಾಲ ತಾಣಗಳ 358ವಿಷಯಗಳನ್ನು ತೆಗೆದುಹಾಕಲು ಬೇಡಿಕೆ ಬಂದಿದೆ.ಇವುಗಳ ಪೈಕಿ ಶೇಕಡಾ ಎಪ್ಪತ್ತು ಭಾಗದ ಬೇಡಿಕೆ,ಸರಕಾರದ ಬಗೆಗಿನ ಟೀಕೆ ಇದೆಯೆನ್ನುವ ಕಾರಣಕ್ಕೆ  ಬಂದಿದೆಯಂತೆ.ಎಂಟು ವಿಷಯಗಳನ್ನು ದ್ವೇಷದ ದಳ್ಳುರಿಯ ಭಾಷಣಗಳು ಎನ್ನುವ ಕಾರಣಕ್ಕೆ ತೆಗೆದುಹಾಕಲು ಬೇಡಿಕೆ ಬಂದಿದೆಯೆಂದು ಗೂಗಲ್ ತಿಳಿಸಿದೆ.
ಅಂತರ್ಜಾಲದಲ್ಲಿ ವಿದೇಶಗಳ ಸರ್ವರ್ ಬಳಸುವ ತಾಣಗಳ ಮೂಲಕ ತಮ್ಮ ಬರವಣಿಗೆಗಳನ್ನು ಪ್ರಕಾಶಿಸುವ ಮೂಲಕ ದೇಶವೊಂದರ ಕಾನೂನು ಅನ್ವಯಿಸದ ಹಾಗೆ ಮಾಡುವುದು ಸಾಧ್ಯವೆನ್ನುವುದು ದೊಡ್ಡ ಸಮಸ್ಯೆಯಾಗಿದೆ.ಹಾಗಾಗಿ ಯಾವುದೇ ದೇಶದ ಕಾನೂನು ಎಷ್ಟೆ ಪ್ರಬಲವಾಗಿದ್ದರೂ ಅದನ್ನು ಮೀರಲು ಸಾಧ್ಯವಾಗುತ್ತದೆ.ಯಾವುದೇ ಮಾಧ್ಯಮವನ್ನು ನಿಯಂತ್ರಿಸಲು ಕಾನೂನುಗಳು ಇರಬೇಕು ಮತ್ತು ಯಾವನೇ ವ್ಯಕ್ತಿಗೆ ಮಾನಹಾನಿಯಾಗುವ ಅಥವಾ ಆತನ ವಿರುದ್ಧ ದ್ವೇಷ ಭುಗಿಲೇಳುವಂತೆ ಮಾಡುವ ವಿಷಯಗಳು ಡಿಜಿಟಲ್ ರೂಪದಲ್ಲಿದ್ದರೂ ಆಕ್ಷೇಪಾರ್ಹ.ಅಂತವನ್ನು ತೆಗೆದು ಹಾಕಲು ಅನುವು ಮಾಡುವ ಅಥವಾ ಅಂತಹ ವಿಷಯವನ್ನು ಪ್ರಚುರಪಡಿಸುವ ಅಂತರ್ಜಾಲ ತಾಣಗಳ ಮೇಲೆ ನಿಯಂತ್ರಣ ಹೊಂದಲು  ಸಾಧ್ಯವಾಗಬೇಕು ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ.ಆದರೆ ಇದನ್ನೇ ನೆವವಾಗಿಟ್ಟು,ಮುಕ್ತ ಚರ್ಚೆಯನ್ನು ನಿಷೇಧಿಸುವ ಕ್ರಮಗಳನ್ನು ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ.
ರಶ್ಯಾ,ಚೀನಾ,ಉಜಬೇಕಿಸ್ತಾನ,ತಾಜಿಕಿಸ್ತಾನದಂತಹ ದೇಶಗಳು ಅಂತರ್ಜಾಲದ ಮೇಲೆ ತಮ್ಮ ಸರಕಾರಗಳಿಗೆ ಹೆಚ್ಚಿನ ನಿಯಂತ್ರಣ ಬಯಸಿ,ವಿಶ್ವಸಂಸ್ಥೆಯಲ್ಲಿ ಪ್ರಸ್ತಾವವನ್ನಿಟ್ಟಿವೆ.ಸದ್ಯ ಅಂತರ್ಜಾಲದಲ್ಲಿ ಸ್ವನಿಯಂತ್ರಣವೇ ಪ್ರಧಾನ.ಯಾವುದೇ ಬಾಹ್ಯ ನಿಯಂತ್ರಣ ಅಂತರ್ಜಾಲ ತಾಣಗಳ ಮೇಲೆ ವಿಧಿಸಲಾಗುತ್ತಿಲ್ಲ.ಇದೇ ರೀತಿ ಮುಂದುವರಿದರೆ ಚೆನ್ನವೆಂದು ಬಹುತೇಕ ಅಂತರ್ಜಾಲಿಗರ ಅನಿಸಿಕೆ ಕೂಡಾ.ಹೀಗಾಗಿ ಯಾರೇ ಆದರೂ ನಿಯಂತ್ರಣ,ನಿಷೇಧಗಳ ಬಗ್ಗೆ ಮಾತೆತ್ತಿದ್ದರೆ,ಅದಕ್ಕೆ ಟ್ವಿಟರ್,ಫೇಸ್‌ಬುಕ್ ತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತದೆ.ಕಪಿಲ್ ಸಿಬಾಲ್ ಅವರೂ ಟ್ವಿಟರ್ ಮತ್ತಿತ್ತರ ತಾಣಗಳಲ್ಲಿ ಖಳನಾಯಕನಂತೆ ಚಿತ್ರಿತರಾದರು.
ಕಾಕತಾಳಿಯವೆಂಬಂತೆ,ಇದೇ ಸಮಯದಲ್ಲಿ ಅಂತರ್ಜಾಲಕ್ಕೆ ಸೆನ್ಸಾರ್ ಅನ್ವಯಿಸುವ ಯಾವುದೇ ಕ್ರಮದಿಂದ ದೂರವುಳಿಯಬೇಕೆಂದು ಅಮೆರಿಕಾದ ಸಚಿವೆ ಹಿಲರಿಕ್ಲಿಂಟನ್ ಪ್ರತಿಪಾದಿಸಿದ್ದಾರಂತೆ.ವಿಕಿಲೀಕ್ಸ್ ಅಂತಹ ತಾಣವು ಮಾಹಿತಿಯನ್ನು ಬಹಿರಂಗಗೊಳಿಸಿ,ಅಮೆರಿಕಾಕ್ಕೆ ಇರಿಸುಮುರಿಸು ಮಾಡಿದಾಗ,ವಿಕಿಲೀಕ್ಸ್ ಅನ್ನು ಹತ್ತಿಕ್ಕಲು ಹಿಂದೆ ಮುಂದೆ ನೋಡದ ಅಮೆರಿಕಾ,ಈಗ ಈ ರೀತಿ ಪ್ರತಿಪಾದಿಸುತ್ತಿರುವುದು ಅಚ್ಚರಿಯೇ ಸರಿ!
---------------------------------
ಅಂತರ್ಜಾಲ ಶೋಧಿಸದಿರಿ:ಫ್ಲಿಪ್ ಮಾಡಿ
.infoaxe.com ಇನ್ನೊಂದು ಶೋಧ ತಾಣ.ಆದರಿದು ಕೆಲಸ ಮಾಡುವ ರೀತಿ ಮಾತ್ರ ತುಸು ಭಿನ್ನ.ಶೋಧ ಗುಚ್ಚವನ್ನು ನೀಡಿದ ವ್ಯಕ್ತಿಯು ಈ ಹಿಂದೆ ಭೇಟಿ ನೀಡಿದ್ದ ತಾಣಗಳಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯಿದೆಯೇ ಎಂದು ಹುಡುಕಿಕೊಡಲು ಈ ತಾಣ ಪ್ರಯತ್ನಿಸುತ್ತದೆ.ಸಾಮಾನ್ಯವಾಗಿ ಜನರು ತಾವು ಹಿಂದೆ ಭೇಟಿ ನೀಡಿದ ತಾಣದಲ್ಲಿ ಕಂಡ ಯಾವುದೋ ಮಾಹಿತಿಯ ಬಗ್ಗೇ ಶೋಧಿಸುವುದೇ ಹೆಚ್ಚು ಎನ್ನುವ ಸಂಶೋಧನೆಯ ಅನ್ವಯ ಈ ತಾಣದ ಶೋಧವನ್ನು ನಡೆಸಲಾಗುತ್ತದೆ.ಈ ರೀತಿಯ ಶೊಧ ನಡೆಸುವ ಕಾರಣ ,ತಾಣವು ನೋಂದಾವಣೆಯನ್ನು ಬಯಸುತ್ತದೆ.ಪ್ರತಿಯೋರ್ವನ ಅಂತರ್ಜಾಲ ಚರಿತೆಯನ್ನದು ನೆನಪಿನಲ್ಲಿರಿಸಿ,ಶೋಧ ಫಲಿತಾಂಶ ನೀಡುತ್ತದೆ.ಹೀಗಾಗಿ,ಖಾಸಗಿತನದ ಬಗ್ಗೆ ಕಾಳಜಿ ಇದ್ದವರು ಈ ತಾಣವನ್ನು ದೂರವಿಡಲೂ ಬಹುದು.
--------------------
ಆಂಡ್ರಾಯಿಡ್:ಹತ್ತು ಬಿಲಿಯನ್ ಡೌನ್‌ಲೋಡ್


ಆಂಡ್ರಾಯಿಡ್ ಬಹು ಜನಪ್ರಿಯ ಸ್ಮಾರ್ಟ್‌ಫೋನ್ ನಿರ್ವಹಣಾ ವ್ಯವಸ್ಥೆ ತಂತ್ರಾಂಶವೆನ್ನುವುದು ಈಗ ಹೆಚ್ಚಿನವರಿಗೆ ಗೊತ್ತಿರುವ ವಿಷಯ.ಇತ್ತೀಚೆಗೆ ಅದರ ಆಂಡ್ರಾಯಿಡ್ ಸ್ಟೋರಿನಿಂದ ಹತ್ತು ಬಿಲಿಯನ್‌ನೇ ಡೌನ್‌ಲೋಡ್ ದಾಖಲಾಯಿತು.ಒಂದು ಬಿಲಿಯನ್ ಡೌನ್‌ಲೋಡ್ ಆಗಲು ಇಪ್ಪತ್ತೆರಡು ತಿಂಗಳು ಬೇಕಾಯಿತು.ಕೊನೆಯ ಒಂದು ಬಿಲಿಯನ್ ಡೌನ್‌ಲೋಡ್ ಒಂದು ತಿಂಗಳ ಒಳಗೇ ಆಯಿತು ಎಂದರೆ,ಇತ್ತೀಚೆಗೆ ಆಂಡ್ರಾಯಿಡ್ ಅದೆಷ್ಟು ಜನಪ್ರಿಯವಾಗ ಹತ್ತಿದೆ ಎನ್ನುವುದರ ಚಿತ್ರಣ ಲಭಿಸದಿರದು.ಇದರ ಪ್ರಯುಕ್ತ ಸಂಭ್ರಮಾಚರಣೆಯಾಗಿ ಮುಂದಿನ ಕೆಲವು ದಿನಗಳಲ್ಲಿ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಅಗ್ಗದ ದರಗಳಲ್ಲಿ ಡೌನ್‌ಲೋಡ್ ಮಾಡಲು ಬಳಕೆದಾರರಿಗೆ ಅವಕಾಶ ಸಿಗಲಿದೆ.
-------------------------------------------
ಚಂದ್ರ:ಶಿಲೆಗಳು ಮಾಯ!
ನಾಸಾವು ಚಂದಯಾನದ ಮೂಲಕ ಗಳಿಸಿದ ಚಂದ್ರನ ಮಣ್ಣು ಮತ್ತು ಶಿಲೆಗಳ ತುಣುಕುಗಳಲ್ಲಿ ಸುಮಾರು ಐನೂರು ತುಣುಕುಗಳು ಈಗ ನಾಸಾದಲ್ಲಿಲ್ಲವಂತೆ.ಸಂಶೋಧಕರು ಎರವಲು ಪಡೆದು,ಈಗ ಅದು ತಮ್ಮಲ್ಲಿಲ್ಲ ಎನ್ನುತ್ತಿದ್ದಾರಂತೆ.ಇನ್ನು ಕೆಲವು ಹೇಗೆ ಮಾಯವಾಗಿದೆ ಎನ್ನುವ ಮಾಹಿತಿ ನಾಸಾದಲ್ಲಿಲ್ಲ.ಕೆಲವು ಸಂಶೋಧಕರು ಎರವಲು ಪಡೆದು,ಅವನ್ನು ಹಿಂತಿರುಗಿಸದೆ,ಈಗ ಮರಣ ಹೊಂದಿದ್ದಾರೆ.ಇನ್ನುಕೆಲವರು ನಾಸಾ ಕೇಳಿದರೂ ಮೌನ ತಾಳಿದ್ದಾರೆ.
---------------------------------------------------
ಬಯೋಲೈಟುಗಳು


ಜೈವಿಕವಾಗಿ ಬೆಳಕನ್ನು ಉತ್ಪಾದಿಸಲು ಸಾಧ್ಯವೇ?ಮಿಂಚುಹುಳ ಬೆಳಕನ್ನು ಬೀರುವಂತೆ,ಇತರ ಕ್ರಿಮಿಕೀಟಗಳು ಮತ್ತು ಬ್ಯಾಕ್ಟೀರಿಯಾಗಳು ಪ್ರಕಾಶವನ್ನು ಹೊರಹೊಮ್ಮುವಂತೆ ಮಾಡಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.ಬೆಲಕು ಬೀರುವ ಶಕ್ತಿಯಿರುವ ಬ್ಯಾಕ್ಟೀರಿಯಾಗಳು ಮಿಥೇನ್ ಅನಿಲವನ್ನು ಸೇವಿಸಿ,ಬೆಳಕನ್ನು ಹೊರಹೊಮ್ಮಿಸುತ್ತವೆ.ಇಂತಹ ಬ್ಯಾಕ್ಟೀರಿಯಾಗಳನ್ನು ಗಾಜಿನ ಭರಣಿಗಳಲ್ಲಿ ತುಂಬಿ,ಅವಕ್ಕೆ ಮಿಥೇನ್ ಅನಿಲ ಸರಬರಾಜು ಮಾಡುತ್ತಿದ್ದರೆ,ಈ ಭರಣಿಗಳು ಪ್ರಕಾಶದ ಪುಂಜಗಳಾಗಿ ಬಿಡುತ್ತವೆ.ಪಿಲಿಫ್ಸ್ ಕಂಪೆನಿಯು ಇಂತಹ ಜೈವಿಕ ಪ್ರಕಾಶ ಮೂಲಗಳನ್ನು ಅಭಿವೃದ್ಧಿ ಪಡಿಸಲು ಬಯಸಿದೆ.ಮುಂದಿನ ದಿನಗಳಲ್ಲಿ ಬೆಳಕು ಬೀರುವ ಮರಗಳನ್ನೂ ಅಭಿವೃದ್ಧಿ ಪಡಿಸಲು ಪಿಲಿಫ್ಸ್ ಕಂಪೆನಿಯು ಯೋಜಿಸಿದೆ.
-----------------------------
ಕಾಲೇಜುಗಳಿಗೆ ಗೂಗಲ್+ ಪುಟಗಳು


ಕಾಲೇಜುಗಳು ತಮ್ಮ ವಿದ್ಯಾರ್ಥಿ ಸಮುದಾಯದ ಜತೆ ಸಂಪರ್ಕ ಹೊಂದಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿರುವುದು ಈಗಿನ ವೈಖರಿ.ಫೇಸ್‌ಬುಕ್ ಪುಟ ಒಂದು ಜನಪ್ರಿಯ ಸಹಜ ಆಯ್ಕೆಯಾದರೆ,ಈಗ ಗೂಗಲ್+ ಇನ್ನೊಂದು ಆಯ್ಕೆ.ಈಗಲೇ ಗೂಗಲ್+ ಪುಟವನ್ನು ಹೊಂದುವುದು ಜಾಣತನವಾಗುತ್ತದೆ.ಗೂಗಲ್ ಶೋಧದಲ್ಲಿ ಕಾಲೇಜಿನ ಬಗ್ಗೆ ಶೋಧಿಸುವವರಿಗೆ ಕಾಣಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.ಹೆಚ್ಚಿನ ಪ್ರಚಾರ,ಪ್ರತಿಸ್ಪರ್ಧಿಗಳ ಮೇಲೆ ಮೇಲುಗೈ ಸಾಧಿಸಲು ಮೊದಲಾಗಿ ಪುಟ ಆರಂಭಿಸುವುದು ಜಾಣತನವಾಗುತ್ತದೆ.
UDAYAVANI
ಅಶೋಕ್‌ಕುಮಾರ್ ಎ

Monday, December 05, 2011

ನಿತ್ಯ ಏಪಲ್ ಬಳಸಿ


ನಿತ್ಯ ಏಪಲ್ ಬಳಸಿ
ನಮ್ಮ ಸಂಸದರು ಸದನದ ಕಲಾಪಗಳನ್ನು ನಡೆಸದೆ ಗದ್ದಲ ಎಬ್ಬಿಸುತ್ತಿದ್ದಾರೆ.ಕಲಾಪ ರಹಿತ ಸಂಸತ್ ಕಾಗದರಹಿತ ಸಂಸತ್ ಕೂಡಾ ಆಗಲಿ ಎಂಬ ಉದ್ದೇಶ ಹೊತ್ತು ಅವರುಗಳಿಗೆ ಐಪ್ಯಾಡ್ ಅಥವಾ ಸ್ಯಾಮ್‌ಸಂಗ್ ಗ್ಯಾಲಕ್ಸಿಯನ್ನು ಖರೀದಿಸಲು ಅವಕಾಶ ನೀಡಲಾಗಿದೆ.ಅವುಗಳ ಬಳಕೆಗೆ ತರಬೇತಿ ನೀಡಲೂ ವ್ಯವಸ್ಥೆಯಿದೆ.ಸಂಸದರು ಅವುಗಳನ್ನು ಬಳಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲವೆನ್ನುವುದು ಸಮಾಧಾನದ ವಿಷಯ.ಸಂಸತ್ತಿನ ಕೆಲವು ಭಾಗಗಳಲ್ಲಿ ವೈ-ಫೈ ಲಭ್ಯವಾಗಿಸಿ,ಅವರುಗಳು ಅಂತರ್ಜಾಲ ಸಂಪರ್ಕ ಬಳಸುವಂತೆ ಮಾಡಲಾಗುತ್ತಿದೆ.ಸದನದ ಕಲಾಪ ವಿವರಗಳು,ಪ್ರಶ್ನೋತ್ತರಗಳು,ವರದಿಗಳು ಇತ್ಯಾದಿಗಳ ಮುದ್ರಿತ ಪ್ರತಿ ನೀಡುವ ಕ್ರಮವಿದ್ದು,ನಿಧಾನವಾಗಿ ಆ ಕ್ರಮವನ್ನು ಕೈಬಿಟ್ಟು,ಡಿಜಿಟಲ್ ರೂಪದಲ್ಲಿ ಅವನ್ನು ಸಂಸದರಿಗೆ ಕಳುಹಿಸಲು ಯೋಜಿಸಲಾಗಿದೆ.ಐಪ್ಯಾಡ್ ನೀಡಿಕೆ ಆ ಉದ್ದೇಶದಿಂದಲೇ ಆಗಿದೆ.ರಾಜ್ಯಸಭೆಯ ಕೆಲ ಭಾಗಗಳಲ್ಲಿ ವೈ-ಫೈ ಈಗಾಗಲೇ ಲಭ್ಯವಿವೆ.ಸದನದ ಕಲಾಪವನ್ನೂ (ನಡೆದರೆ!)ಐಪ್ಯಾಡಿನಲ್ಲಿ ವೀಕ್ಷಿಸಬಹುದು.
ಮುಖ್ಯಮಂತ್ರಿ ಸದಾನಂದ ಗೌಡರು ತಮ್ಮ ಕಚೇರಿಯನ್ನು ಜನರಿಗೆ ದರ್ಶನ ಮಾಡಿಸುವ ನಿರ್ಧಾರ ಮಾಡಿರುವುದು ನಿಮಗೆ ಗೊತ್ತಿದೆ.http:karnataka.gov.in ಅಂತರ್ಜಾಲ ತಾಣದಲ್ಲಿ ಸಿಎಂಲೈವ್ ಕೊಂಡಿಯ ಮೇಲೆ ಕ್ಲಿಕಿಸಿದರೆ,ಮುಖ್ಯಮಂತ್ರಿಗಳ ಕಚೇರಿಯ ದರ್ಶನ ಭಾಗ್ಯ ಲಭಿಸುತ್ತದೆ.ಮುಖ್ಯಮಂತ್ರಿಗಳ ಮಾತು ಕೇಳಲಿನ್ನೂ ಸಮಯ ಬೇಕು.ಸದ್ಯ ಮುಖ್ಯ(ಮೂಕ?)ಮಂತ್ರಿಗಳ ನಗುಮುಖವನ್ನು ನೋಡುವ ಮಟ್ಟಿಗೆ ಪಾರದರ್ಶಕತೆ ಬಂದಿದ್ದರೂ,ಇದು ಸ್ವಾಗತಾರ್ಹವೆನ್ನುವುದರಲ್ಲಿ ಎರಡು ಮಾತಿಲ್ಲ.
-------------------------------
ಸೌರಶಕ್ತಿಯಿಂದ ಹಾರಬಲ್ಲ ವಿಮಾನ


ಬರ್ಟ್ರಾಂಡ್ ಪಿಕಾರ್ಡ್ ಅವರು ಸೌರಶಕ್ತಿಯನ್ನು ಬಳಸಿ,ಹಾರಬಲ್ಲ ಮಿನಿ ಗ್ಲೈಡರ್ ಅನ್ನು ನಿರ್ಮಿಸಿದ್ದಾರೆ.ಸದ್ಯ ಅದು ಮಧ್ಯಮ ಗಾತ್ರದ ಕಾರಿನ ತೂಕದ್ದಾಗಿದ್ದು,ಇಂಧನ ದಕ್ಷತೆ ರೈಟ್ ಸಹೋದರರ ಮೊದಲ ಹಾರುವ ವಾಹನಕ್ಕೆ ಸಮಾನವಾಗಿದೆ.ಇದು ಓರ್ವನ ಹಾರಾಟಕ್ಕೆ ಮಾತ್ರಾ ಬಳಸಬಹುದು.ಲೀಥಿಯಮ್ ಬ್ಯಾಟರಿಗಳನ್ನು ಬಳಸಿರುವ ಈ ಗ್ಲೈಡರ್,ನಾಲ್ಕು ಮೋಟಾರುಗಳನ್ನು ಬಳಸುತ್ತದೆ.ಜುಲೈನಲ್ಲಿ ಇಡಿ ದಿನ ಹಾರಾಡಿ,ತನ್ನ ಸಾಮರ್ಥ್ಯ ಮೆರೆಯಿತು.ಮುಂದಿನ ದಿನಗಳಲ್ಲಿ ದೊಡ್ಡ ವಿಮಾನಗಳನ್ನೂ ಸೌರಶಕ್ತಿ ಬಳಸಿ ಹಾರಾಟ ನಡೆಸಬಹುದು,ಹೆಚ್ಚು ಪ್ರಯಾಣಿಕರನ್ನೂ ಸಾಗಿಸಬಹುದು ಎನ್ನುವುದು ಪಿಕಾರ್ಡ್ ಅವರ ನಂಬಿಕೆಯಾಗಿದೆ.ಅಂದಹಾಗೆ,ಇದರಲ್ಲಿ ಕಂಪ್ಯೂಟರ್ ವ್ಯವಸ್ಥೆಯು,ಹಾರಾಟವನ್ನು ನಿರ್ವಹಿಸುತ್ತದೆ.
-------------------------------------------------
ನ್ಯಾಪ್‌ಸ್ಟರ್ ಇನ್ನು ಅಲಭ್ಯ
ನ್ಯಾಪ್‌ಸ್ಟರ್ ಅಂತರ್ಜಾಲ ತಾಣವು ಸಂಗೀತ ಕಡತಗಳನ್ನು ಜನರು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅನುವು ಮಾಡುತ್ತಿತ್ತು.1999ರಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ಅಂತರ್ಜಾಲದಲ್ಲಿ ಸಂಗೀತ ಕದತಗಳ ವಿನಿಮಯಕ್ಕಾಗಿ ಒದಗಿಸಿದಾಗ,ಸಂಗೀತ ಕಂಪೆನಿಗಳು ಗದ್ದಲ ಎಬ್ಬಿಸಿದುವು.ಸಂಗೀತ ಕಡತಗಳನ್ನು ಕಾಪಿರೈಟ್ ಕಾಯಿದೆ ಉಲ್ಲಂಘಿಸಿ,ವಿನಿಮಯ ಮಾಡಿಕೊಂಡರೆ,ತಮ್ಮ ಆದಾಯ ಕುಂಠಿತವಾಗುತ್ತದೆ ಎನ್ನುವ ಅವುಗಳ ವಾದ ಸಮರ್ಥನೀಯವೇ ಆಗಿತ್ತು,ನಂತರ ನ್ಯಾಪ್‍ಸ್ಟರ‍್ ಕೋಟಿನಿಂದ ನಿಷೇಧಕ್ಕೆ ಒಳಗಾಯಿತು.ನಂತರ ಬೆಸ್ಟ್ ಬೈ ಎನ್ನುವ ಕಂಪೆನಿಯು ನ್ಯಾಪ್‌ಸ್ಟರನ್ನು ಬಳಸಿಕೊಂಡು ನ್ಯಾಯಬದ್ಧ ಸಂಗೀತ ಕಡತಗಳ ವಿನಿಮಯಕ್ಕೆ ಅನುವು ಮಾಡಿಕೊಟ್ಟಿತು.ಇದೀಗ ರಾಪ್ಸಡಿ ತಾಣವು ಬೆಸ್ಟ್‌ಬೈ ಜತೆ ಒಪ್ಪಂದಕ್ಕೆ ಬಂದು ನ್ಯಾಪ್‌ಸ್ಟರ್ ಅನ್ನು ತನ್ನದಾಗಿಸಿಕೊಳ್ಳುವುದರೊಂದಿಗೆ ಅದು ಆನ್‌ಲೈನಿನಿಂದ ಮಾಯವಾಗುವ ದಿನ ಬಂದಿದೆ.
---------------------------------------------------
ಗೂಗಲ್ ಮ್ಯಾಪ್:ಕಟ್ಟಡದ ಒಳಭಾಗದ ದರ್ಶನ
ಕಟ್ಟಡಗಳನ್ನು ಮೇಲಿನಿಂದ ಮತ್ತು ಹೊರಭಾಗದಿಂದ ವೀಕ್ಷಿಸಲು ಗೂಗಲ್ ಮ್ಯಾಪ್ ಅವಕಾಶ ನೀಡಿತ್ತು.ಈಗದು,ದೊಡ್ದ ಕಟ್ಟಡಗಳ ಒಳಗೂ ದರ್ಶನ ಮಾಡಿಸಲು ಆರಂಭಿಸಿದೆ.ಗೂಗಲ್ ಮ್ಯಾಪಿನ ಆರನೇ ಆವೃತ್ತಿಯ ಆಂಡ್ರಾಯಿಡ್ ತಂತ್ರಾಂಶವನ್ನು ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಿಕೊಂಡರೆ ಇದು ಸಾಧ್ಯ.ಆಯ್ದ ವಾಣಿಜ್ಯ ಮತ್ತು ಸಾರ್ವಜನಿಕ ಕಟ್ಟಡಗಳ ಒಳಭಾಗಗಳನ್ನು ಚಿತ್ರೀಕರಿಸಲು ಗೂಗಲ್ ಕಟ್ಟಡಗಳ ಮಾಲಕರ ಜತೆ ಒಪ್ಪಂದ ಮಾಡಿಕೊಂಡಿದೆ.ಅವರುಗಳು ತಾವೇ ಚಿತ್ರೀಕರಿಸಿ,ಅದನ್ನು ಅಪ್ಲೋಡ್ ಮಾಡಲೂ ಅವಕಾಶವಿದೆ.ವಿಮಾನ ನಿಲ್ದಾಣಗಳಂತಹ ಕಟ್ಟಡಗಳು ಇವುಗಳಲ್ಲಿ ಸೇರಿವೆ.ಸ್ಯಾನ್‌ಫ್ರಾನ್ಸಿಸ್ಕೋ ಮತ್ತು ಚಿಕಾಗೋಗಳು ಇದರಲ್ಲಿ ಸೇರಿವೆ.ಸದ್ಯ ಹೆಚ್ಚಿನ ಕಟ್ಟಡಗಳು ಅಮೆರಿಕಾದ್ದೇ ಆದರೂ ಮುಂದೆ ಜಪಾನ್‌ನ ಕಟ್ಟಡಗಳನ್ನು ತೋರಿಸುವ ಯೋಚನೆ ಗೂಗಲ್‌ದ್ದು.
----------------------------------------
ಜತೆಗಾರನಾಗುವ ರೊಬೋಟ್
ವೃದ್ಧರು ಅಥವಾ ಅಶಕ್ತರ ಜತೆಗಾರನಾಗಿದ್ದು,ಅವರ ದೈನಂದಿನ ಕೆಲಸಗಳಲ್ಲಿ ಅವರಿಗೆ ನೆರವಾಗಬಲ್ಲ ರೊಬೋಟುಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಈಗ ಪ್ರಗತಿಯಲ್ಲಿದೆ.ಅಮ್‌ಸ್ಟರ್ಡ್ಯಾಮ್ ವಿಶ್ವವಿದ್ಯಾಲಯ,ಸಿಯೆನ್ನಾ ವಿಶ್ವವಿದ್ಯಾಲಯಗಳು ಸೇರಿ ಈ ಮೂರು ವರ್ಷದ ಯೋಜನೆ ಹಮ್ಮಿಕೊಂಡಿದ್ದು,ಅಶಕ್ತರ ಅವಶ್ಯಕತೆಗಳು ಏನು ಮತ್ತು ಅವರ ಜತೆಗಾರ ಹೇಗೆ ವರ್ತಿಸಬೇಕು ಮುಂತಾದ ವಿವರಗಳನ್ನು ವಿವಿಯ ಸಂಶೋಧಕರು ಕಲೆ ಹಾಕುತ್ತಿದ್ದಾರೆ.ಈ ಯೋಜನೆಯ ಬಜೆಟ್ ಸುಮಾರು ಐದು ದಶಲಕ್ಷ ಯುರೋಗಳಾಗಿವೆ.
--------------------------------------------
ಫೇಸ್‌ಬುಕ್ ಜೋಳಿಗೆಗೆ ಗೊವಾಲ್ಲಾ
ಗೊವಾಲ್ಲಾ ಎನ್ನುವುದು ಅಂತರ್ಜಾಲ ತಾಣ.ಇದು ಜನರು ಇರುವ ಸ್ಥಳ ಯಾವುದು ಎನ್ನುವುದನ್ನು ತಿಳಿಸಲು ಬಳಸಲಾಗುತ್ತದೆ.ಇದನ್ನೀಗ ಫೇಸ್‌ಬುಕ್ ಸಾಮಾಜಿಕ ಜಾಲತಾಣ ತನ್ನದಾಗಿಸಿಕೊಳ್ಳುವುದರಲ್ಲಿದೆ.ಗೊವಾಲ್ಲಾ ನಡೆಸುವ ಕಂಪೆನಿಗೆ ಫೇಸ್‌ಬುಕ್ ಎಷ್ಟು ಹಣ ಪಾವತಿಸಲಿದೆ ಎನ್ನುವುದು ಸ್ಪಷ್ಟವಿಲ್ಲ.ಆದರೆ ಇನ್ನು ಗೊವಾಲ್ಲಾ ಪೇಸ್‌ಬುಕ್ ಭಾಗವಾಗಲಿದೆ.ಫೋರ್‌ಸ್ಕ್ವೇರ್ ಅನ್ನುವ ತಾಣವೂ ಗೊವಾಲ್ಲಾಗೆ ಪೈಪೋಟಿ ನೀಡುತ್ತಿತ್ತು.
---------------------------------
ಲಿಬಿಯಾ:ತಂತ್ರಜ್ಞಾನ (ದು)ರ್ಬಳಕೆ
ಲಿಬಿಯಾದ ಗಡಾಪಿ ಮಹಾಶಯ ತಂತ್ರಜ್ಞಾನದ ಪೂರ್ಣ ಲಾಭ ಪಡೆದುಕೊಳ್ಳುವುದರಲ್ಲಿ ಮುಂದಿದ್ದನಂತೆ.ಆತ ತನ್ನ ವಿರೋಧಿಗಳ ಮಿಂಚಂಚೆ,ಫೋನುಕರೆಗಳ ಮೇಲೆ ಕಣ್ಣಿಡಲು ಫ್ರಾನ್ಸಿನ ಕಂಪೆನಿಯೊಂದು ಒದಗಿಸಿದ ತಂತ್ರಜ್ಞಾನವನ್ನು ಬಳಸುತ್ತಿದ್ದನೆಂದು ವಿಕಿಲೀಕ್ ವರದಿ ಮಾಡಿದೆ.ಕರೆಗಳ ಅನುವಾದ ಮಾಡಿ,ಅವುಗಳ ಲಿಪ್ಯಂತರ ಮಾಡುವ ತಂತ್ರಜ್ಞಾನವೂ ಆತನಿಗೆ ಲಭ್ಯವಿತ್ತು.
----------------------------------
ಸ್ಮಾರ್ಟ್‌ಪೋನ್ ಮೂಲಕ ಗೂಡಚರ್ಯೆ?
ಕ್ಯಾರಿಯರ್ ಐಕ್ಯೂ ಎನ್ನುವ ತಂತ್ರಾಂಶ ಸ್ಮಾರ್ಟ್‌ಫೋನುಗಳಲ್ಲು ಅಳವಡಿಸಿರುವುದು ದೂರದಿಂದಲೇ ಸಹಾಯ ನೀಡಲೋಸುಗ.ಬಳಕೆದಾರನಿಗೆ ಪೋನು ಬಳಕೆಯಲ್ಲಿ ಸಮಸ್ಯೆಯಿದ್ದರೆ,ಆನ್‌ಲೈನ್ ಮೂಲಕ ರಿಪೇರಿ ಮಾಡಲು ಅನುವು ಮಾಡುವುದಾಗಿದೆ.ಇತ್ತೀಚೆಗೆ ಓರ್ವ ಮಹಾಶಯ ಯುಟ್ಯೂಬ್ ವಿಡಿಯೋ ತುಣುಕಿನಲ್ಲಿ,ಈ ತಂತ್ರಾಂಶ ಅದು ಹೇಗೆ ತನ್ನ ಪ್ರತಿ ಕೀಲಿಮಣೆ ಅದುಮಿಕೆಯನ್ನು ನೆನಪಿಟ್ಟು,ತಾನು ಭೇಟಿ ನೀಡುವ ತಾಣಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ ಎನ್ನುವುದನ್ನು ಸೋದಾಹರಣ ವಿಡಿಯೋದ ಮೂಲಕ ವಿವರಿಸಿದ್ದೇ ಹಾಹಾಕಾರ ಎದ್ದಿದೆ.ಈ ತಂತ್ರಾಂಶವನ್ನು ಒಳಗೊಂಡ ಫೋನುಗಳ ತಯಾರಕರ ವಿರುದ್ಧ ಖಾಸಗಿತನದ ಬಗ್ಗೆ ತಲೆಕೆಡಿಸಿಕೊಳ್ಳುವ ಮಂದಿ ಕೋರ್ಟಿನ ಮೆಟ್ಟಲೂ ತುಳಿದಿದ್ದಾರೆ.
Udayavani

ಅಶೋಕ್‌ಕುಮಾರ್ ಎ